ರಫೇಲ್ ಡೀಲ್ ಅಗ್ನಿಕುಂಡದಲ್ಲಿ ರಹಸ್ಯ ದಾಖಲೆಗಳೊಂದಿಗೆ ಎನ್ ರಾಮ್
ಚೆನ್ನೈ, ಮಾರ್ಚ್ 07 : ರಫೇಲ್ ಡೀಲ್ ಹಗರಣಕ್ಕೆ ಸಂಬಂಧಿಸಿದಂತೆ ನರೇಂದ್ರ ಮೋದಿ ಸರಕಾರವನ್ನು ಬೇತಾಳದಂತೆ ಬೆನ್ನತ್ತಿರುವ ದಿ ಹಿಂದೂ ಪತ್ರಿಕೆಯ ಚೇರ್ಮನ್ ಎನ್ ರಾಮ್ ಅವರು, ತಮ್ಮ ಬಳಿಯಿರುವ ರಹಸ್ಯ ರಫೇಲ್ ದಾಖಲೆಗಳನ್ನು ಬಹಿರಂಗಪಡಿಸುವಂತೆ ಯಾರೂ ಒತ್ತಾಯಪಡಿಸುವಂತಿಲ್ಲ ಎಂದಿದ್ದಾರೆ.
ರಫೇಲ್ ಹಗರಣದಲ್ಲಿ ನಡೆದಿದೆಯೆನ್ನಲಾಗಿರುವ ಅವ್ಯವಹಾರಗಳ ಬಗ್ಗೆ ಸರಣಿ ಲೇಖನಗಳನ್ನು ಬರೆದಿರುವ ಅವರು ಇಂಡಿಯಾ ಟುಡೇ ಜೊತೆ ಮಾತನಾಡುತ್ತ, ನಾವು ಅತ್ಯಂತ ಸುರಕ್ಷಿತವಾಗಿದ್ದೇವೆ. ನಾವು ರಫೇಲ್ ಡೀಲ್ ಗೆ ಸಂಬಂಧಿಸಿದಂತೆ ಯಾವುದೇ ದಾಖಲೆಯನ್ನು ಕದ್ದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮೊದಲ ರಫೇಲ್ ಯುದ್ಧ ವಿಮಾನ ಸೆಪ್ಟೆಂಬರ್ ನಲ್ಲಿ ಭಾರತಕ್ಕೆ ಬರಲಿದೆ. ಅವುಗಳ ಗುಣಮಟ್ಟದ ಬಗ್ಗೆ ಮತ್ತು ಅವುಗಳನ್ನು ಕೊಳ್ಳುವ ಅಗತ್ಯದ ಬಗ್ಗೆ ಯಾರೂ ಪ್ರಶ್ನಿಸುತ್ತಿಲ್ಲ. ಆದರೆ ಅವನ್ನು ಕೊಳ್ಳುವ ನಿರ್ಧಾರದ ಬಗ್ಗೆ ಮತ್ತು ನಿಬಂಧನಗಳ ಬಗ್ಗೆ ಹಲವಾರು ಪ್ರಶ್ನೆಗಳೆದ್ದಿವೆ ಎಂದೂ ಅವರು ನುಡಿದಿದ್ದಾರೆ.
ರಫೇಲ್ ದಾಖಲೆಗಳು ಕಳುವಾಗಿವೆ: ಸುಪ್ರೀಂಗೆ ಕೇಂದ್ರದ ಹೇಳಿಕೆ
ಹೊಸ ಡೀಲ್ ಗಿಂತ ಹಳೆಯ ಡೀಲ್ ಉತ್ತಮವಾಗಿತ್ತಾ? ಅವುಗಳನ್ನು ಭಾರತದ ಸರಕಾರ ಕೊಳ್ಳುತ್ತಿರುವಾಗ, ಮಾತುಕತೆ ನಡೆಯುವ ಹಂತದಲ್ಲಿ ವಿರೋಧ ವ್ಯಕ್ತವಾಗಿತ್ತಾ? ಅಥವಾ ಸಮಾನಾಂತರ ಮಾತುಕತೆಗಳು ಕೂಡ ನಡೆದಿದ್ದವಾ? ಎಂದು ಪ್ರಶ್ನಿಸಿರುವ ಅವರು, ತನಿಖಾ ವರದಿಗಾರಿಕೆಯಿಂದ ರಫೇಲ್ ಹುಳುಕುಗಳು ಹೊರಬರುತ್ತಿವೆ ಎಂದಿದ್ದಾರೆ.
ಒಂದು ವಿಷಯದಲ್ಲಿ ಅವರು ರಿಸ್ಕ್ ತೆಗೆದುಕೊಂಡಿದ್ದಾರೆ. ರಫೇಲ್ ಗೆ ಸಂಬಂಧಿಸಿದ ಕಳುವಾದ ದಾಖಲೆಗಳು ಅವರ ಬಳಿಯಿದ್ದರೆ ಅದು ಅಪರಾಧವಾಗುತ್ತದೆ. ಈ ರಹಸ್ಯ ದಾಖಲೆಗಳನ್ನು ರಕ್ಷಣಾ ಇಲಾಖೆ ಹೊರತುಪಡಿಸಿ ಯಾರೂ ಇಟ್ಟುಕೊಳ್ಳುವಂತಿಲ್ಲ. ಇಟ್ಟುಕೊಂಡಿದ್ದೇ ಆದರೆ ರಾಮ್ ಸಂಕಷ್ಟದಲ್ಲಿ ಸಿಲುವುದು ಖಚಿತ ಎಂದು ತಜ್ಞರು ಹೇಳುತ್ತಿದ್ದಾರೆ.
ದೇಶದ ಹಿತಾಸಕ್ತಿಯಿಂದ ಬಯಲಿಗೆಳೆಯುತ್ತಿದ್ದೇವೆ
ಕೇಂದ್ರ ಸರಕಾರ ಎಲ್ಲ ಮಾಹಿತಿಗಳನ್ನು ಸಾರ್ವಜನಿಕರಿಂದ ಮುಚ್ಚಿಡುತ್ತಿದೆ. ಆದರೆ, ನಾವು ಸಾರ್ವಜನಿಕರ ಹಿತಾಸಕ್ತಿಯಿಂದ ಎಲ್ಲ ಮಾಹಿತಿಗಳನ್ನು ಬಯಲಿಗೆಳೆಯುತ್ತಿದ್ದೇವೆ ಎಂದು ಎನ್ ರಾಮ್ ಅವರು ನರೇಂದ್ರ ಮೋದಿ ಸರಕಾರದ ವಿರುದ್ಧ ಸೆಡ್ಡು ಹೊಡೆದಿದ್ದಾರೆ.
ಫೆಬ್ರವರಿ 8ರಂದು ಎನ್ ರಾಮ್ ಅವರು ದಿ ಹಿಂದೂ ಪತ್ರಿಕೆಯಲ್ಲಿ, ರಫೇಲ್ ಡೀಲ್ ಬಗ್ಗೆ ಭಾರತೀಯ ಸಮಾಲೋಚನಾ ತಂಡದಲ್ಲಿ ಮಾತುಕತೆ ನಡೆಯುತ್ತಿರುವಾಗಲೇ, ಕೇಂದ್ರದಿಂದ ಹಸ್ತಕ್ಷೇಪವಾಗುತ್ತಿತ್ತು, ಸಮಾನಾಂತರ ಮಾತುಕತೆ ನಡೆಯುತ್ತಿತ್ತು ಮತ್ತು ಸಮಾಲೋಚನಾ ತಂಡ ಇದಕ್ಕೆ ಆಕ್ಷೇಪವನ್ನೂ ವ್ಯಕ್ತಪಡಿಸಿತ್ತು ಎಂದು ಬರೆದಿದ್ದರು.
ರಫೇಲ್ ದಾಖಲೆಗಳನ್ನು ಕೇಂದ್ರ ಸರ್ಕಾರ ಕದ್ದಿದೆ: ರಾಹುಲ್ ಗಾಂಧಿ
ಏರ್ ಮಾರ್ಷಲ್ ಭಡೌರಿಯಾ ಸ್ಪಷ್ಟನೆ
ಈ ಸಂಗತಿಯನ್ನು ಸರಕಾರ ಮುಚ್ಚಿಟ್ಟಿತ್ತು. ಆದರೆ ನಾವು ಇದನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಸಾರ್ವಜನಿಕರ ಗಮನಕ್ಕೆ ತಂದೆವು. ಇದಾದ ನಂತರ, ಯಾವುದೇ ಸಮಾನಾಂತರ ಸಮಾಲೋಚನೆ ನಡೆದಿರಲಿಲ್ಲ, ಯಾರೂ ಆಕ್ಷೇಪಿಸಿರಲಿಲ್ಲ ಎಂದು ಕೇಂದ್ರ ಸರಕಾರ ಸ್ಪಷ್ಟನೆ ನೀಡಿತ್ತು. ಇದನ್ನು ಕೇಂದ್ರ ಸಮಾಲೋಚನೆ ತಂಡ ಕೂಡ ಅನುಮೋದಿಸಿತ್ತು.
ರಫೇಲ್ ಡೀಲ್ ಹಗರಣಕ್ಕೆ ಸಂಬಂಧಿಸಿದಂತೆ ಮೌನ ಮುರಿದಿದ್ದ, ಭಾರತೀಯ ಸಮಾಲೋಚನಾ ತಂಡದ ಚೇರ್ಮನ್ ಆಗಿದ್ದ ಏರ್ ಮಾರ್ಷಲ್ ಆರ್ ಕೆ ಎಸ್ ಭಡೌರಿಯಾ ಅವರು, ರಫೇಲ್ ಮಾತಕತೆಗೆ ಸಂಬಂಧಿಸಿದಂತೆ ಸಮಾಲೋಚನಾ ತಂಡ ಅಸಮ್ಮತಿ ವ್ಯಕ್ತಪಡಿಸಿರಲಿಲ್ಲ ಎಂದು ಎನ್ ಅವರಿಗೆ ತಿರುಗೇಟು ನೀಡಿದ್ದರು.
ರಫೇಲ್ ಖರೀದಿ: ಮಾಧ್ಯಮಗಳು ಬೆದರಿಕೆಗೆ ಜಗ್ಗಬಾರದು ಎಂದ ಎನ್ ರಾಮ್
ರಫೇಲ್ ದಾಖಲೆಗಳು ರಕ್ಷಣಾ ಸಚಿವಾಲಯದಿಂದ ಕಾಣೆ
ಇದೇ ಸಮಯದಲ್ಲಿ, ರಫೇಲ್ ಡೀಲ್ ಗೆ ಸಂಬಂಧಿಸಿದ ಕೆಲ ಪ್ರಮುಖ ಕಡತಗಳು ರಕ್ಷಣಾ ಸಚಿವಾಲಯದಿಂದ ಕಳುವಾಗಿವೆ, ಇದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಕೇಂದ್ರ ಸರಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ಹೇಳಿರುವುದು ಬೆಂಕಿ ಬಿರುಗಾಳಿಗೆ ಟನ್ ಗಟ್ಟಲೆ ತುಪ್ಪ ಸುರಿದಂತಾಗಿದೆ. ತಮಗೆ ಈ ದಾಖಲೆಗಳು ಬೇಕಿದ್ದರೆ ಆರ್ಟಿಐ ಮೂಲಕ ಅರ್ಜಿ ಸಲ್ಲಿಸಿ ಪಡೆಯಬಹುದಾಗಿತ್ತು, ಅವನ್ನು ಕದಿಯುವ ಅಗತ್ಯವೇನಿತ್ತು ಎಂದು ಸಾರ್ವಜನಿಕರೇ ಕೇಳುತ್ತಿದ್ದಾರೆ.
ಯುಪಿಎ ಡೀಲ್ ಪ್ರಕಾರ ನಡೆದಿದ್ರೆ ಕಡಿಮೆ ಬೆಲೆಗೆ ರಫೇಲ್: ರಮ್ಯಾ ಟ್ವೀಟ್
ದಾಖಲೆ ಕದ್ದು ಹಿಂದೂ ಪತ್ರಿಕೆಗೆ ನೀಡಲಾಗಿದೆ
ಸರ್ವೋಚ್ಚ ನ್ಯಾಯಾಲಯದಲ್ಲಿ, ಅಟಾರ್ನಿ ಜನರಲ್ ಆಗಿರುವ ಕೆಕೆ ವೇಣುಗೋಪಾಲ್ ಅವರು, ಕೇಂದ್ರ ರಕ್ಷಣಾ ಸಚಿವಾಲಯದಲ್ಲಿ ರಫೇಲ್ ಮೌಲ್ಯದ ಬಗ್ಗೆ ಇದ್ದ ಅತ್ಯಂತ ರಹಸ್ಯ ಕಡತಗಳನ್ನು ಕದಿಯಲಾಗಿದ್ದು, ಅವನ್ನು ದಿ ಹಿಂದೂ ಪತ್ರಿಕೆಗೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಜೊತೆಗೆ, ನಮ್ಮ ವಾಯು ಸೇನೆಗೆ ಎಫ್-16ನಂಥ ಯುದ್ಧ ವಿಮಾನಗಳನ್ನು ಹೊಡೆದುರುಳಿಸಲು ರಫೇಲ್ ನಂಥ ಸುಸಜ್ಜಿತ ಜೆಟ್ ವಿಮಾನಗಳು ಬೇಕೇಬೇಕು, ಇಲ್ಲದಿದ್ದರೆ ಪಾಕ್ ಸೇನೆಯನ್ನು ಮೆಚ್ಚಿ ನಿಲ್ಲುವುದು ಹೇಗೆ ಎಂದು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ.
ರಾಹುಲ್ ಗಾಂಧಿ ಕೆಂಡಾಮಂಡಲ
ಈ ಹಿನ್ನೆಲೆಯಲ್ಲಿ, ರಫೇಲ್ ಯುದ್ಧ ವಿಮಾನ ಹಗರಣದ ತನಿಖೆಯಾಗಬೇಕು, ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಪ್ರಕರಣ ದಾಖಲಿಸಬೇಕು. ಭ್ರಷ್ಟಾಚಾರದ ಜಾಡು ಅವರಿಂದಲೇ ಆರಂಭವಾಗುತ್ತದೆ, ಅವರಲ್ಲಿಯೇ ಮುಗಿಯುತ್ತದೆ. ಕೇಂದ್ರದಿಂದಲೇ ರಫೇಲ್ ದಾಖಲೆಗಳನ್ನು ಕಳುವಾಗಿವೆ ಎಂದು ಹೇಳಲಾಗುತ್ತಿದೆ. ಆದರೆ, ತನಿಖೆಗೆ ಬೇಕಾಗಿರುವ ಅತ್ಯಂತ ಪ್ರಮುಖ ಸಾಕ್ಷ್ಯಗಳನ್ನು ನಾಶ ಮಾಡಲಾಗಿದೆ ಎಂದು ರಾಹುಲ್ ಗಾಂಧಿ ಅವರು ಕೆಂಡಕಾರಿದ್ದಾರೆ.
ಕದ್ದಿದ್ದೇ ಆದಲ್ಲಿ ಸಂಕಷ್ಟದಲ್ಲಿ ಎನ್ ರಾಮ್
ಒಂದು ವೇಳೆ ಕಳ್ಳತನವಾಗಿರುವ ರಹಸ್ಯ ರಫೇಲ್ ಕಡತಗಳು ಎನ್ ರಾಮ್ ಬಳಿ ಇದ್ದಿದ್ದೇ ಆದರೆ ಅವರು ಸಂಕಷ್ಟದಲ್ಲಿ ಸಿಲುಕಿಕೊಳ್ಳುವುದು ಖಚಿತ. ಏಕೆಂದರೆ, ಈ ದಾಖಲೆಗಳು ರಕ್ಷಣಾ ಇಲಾಖೆಗೆ ಬಿಟ್ಟರೆ ಬೇರೆ ಯಾರಿಗೂ ಇವು ಸಿಗುವಂತಿಲ್ಲ ಮತ್ತು ಇಟ್ಟುಕೊಳ್ಳುವಂತಿಲ್ಲ. ಎನ್ ರಾಮ್ ಬಳಿ ಈ ದಾಖಲೆಗಳು ಇದ್ದಿದ್ದೇ ಆದರೆ ಯಾವುದೋ ಉನ್ನತ ಅಧಿಕಾರಿಗಳ ಸಹಾಯದಿಂದ ಗಿಟ್ಟಿಸಿರುವ ಸಾಧ್ಯತೆ ಇದೆ. ದಾಖಲೆಗಳು ಕಳುವಾಗಿವೆ ಎಂದು ಸರಕಾರವೇ ಹೇಳಿದ್ದು, ತನಿಖೆ ಜಾರಿಯಲ್ಲಿದೆ.