ಎಐಡಿಎಎಂಕೆ ಪಕ್ಷದ ಮೇಲೆ ಪಳನಿಸ್ವಾಮಿ ಹಿಡಿತ: ಪನ್ನೀರ್ ಸೆಲ್ವಂ ಉಚ್ಛಾಟನೆ
ಚೆನ್ನೈ, ಜುಲೈ 11: ಎಐಡಿಎಂಕೆ ಪಕ್ಷದ ಎಲ್ಲಾ ಹುದ್ದೆಗಳಿಂದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂ ಅವರನ್ನು ಉಚ್ಛಾಟನೆ ಮಾಡಲಾಗಿದೆ. ಎಡಪ್ಪಾಡಿ ಪಳನಿಸ್ವಾಮಿ ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷದ ಮೇಲೆ ಹಿಡಿತ ಸಾಧಿಸಿದ ನಂತರ ಈ ನಿರ್ಣಯ ಕೈಗೊಳ್ಳಲಾಗಿದೆ.
ಪನ್ನೀರ್ ಸೆಲ್ವಂ ಆಪ್ತರಾದ ಹಿರಿಯ ನಾಯಕ ಜೆಸಿಡಿ ಪ್ರಭಾಕರ್, ಆರ್ ವೈತಿಲಿಂಗಂ ಮತ್ತು ಪಿಎಚ್ ಮನೋಜ್ ಪಾಂಡಿಯನ್ ಕೂಡ ಎಐಎಡಿಎಂಕೆಯಿಂದ ಉಚ್ಛಾಟನೆಗೊಂಡಿದ್ದಾರೆ.
ಚೆನ್ನೈನ ವಣಾಗರಂನಲ್ಲಿ ನಡೆಯುತ್ತಿರುವ ಎಐಡಿಎಂಕೆ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಇದಕ್ಕೂ ಮೊದಲು ಮದ್ರಾಸ್ ಹೈಕೋರ್ಟ್ ಎಐಡಿಎಂಕೆ ಸಾಮಾನ್ಯ ಮಂಡಳಿ ಸಭೆ ನಡೆಸಲು ಹಸಿರು ನಿಶಾನೆ ತೋರಿಸಿದೆ.
ಹಂಗಾಮಿ ಪ್ರಧಾನ ಕಾರ್ಯದರ್ಶಿಯನ್ನು ಆಯ್ಕೆ ಮಾಡಲು, ಸಂಯೋಜಕ ಮತ್ತು ಜಂಟಿ ಸಂಯೋಜಕ ಹುದ್ದೆಗಳನ್ನು ರದ್ದುಗೊಳಿಸಲು ಕರೆದಿದ್ದ ಸಾಮಾನ್ಯ ಸಭೆಯನ್ನು ರದ್ದುಗೊಳಿಸುವಂತೆ ಕೋರಿ ಓ ಪನ್ನೀರ್ ಸೆಲ್ವಂ ಮದ್ರಾಸ್ ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದರು. ಹೈಕೋರ್ಟ್ ಈ ಮನವಿ ತಿರಸ್ಕರಿಸಿ ಸಾಮಾನ್ಯ ಸಭೆ ನಡೆಸಲು ಅನುಮತಿ ನೀಡಿತ್ತು, ಮೊದಲು ಕೋರ್ಟ್ನಲ್ಲಿ ಹಿನ್ನಡೆ ಅನುಭವಿಸಿದ ನಂತರ ಪನ್ನೀರ್ ಸೆಲ್ವಂ ಈಗ ಪಕ್ಷದ ಮೇಲಿನ ಹಿಡಿತ ಕೂಡ ಕಳೆದುಕೊಂಡಿದ್ದಾರೆ.
ಎಐಎಡಿಎಂಕೆ ಜನರಲ್ ಕೌನ್ಸಿಲ್ ಸಭೆಯಲ್ಲಿ ಇಪಿಎಸ್ ಎಂದೂ ಕರೆಯಲ್ಪಡುವ ಇ ಪಳನಿಸ್ವಾಮಿ ಅವರನ್ನು ಹಂಗಾಮಿ ಪ್ರಧಾನ ಕಾರ್ಯದರ್ಶಿ ಎಂದು ಘೋಷಿಸಿತು.
ಸಾಮಾನ್ಯ ಸಭೆಗೂ ಮೊದಲು ಉಭಯ ನಾಯಕರ ಬೆಂಬಲಿಗರ ನಡುವೆ ಘರ್ಷಣೆ ನಡೆದಿದೆ ಎನ್ನಲಾಗಿದೆ. ಪನ್ನೀರ್ ಸೆಲ್ವಂ ಬೆಂಬಲಿಗರು ಎಐಎಡಿಎಂಕೆ ಕಚೇರಿಗೆ ನುಗ್ಗಿ ಪಳನಿಸ್ವಾಮಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಪನ್ನೀರ್ ಸೆಲ್ವಂ ಬಣದ ಕಾರ್ಯಕರ್ತರು ನೂತನ ಪ್ರಧಾನ ಕಾರ್ಯದರ್ಶಿ ಪಳನಿ ಸೆಲ್ವಂ ಚಿತ್ರಕ್ಕೆ ಚಪ್ಪಲಿಯಿಂದ ಹೊಡೆಯುತ್ತಿರುವ ದೃಶ್ಯಗಳು ಕೂಡ ಕಂಡುಬಂದಿವೆ.
ಉಚ್ಛಾಟಿತ ಬಳಿಕ ಪನೀರ್ಸೆಲ್ವಂ ಅವರು ಎಡಪ್ಪಾಡಿ ಪಳನಿಸ್ವಾಮಿ ಅವರನ್ನು ಪಕ್ಷದಿಂದ ತೆಗೆದುಹಾಕುತ್ತಿರುವುದಾಗಿ ಹೇಳಿದ್ದಾರೆ. ಪಕ್ಷದ 1.5 ಕೋಟಿ ಕಾರ್ಯಕರ್ತರಿಂದ ಸಂಯೋಜಕರಾಗಿ ಆಯ್ಕೆಯಾಗಿರುವುದರಿಂದ ನ್ಯಾಯಾಲಯದ ಮೊರೆ ಹೋಗುವುದಾಗಿ ಒಪಿಎಸ್ ಹೇಳಿದ್ದಾರೆ.
2017ರಲ್ಲಿ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ನಿಧನದ ನಂತರ ಪಕ್ಷದ ಮೇಲೆ ಹಿಡಿತ ಸಾಧಿಸಲು, ಅವರ ಉತ್ತರಾಧಿಕಾರಿ ಎಂದು ಬಿಂಬಿಸಿಕೊಳ್ಳಲು ಇ ಪಳನಿಸ್ವಾಮಿ ಮತ್ತು ಒ ಪನ್ನೀರ್ ಸೆಲ್ವಂ ನಡುವೆ ತಿಕ್ಕಾಟ ಆರಂಭವಾಗಿತ್ತು. ಜಯಲಲಿತಾ ಮರಣದ ನಂತರ ಪನ್ನೀರ್ ಸೆಲ್ವಂ ಮುಖ್ಯಮಂತ್ರಿಯಾಗಿದ್ದರು, ನಂತರ ಪಳನಿಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಮೇ 2021ರಲ್ಲಿ ನಡೆದ ಚುನಾವಣೆಯಲ್ಲಿ ಎಐಡಿಎಂಕೆ ಅಧಿಕಾರ ಕಳೆದುಕೊಂಡಿತು.
ದಿವಂಗತ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಆಪ್ತರಾಗಿದ್ದ ಪನ್ನೀರ್ ಸೆಲ್ವಂ ಜಯಲಲಿತಾ ಜೈಲಿಗೆ ಹೋಗಿದ್ದಾಗ ಮುಖ್ಯಮಂತ್ರಿಯಾಗಿ ಆಳ್ವಿಕೆ ನಡೆಸಿದ್ದರು. 2001-2002, 2014-2015 ಮತ್ತು 2016-2017ರಲ್ಲಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರು.
Recommended Video