ರಾಮೇಶ್ವರಂನಲ್ಲಿ ಎರಡೂವರೆ ಕೇಜಿ ಚಿನ್ನದ ಬಿಸ್ಕತ್ ವಶಕ್ಕೆ
ರಾಮೇಶ್ವರಂ, ಜುಲೈ 24: ತಮಿಳುನಾಡಿನ ರಾಮೇಶ್ವರಂ ಬಳಿ ಭಾರೀ ಮೌಲ್ಯದ ಚಿನ್ನ ಕಳ್ಳ ಸಾಗಣೆ ಮಾಡುತ್ತಿದ್ದಾಗ ವಶಕ್ಕೆ ಪಡೆಯಲಾಗಿದೆ. ಕಾರಿನಲ್ಲಿ ಕಳ್ಳಸಾಗಣೆ ಮಾಡುತ್ತಿದ್ದ ಖದೀಮರು ಪೊಲೀಸರ ಅತಿಥಿಯಾಗಿದ್ದಾರೆ.
ಎರಡೂವರೆ ಕೇಜಿ ತೂಕದ ಚಿನ್ನದ ಬಿಸ್ಕತ್ ಗಳನ್ನು ಸೋಮವಾರ ತಮಿಳುನಾಡಿನ ರಾಮೇಶ್ವರಂ ಬಳಿ ವಶಪಡಿಸಿಕೊಳ್ಳಲಾಗಿದೆ. ಅರವತ್ತು ಲಕ್ಷ ಮೌಲ್ಯ ಬೆಲೆ ಬಾಳುವ ಚಿನ್ನದ ಬಿಸ್ಕತ್ ಗಳನ್ನು ಕಾರಿನಲ್ಲಿ ಸಾಗಿಸುತ್ತಿದ್ದಾಗ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಹಾಗೂ ಇಬ್ಬರನ್ನು ಬಂಧಿಸಿದ್ದಾರೆ.

ಕಂದಾಯ ಗುಪ್ತಚರ ನಿರ್ದೇಶನಾಲಯದ ಹಾಗೂ ಕಸ್ಟಮ್ಸ್ ಇಲಾಖೆ ಅಧಿಕಾರಿಗಳು ರಾಮೇಶ್ವರಂ ಬಳಿ ಹೊಸ ರಸ್ತೆಯಲ್ಲಿ ಕಾರು ತಪಾಸಣೆ ನಡೆಸುವಾಗ ಎರಡು ಕೇಜಿ ನಾನೂರು ಗ್ರಾಮ್ ತೂಕದ ಚಿನ್ನದ ಬಿಸ್ಕತ್ ಇರುವುದು ಪತ್ತೆಯಾಗಿದೆ. ಅವುಗಳನ್ನು ಕಾರಿನ ಸೀಟು ಅಡಿಯಲ್ಲಿ ಬಚ್ಚಿಡಲಾಗಿತ್ತು.
ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರನ್ನು ಬಂಧಿಸಿದ್ದು, ಇವರು ಮೂಲತಃ ಕೇರಳ ರಾಜ್ಯದ ತ್ರಿಶ್ಶೂರ್ ನವರು ಎಂದು ಗೊತ್ತಾಗಿದೆ. ಬಂಧಿತರನ್ನು ವಿಚಾರಣೆಗಾಗಿ ರಾಮನಾಥಪುರಂಗೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅಧಿಕಾರಿಗಳು ವಶಪಡಿಸಿಕೊಂಡ ಹೆಚ್ಚಿನ ಮೌಲ್ಯದ ಚಿನ್ನದ ಪೈಕಿ ಇದು ಕೂಡ ಸೇರ್ಪಡೆಯಾಗಿದೆ.











Click it and Unblock the Notifications