ಜಯಲಲಿತಾ 'ಕೊಹಿನೂರ್ ವಜ್ರ': ರಜನಿಕಾಂತ್
ಚೆನ್ನೈ, ಡಿಸೆಂಬರ್ 12: ಪುರುಷ ಪ್ರಧಾನ ಸಮಾಜದ ಎಲ್ಲ ತೊಂದರೆಗಳನ್ನು ಮೀರಿ ಬೆಳೆದಿದ್ದ ಜಯಲಲಿತಾ ಅವರು 'ಕೊಹಿನೂರು ವಜ್ರದ ಥರ' ಎಂದು ಸೂಪರ್ ಸ್ಟಾರ್ ರಜನಿಕಾಂತ್ ಭಾನುವಾರ ಬಣ್ಣಿಸಿದ್ದಾರೆ. ದಕ್ಷಿಣ ಭಾರತ ಕಲಾವಿದರ ಒಕ್ಕೂಟ ಭಾನುವಾರ ಆಯೋಜಿಸಿದ್ದ ಜಯಲಲಿತಾ ಹಾಗೂ ಚೋ ರಾಮಸ್ವಾಮಿ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
1996ರ ತಮಿಳುನಾಡು ವಿಧಾನಸಭೆ ಚುನಾವಣೆ ವೇಳೆ ನಾನು ನೀಡಿದ್ದ ಹೇಳಿಕೆಯಿಂದ ಅವರಿಗೆ ನೋವಾಗಿತ್ತು. "ನಾನು ಆಕೆಗೆ ನೋವು ಮಾಡಿದ್ದೆ. ಅವರ ಪಕ್ಷ ಸೋಲುವುದಕ್ಕೆ ಮುಖ್ಯ ಕಾರಣನಾಗಿದ್ದೆ" ಎಂದು ಎಐಎಡಿಎಂಕೆ ಸರಕಾರದ ವಿರುದ್ಧದ ತಮ್ಮ ಹೇಳಿಕೆಯನ್ನು ಪ್ರಸ್ತಾವಿಸಿದರು.[ದುಬಾರಿ ವಜ್ರ 'ಕೊಹಿನೂರು' ಏನಿದರ ತಕರಾರು]
ಆ ಚುನಾವಣೆ ವೇಳೆ ರಜನಿ, ಜಯಲಲಿತಾ ಅವರ ಎಐಎಡಿಎಂಕೆ ಮತ್ತೆ ಅಧಿಕಾರಕ್ಕೆ ಬಂದರೆ ಆ ದೇವರು ಕೂಡ ತಮಿಳುನಾಡನ್ನು ಕಾಪಾಡಲಾರ ಎಂಬ ಹೇಳಿಕೆ ನೀಡಿದ್ದರು. ಆ ಸಲ ಡಿಎಂಕೆ ಹಾಗೂ ತಮಿಳ್ ಮಾನಿಲ ಕಾಂಗ್ರೆಸ್ ಒಟ್ಟಾಗಿ, ಆಡಳಿತ ವಿರೋಧಿ ಅಲೆಯಲ್ಲಿ ಅಭೂತಪೂರ್ವವಾದ ಗೆಲುವು ಸಾಧಿಸಿದ್ದವು.
ಆದರೆ, ಆ ಘಟನೆ ನಂತರ ಜಯಲಲಿತಾ ತಾವೇನು ಅನ್ನೋದನ್ನು ಸಾಬೀತು ಮಾಡಿದರು. ಆಕೆ ನಾಯಕಿಯಾಗಿ ಚಿನ್ನದಂಥ ಹೃದಯ ಇರುವವರಾಗಿದ್ದರು ಎಂದು ರಜನಿ ಹೇಳಿದರು. ಎಂಜಿಆರ್ ಅವರ ನಿಧನದ ನಂತರ ಪಕ್ಷ ನಡೆಸುವುದು ಸುಲಭ ಇರಲಿಲ್ಲ. ಅದರೆ ಜಯಲಲಿತಾ ತಮ್ಮ ಗುರುಗಳನ್ನು ಮೀರಿಸಿದ ಸಾಧನೆ ಮಾಡಿದರು ಎಂದು ಹೇಳಿದರು.[ಖ್ಯಾತ ಅಂಕಣಕಾರ, ಜಯಾ ಹಿತೈಷಿ ಚೋ ರಾಮಸ್ವಾಮಿ ಇನ್ನಿಲ್ಲ]
ಎಅರಡನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡು, ಇಪ್ಪತ್ತು ವರ್ಷದ ನಂತರ ತಾಯಿಯನ್ನು ಕಳೆದುಕೊಂಡು, ಆಕೆ ಅನೇಕ ಸಮಸ್ಯೆಗಳನ್ನು ಎದುರಿಸಿದರು. 'ಎಂಜಿಆರ್ ಸ್ಮಾರಕದ ಬಳಿ ಕೊಹಿನೂರ್ ವಜ್ರದ ರೀತಿ ಜಯಲಲಿತಾ ವಿರಮಿಸಿದ್ದಾರೆ. ಜನರ ಪ್ರೀತಿ ಮತ್ತು ಅಂತಃಕರಣವನ್ನು ಪಡೆಯುತ್ತಿದ್ದಾರೆ' ಎಂದು ರಜನಿ ಹೊಗಳಿದರು.
ಸೆಪ್ಟೆಂಬರ್ 22ರಂದು ಅನಾರೋಗ್ಯದಿಂದ್ ಆಸ್ಪತ್ರೆ ಸೇರಿದ್ದ ಜಯಲಲಿತಾ, ಡಿಸೆಂಬರ್ 4ರಂದು ಹೃದಯ ಸ್ಥಂಭನವಾಗಿತ್ತು. ಮರುದಿನ ನಿಧನರಾದರು.