ಧನುಷ್ ಪೋಷಕತ್ವ ಪ್ರಕರಣ, ಅರ್ಜಿ ವಜಾ ಮಾಡಿದ ಮದುರೈ ಪೀಠ
ಚೆನ್ನೈ, ಏಪ್ರಿಲ್ 21: ನಟ ಧನುಷ್ ತಮ್ಮ ಮಗ ಎಂದು ಹಿರಿಯ ದಂಪತಿಯೊಬ್ಬರು ಹಾಕಿದ್ದ ಅರ್ಜಿಯನ್ನು ಚೆನ್ನೈ ಹೈ ಕೋರ್ಟ್ ನ ಮದುರೈ ಪೀಠವು ಶುಕ್ರವಾರ ವಜಾ ಮಾಡಿದೆ. ಡಿಎನ್ ಎ ಪರೀಕ್ಷೆ ಮಾಡಿಸಲು ನಿರಾಕರಿಸಿದ್ದ ಧನುಷ್, ಇದೀಗ ನಿರಾಳರಾಗಿದ್ದಾರೆ. ಮದುರೈ ಮೂಲದ ದಂಪತಿ ನಟ ಧನುಷ್ ತಮ್ಮ ಮಗ, ಆತನಿಂದ ಜೀವನ ನಿರ್ವಹಣೆಗೆ ಅನುಕೂಲ ಮಾಡಿಸಿ ಕೊಡಬೇಕು ಎಂದು ಅರ್ಜಿ ಹಾಕಿದ್ದರು.
65 ವರ್ಷದ ಕದಿರೇಶನ್ ಮತ್ತು ಅವರ ಪತ್ನಿ ಸ್ಲಲಿಸಿದ್ದ ಅರ್ಜಿಯಲ್ಲಿ, ಧನುಷ್ ನಮ್ಮ ಮಗ 2002ರವರೆಗೆ ನಾವೇ ಆತನನ್ನು ಸಾಕಿದ್ದೇವೆ. ನಮ್ಮ ಜೀವನ ನಿರ್ವಹಣೆಗಾಗಿ ಆತನಿಂದ ತಿಂಗಳಿಗೆ 65 ಸಾವಿರ ರುಪಾಯಿ ಕೊಡಿಸಬೇಕು ಎಂದಿದ್ದರು. ಆ ನಂತರ ಕೋರ್ಟ್ ಸೂಚನೆಯಂತೆ ಗುರುತುಗಳ ಪತ್ತೆ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆಯನ್ನು ಮಾಡಲಾಗಿತ್ತು.[ನಟ ಧನುಷ್ 'ಜನ್ಮರಹಸ್ಯ' ಮಾರ್ಚ್ 9ರ ನಂತರ ತೀರ್ಪು!]
ಆದರೆ, ಆ ದಂಪತಿ ಹೇಳಿದಂಥ ಯಾವುದೇ ಗುರುತುಗಳು ಇಲ್ಲ ಎಂದು ಮದುರೈ ವೈದ್ಯಕೀಯ ಕಾಲೇಜು ತನ್ನ ವರದಿಯಲ್ಲಿ ತಿಳಿಸಿತ್ತು. "ಧನುಷ್ ಬಗ್ಗೆ ದಂಪತಿ ಹೇಳಿದಂತೆ ಮಚ್ಚೆ ಹಾಗೂ ಗಾಯದ ಗುರುತು ಇಲ್ಲ. ಮಚ್ಚೆಯನ್ನಾದರೆ ತೆಗೆಯುವುದಕ್ಕೆ ಸಾಧ್ಯತೆಯಿದೆ. ಆದರೆ ಗಾಯದ ಗುರುತನ್ನು ಪ್ಲಾಸ್ಟಿಕ್ ಸರ್ಜರಿಯಿಂದ ಕಡಿಮೆ ಮಾಡಬಹುದೇ ವಿನಾ ತೆಗೆದುಹಾಕಲು ಆಗಲ್ಲ" ಎಂದು ವರದಿಯಲ್ಲಿ ತಿಳಿಸಿತ್ತು. ತಿಂಗಳು ಕಾಲ ವಿಚಾರಣೆ ನಂತರ ಮದುರೈ ಪೀಠವು ಪ್ರಕರಣವನ್ನು ವಜಾ ಮಾಡಿದೆ.[ಮೈಮೇಲಿನ ಮಚ್ಚೆಗಳನ್ನು ನಟ ಧನುಷ್ ಅಳಿಸಿಕೊಂಡಿದ್ದೇಕೆ?]