'100 ಕೋಟಿ ವಸೂಲಿ ಮಾಡಿರುವ 'ಸರ್ಕಾರ್' ಸಿನಿಮಾ ಭಯೋತ್ಪಾದನೆ ಕೃತ್ಯಕ್ಕೆ ಸಮ'
ಚೆನ್ನೈ, ನವೆಂಬರ್ 8: ನಟ ವಿಜಯ್ ಅಭಿನಯದ ತಮಿಳು ಸಿನಿಮಾ 'ಸರ್ಕಾರ್' ಭಯೋತ್ಪಾದನೆ ಚಟುವಟಿಕೆಗೆ ಸಮ. ಈ ಸಿನಿಮಾ ಮೂಲಕ ಸಮಾಜದಲ್ಲಿ ಹಿಂಸಾಚಾರಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ. ಆದ್ದರಿಂದ ಜನರನ್ನು ಹಿಂಸಾಚಾರಕ್ಕೆ ಪ್ರಚೋದಿಸುವ ಭಯೋತ್ಪಾದನಾ ಚಟುವಟಿಕೆಗಿಂತ ಇದೇನೂ ಕಮ್ಮಿ ಇಲ್ಲ ಎಂದಿದ್ದಾರೆ ತಮಿಳುನಾಡಿನ ಕಾನೂನು ಸಚಿವ ಷಣ್ಮುಗಂ.
ನಟ ವಿಜಯ್ ಹಾಗೂ ಚಿತ್ರ ತಂಡದ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬೆದರಿಕೆ ಹಾಕಿರುವ ಷಣ್ಮುಗಂ, ಪ್ರಜಾತಾಂತ್ರಿಕ ರೀತಿಯಲ್ಲಿ ಆಯ್ಕೆ ಆದ ಸರಕಾರವನ್ನು ಕೆಡವಲು ಈ ಸಿನಿಮಾ ಮೂಲಕ ಪ್ರಯತ್ನಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಕ್ಷೇಪಾರ್ಹ ದೃಶ್ಯವನ್ನು ತೆಗೆಯಲಿಲ್ಲ ಅಂದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮತ್ತೊಬ್ಬ ಸಚಿವರಾದ ಕಡಂಬೂರು ಸಿ.ರಾಜು ಬುಧವಾರವಷ್ಟೇ ಹೇಳಿದ್ದರು. ಕ್ರಮ ತೆಗೆದುಕೊಳ್ಳುವ ವಿಚಾರವಾಗಿ ಮುಖ್ಯಮಂತ್ರಿ ಎಡಪ್ಪಡಿ ಪಳನಿಸ್ವಾಮಿ ಅವರ ಜತೆ ಚರ್ಚೆ ನಡೆಸುವುದಾಗಿ ಹೇಳಿದ್ದರು.

ತಮಿಳುನಾಡಿನ ಆರೋಗ್ಯ ಇಲಾಖೆಯಿಂದ ಈಗಾಗಲೇ ಚಿತ್ರ ನಿರ್ದೇಶಕ ಎ.ಆರ್.ಮುರುಗದಾಸ್ ಗೆ, ನಿರ್ಮಾಪಕರಿಗೆ ಹಾಗೂ ಧೂಮಪಾನ ಪ್ರೋತ್ಸಾಹಿಸಿದ್ದಾರೆ ಎಂಬ ಕಾರಣಕ್ಕೆ ನಟ ವಿಜಯ್ ಗೆ ನೋಟಿಸ್ ನೀಡಲಾಗಿದೆ. ಪೋಸ್ಟರ್ ನಲ್ಲಿ ಸಿಗಾರ್ ಸೇದುತ್ತಿರುವ ವಿಜಯ್ ಚಿತ್ರ ಇರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.
'ಸರ್ಕಾರ್' ಸಿನಿಮಾ ಬಿಡುಗಡೆಯಾದ ಎರಡೇ ದಿನದಲ್ಲಿ 100 ಕೋಟಿ ರುಪಾಯಿ ವಸೂಲಿ ಮಾಡಿದೆ. ದಿವಂಗತ ಮುಖ್ಯಮಂತ್ರಿ ಜೆ.ಜಯಲಲಿತಾ ಜಾರಿಗೆ ತಂದಿದ್ದ ಯೋಜನೆಗಳ ಬಗ್ಗೆ ಟೀಕೆ ಮಾಡುವ ದೃಶ್ಯಗಳನ್ನು ಹೊಂದಿರುವ ಕಾರಣಕ್ಕೆ ಸಮಸ್ಯೆ ಎದುರಾಗಿದೆ. ಎಐಎಡಿಎಂಕೆ ಕಾರ್ಯಕರ್ತರು ಮದುರೈನಲ್ಲಿ ಮಲ್ಟಿಪ್ಲೆಕ್ಸ್ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ. ಆಕ್ಷೇಪಾರ್ಹ ಸಂಭಾಷಣೆ ಹಾಗೂ ದೃಶ್ಯ ತೆಗೆಯುವ ತನಕ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದಿದ್ದಾರೆ.
ಇಂಥ ರಾಜಕೀಯ ದೃಷ್ಟಿಕೋನ ಇರುವ ದೃಶ್ಯಗಳಿಗಾಗಿ ವಿಜಯ್ ಅಭಿನಯದ ಸಿನಿಮಾ ಸಮಸ್ಯೆ ಎದುರಿಸುತ್ತಿರುವುದು ಇದೇ ಮೊದಲೇನಲ್ಲ. ಕಳೆದ ವರ್ಷ ಬಿಡುಗಡೆಯಾದ 'ಮೆರ್ಸಲ್' ಸಿನಿಮಾದಲ್ಲಿ ಜಿಎಸ್ ಟಿ, ಅಪನಗದೀಕರಣ, ಡಿಜಿಟಲ್ ಇಂಡಿಯಾ ಬಗ್ಗೆ ಕೂಡ ಟೀಕೆ ವ್ಯಕ್ತಪಡಿಸಿದ್ದರಿಂದ ಬಿಜೆಪಿಯಿಂದ ಸಿನಿಮಾ ವಿರುದ್ಧ ಪ್ರತಿಭಟನೆ ನಡೆದಿತ್ತು.












Click it and Unblock the Notifications