ತಮಿಳುನಾಡಿನ 15ಕ್ಕೂ ಅಧಿಕ ಜಿಲ್ಲೆಗಳಲ್ಲಿ ನ.6ರವರೆಗೆ ಭಾರಿ ಮಳೆ
ಚೆನ್ನೈ, ನವೆಂಬರ್ 03: ತಮಿಳುನಾಡಿನಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದು, ಚೆನ್ನೈ ಸೇರಿದಂತೆ 15 ಜಿಲ್ಲೆಗಳ ಶಾಲೆಗಳಿಗೆ ಇಂದು(ನ.03) ರಜೆ ಘೋಷಿಸಲಾಗಿದೆ.
ಚೆನ್ನೈ, ತಿರುವೆಲ್ಲೂರು, ಚೆಂಗಲ್ಪಟ್ಟು, ಕಾಂಚಿಪುರಂ, ಪುದುಕೊಟ್ಟಾಯ್, ಅರಿಯಾಲೂರ್, ಪೆರಂಬಲೂರು, ತಿರುಚಿ, ಕುಡ್ಡಲೋರ್, ವಿಳುಪುರಂ, ಕಲ್ಲಕುರಿಚಿ, ತಾಂಜಾವೂರು, ತಿರುವರೂರು, ವೆಲ್ಲೂರು, ತಿರುಪತ್ತೂರ್, ನಮಕ್ಕಲ್, ಕರೂರು, ನಾಗಪತ್ತಿನಂ, ಮಯಿಲಾದುತುರೈ ಹಾಗೂ ರಾಣಿಪೇಟೆಯಲ್ಲಿ ಶಾಲೆಗಳಿಗೆ ರಜೆ ಘೋಸಷಿಲಾಗಿದೆ.
ನವೆಂಬರ್ 1 ರಿಂದ ಶಾಲೆಗಳು ಆರಂಭಗೊಂಡಿತ್ತು. ತಿರುವಲ್ಲೂರು, ಚೆನ್ನೈ, ರಾಮನಾಥಪುರಂ, ತಿರುನೇಲ್ವೇಲಿ, ಥೂತುಕುಡಿ, ತಾಂಜಾವೂರ್, ತಿರುವಾರೂರ್, ತಿರುಪತ್ತೂರು, ನಾಗಪಟ್ಟಣಂ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ನವೆಂಬರ್ 6ರವರೆಗೆ ತಮಿಳುನಾಡಿನ 15ಕ್ಕೂ ಅಧಿಕ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ.

ಬಂಗಾಳಕೊಲ್ಲಿ ಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಹಾಗೂ ಮೇಲ್ಮೈ ಸುಳಿಗಾಳಿ ಪರಿಣಾಮ ಕರ್ನಾಟಕದ ಒಳನಾಡಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಕಂಡುಬಂದಿದ್ದು, ಆಗಾಗ್ಗೆ ತುಂತುರು ಮಳೆ ಇಲ್ಲವೆ ಹಗುರ ಮಳೆಯಾಗುತ್ತಿದೆ.
ದೀಪಾವಳಿ ಹಬ್ಬ ಮುಗಿಯುವವರೆಗೂ ಇದೇ ಪರಿಸ್ಥಿತಿ ಮುಂದುವರೆಯಲಿದ್ದು, ಬಲವಾದ ತಂಪಾದ ಮೇಲ್ಮೈ ಗಾಳಿ ಬೀಸುತ್ತಿರುವುದರಿಂದ ಚಳಿಯ ಪ್ರಮಾಣವೂ ಹೆಚ್ಚಾಗಿದೆ. ರಾಜ್ಯದ ದಕ್ಷಿಣ ಒಳನಾಡಿನಲ್ಲಿ ನ.6ರ ವರೆಗೂ ಇದೇ ಪರಿಸ್ಥಿತಿ ಮುಂದುವರಿಯಲಿದ್ದು, ಸಂಜೆ ಹಾಗೂ ರಾತ್ರಿ ವೇಳೆ ಕೆಲವಡೆ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆಗಳಿವೆ.
ಶ್ರೀಲಂಕಾದ ಉತ್ತರ ಭಾಗ ಹಾಗೂ ತಮಿಳುನಾಡಿನ ದಕ್ಷಿಣ ಭಾಗಗಳಲ್ಲಿ ವಾಯುಭಾರ ಕುಸಿತ ಉಂಟಾಗಿದೆ.
ಜತೆಗೆ ಮೇಲ್ಮೈ ಸುಳಿಗಾಳಿ ಹಾಗೂ ಟ್ರಪ್ ಕೂಡ ಇರುವುದರಿಂದ ರಾಜ್ಯದಲ್ಲಿ ಮೋಡ ಮುಸುಕಿದ ವಾತಾವರಣ ಕಂಡುಬರುತ್ತಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿವೃತ್ತ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ತಿಳಿಸಿದರು.
ಇನ್ನೆರಡು ದಿನಗಳಲ್ಲಿ ಕೇರಳದ ಕಡೆಗೆ ಚಲಿಸಲಿದ್ದು, ಅರಬ್ಬಿ ಸಮುದ್ರ ತಲುಪಿದ ನಂತರ ವಾಯುಭಾರ ಕುಸಿತ ಪ್ರಬಲವಾಗುವ ಸಾಧ್ಯತೆ ಇದೆ. ಹೀಗಾಗಿ ನ.6ರ ವರೆಗೂ ರಾಜ್ಯದ ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗಗಳಲ್ಲಿ ಮಳೆ ಮುಂದುವರಿಯಲಿದೆ. ಈಗಾಗಲೇ ಈಶಾನ್ಯ ಹಿಂಗಾರು ಆರಂಭವಾಗಿದ್ದು, ಬಲವಾದ ಗಾಳಿಯೂ ಬೀಸುತ್ತಿದೆ.
ಇದರಿಂದ ತಂಪಾದ ವಾತಾವರಣ ಹೆಚ್ಚಾಗಿ ಕಂಡು ಬರುತ್ತಿದೆ. ಅಕ್ಟೋಬರ್ನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಕೆಲವೆಡೆ ಶೇ.50 ರಿಂದ 100ರ ವರೆಗೂ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ ಎಂದರು.
ನೈಋತ್ಯ ಮುಂಗಾರಿನ ಆರಂಭದಲ್ಲಿ ಕಾವೇರಿ ಕೊಳ್ಳದ ಜಲಾಶಯಗಳಿಗೆ ಸಾಕಷ್ಟು ನೀರು ಬರಲಿಲ್ಲ. ಈ ಬಾರಿ ಕೆಆರ್ಎಸ್ ಜಲಾಶಯದಲ್ಲಿ ಸುಮಾರು 35 ರಿಂದ 40 ಟಿಎಂಸಿ ಅಡಿಗಳಷ್ಟು ನೀರಿನ ಸಂಗ್ರಹ ಕಡಿಮೆಯಾಗಿದೆ. ಈಗಾಗಲೇ ತಮಿಳುನಾಡಿಗೆ 150 ಟಿಎಂಸಿ ಅಡಿಯಷ್ಟು ನೀರು ಕೂಡ ಹರಿದು ಹೋಗಿದೆ. ಮುಂಗಾರಿನ ಕೊನೆಯಲ್ಲಿ ಕೆಆರ್ಎಸ್ ಜಲಾಶಯ ಭರ್ತಿಯಾಗಿದೆ ಎಂದರು.
ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಅಕ್ಟೋಬರ್ನಲ್ಲಿ ದಾಖಲೆ ಪ್ರಮಾಣದ ಮಳೆಯಾಗಿದೆ. ಆದರೆ, ಉತ್ತರ ಒಳನಾಡಿನಲ್ಲಿ ಮಳೆ ಕೊರತೆ ಕಂಡುಬಂದಿದ್ದು, ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಉತ್ತಮ ಮಳೆಯಾಗಿದೆ ಎಂದು ಹೇಳಿದರು.












Click it and Unblock the Notifications