ಅಂತೂ ಧೈರ್ಯ ಮಾಡಿ ಜಯಾ ಕುರ್ಚಿಯಲ್ಲಿ ಕುಳಿತ ಪನ್ನೀರ್!
ಚೆನ್ನೈ, ಡಿಸೆಂಬರ್ 10 : ಅಂತೂಇಂತೂ ಜಯಲಲಿತಾ ಕುರ್ಚಿಯ ಮೇಲೆ ಕುಳಿತುಕೊಳ್ಳುವ ಧೈರ್ಯ ಮಾಡಿದ್ದಾರೆ ತಮಿಳುನಾಡಿನ ಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂ. ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದ ನಂತರ ಮೊದಲ ಬಾರಿಗೆ ಸಂಪುಟ ಸಭೆ ನಡೆಸಿದ ಪನ್ನೀರ್ ಸೆಲ್ವಂ ಜಯಲಲಿತಾ ಕುಳಿತುಕೊಳ್ಳುತ್ತಿದ್ದ ಕುರ್ಚಿಯಲ್ಲಿ ಮೊದಲ ಬಾರಿಗೆ ಕುಳಿತರು.
ಹಿಂದೆ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾಗಲೂ ಜಯಲಲಿತಾ ಅವರ ಫೋಟೋವನ್ನು ಟೇಬಲ್ ಮೇಲಿಟ್ಟೇ ಸಂಪುಟ ಸಭೆ ಪನ್ನೀರ್ ಸೆಲ್ವಂ ನಡೆಸುತ್ತಿದ್ದರು. ಜಯಲಲಿತಾ ಅವರ ಫೋಟೋ ಟೇಬಲ್ ಮೇಲಿತ್ತಾದರೂ, ಕುರ್ಚಿಯಲ್ಲೇ ಕುಳಿತು ಸಭೆಯನ್ನು ನಡೆಸಿ ಇತಿಹಾಸದ ಪುಟದಲ್ಲಿ ದಾಖಲಾಗಿದ್ದಾರೆ.

ಅದೇನು ಸ್ವಾಮಿನಿಷ್ಠೆಯ ಪರಾಕಾಷ್ಠೆಯೋ, 'ಅಮ್ಮ' ಏನು ಮಾಡಿಬಿಡುತ್ತಾರೆಂಬ ಭಯವೋ, ಅಥವಾ ವಿಶ್ವಾಸದ ಕೊರತೆಯೋ... ಪನ್ನೀರ್ ಸೆಲ್ವಂ ಅವರು ಹಿಂದೆರಡು ಬಾರಿ ಮುಖ್ಯಮಂತ್ರಿಯಾಗಿದ್ದಾಗ ಯಾರು ಎಷ್ಟೇ ಹೇಳಿದರೂ ಜಯಲಲಿತಾ ಅವರ ಕುರ್ಚಿಯನ್ನು ಅಲಂಕರಿಸಲು ಸಾರಾಸಗಟಾಗಿ ನಿರಾಕರಿಸಿದ್ದರು.

ಆದರೆ, ಈ ಬಾರಿ ಹಾಗಾಗಲಿಲ್ಲ. ಆರು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರ ಕುರ್ಚಿಯಲ್ಲಿ ಕುಳಿತುಕೊಳ್ಳಲು ಪನ್ನೀರ್ ಸೆಲ್ವಂ ಹಿಂಜರಿಯಲಿಲ್ಲ. ಬದಲಾಗಿ, ಧೈರ್ಯವಾಗಿ ಅಧಿಕಾರಿದ ಸಂಕೇತವಾದ ಆ ಕುರ್ಚಿಯಲ್ಲಿ ಕುಳಿತುಕೊಂಡು ಸಭೆ ನಡೆಸಿದರು. ಅಷ್ಟಾದರೂ ಜಯಲಲಿತಾ ಫೋಟೋ ಟೇಬಲ್ ಮೇಲೆ ರಾರಾಜಿಸುತ್ತಿತ್ತು.

ಸಭೆ ಆರಂಭಿಸುವ ಮುನ್ನ ಡಿಸೆಂಬರ್ 5ರಂದು ಅಪೋಲೋ ಆಸ್ಪತ್ರೆಯಲ್ಲಿ ಅಸುನೀಗಿದ ಜಯಲಲಿತಾ ಅವರ ಬೃಹತ್ ಭಾವಚಿತ್ರಕ್ಕೆ ಪುಷ್ಪವನ್ನು ಪನ್ನೀರ್ ಸೆಲ್ವಂ ಅರ್ಚಿಸಿದರು. ಈ ಸಭೆಯಲ್ಲಿ ಜಯಲಲಿತಾ ಅವರ ನೆನಪಿನಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಸ್ಮಾರಕದ ಬಗ್ಗೆ ಚರ್ಚೆ ನಡೆಸಲಾಯಿತು.












Click it and Unblock the Notifications