ತಮಿಳುನಾಡಿನಲ್ಲಿ ಮಳೆಗೆ ವಾರಾಂತ್ಯದ ರಜೆ ಕ್ಯಾನ್ಸಲ್
ಚೆನ್ನೈ, ನವೆಂಬರ್ 03: ಚೆನ್ನೈ ಸೇರಿದಂತೆ ತಮಿಳುನಾಡಿನ 7 ಜಿಲ್ಲೆಗಳಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಾಜ್ಯದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ವಾರಾಂತ್ಯದಲ್ಲೂ ಮಳೆ ಹಾವಳಿ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಚೆನ್ನೈ ನಗರಕ್ಕೆ ಮಳೆ ಭೀತಿ ಇನ್ನೂ ಕಾಡಲಿದೆ : ಬಿಬಿಸಿ
ಚೆನ್ನೈ, ಕಾಂಚೀಪುರಂ, ತಿರುವಳ್ಳೂರು, ಪೆರಂಬೂರು, ಚೋಳೈ ಸೇರಿದಂತೆ ವಿವಿಧ ಕಡೆಗಳಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ನೀಡಲಾಗಿದೆ. ಹಲವಾರು ಸರ್ಕಾರಿ, ಇ ಎಸ್ ಐ ಹಾಗೂ ಖಾಸಗಿ ಆಸ್ಪತ್ರೆ ಆವರಣ ಸಂಪೂರ್ಣವಾಗಿ ಜಲಾವೃತವಾಗಿದ್ದು, ರೋಗಿಗಳು ಸಂಕಷ್ಟ ಎದುರಿಸುತ್ತಿದ್ದಾರೆ.
ಗ್ಯಾಲರಿ: ಚೆನ್ನೈನಲ್ಲಿ ಭಾರಿ ಮಳೆ, ಜನಜೀವನ ಅಸ್ತವ್ಯಸ್ತ
ಬಂಗಾಳಕೊಲ್ಲಿಯ ನೈರುತ್ಯ ಭಾಗ ಹಾಗೂ ಶ್ರೀಲಂಕಾದವರೆಗೂ ಈಶಾನ್ಯ ಮುಂಗಾರು ಚುರುಕುಗೊಂಡಿದೆ. ಹೀಗಾಗಿ ಭಾರಿ ಮಳೆ ನಿರೀಕ್ಷೆಯಿದೆ. ಬಿಬಿಸಿ ಕೂಡಾ ತನ್ನ ಹವಾಮಾನ ವರದಿಯಲ್ಲಿ ಮುಂಬರುವ ದಿನಗಳಲ್ಲಿ ಚೆನ್ನೈನಲ್ಲಿ 300 ರಿಂದ 500 ಎಂಎಂ ಮಳೆ ನಿರೀಕ್ಷೆಯಿದೆ ಎಂದಿದೆ.
ಎಲ್ಲೆಲ್ಲಿ ಮಳೆ ಸಾಧ್ಯತೆ?
ತಮಿಳುನಾಡಿನ ವೆಲ್ಲೂರು, ತಿರುವಣ್ಣಾಮಲೈ, ತಿರುಚಿರಾಪಳ್ಳಿ, ಅರಿಯಲೂರು ಹಾಗೂ ಪೆರಂಬೂರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ' ಎಂದು ಪ್ರಾದೇಶಿಕ ಚಂಡಮಾರುತ ಮುನ್ನೆಚ್ಚರಿಕಾ ಕೇಂದ್ರ ಹಾಗೂ ಭಾರತೀಯ ಹವಾಮಾನ ಇಲಾಖೆ ವರದಿ ಹೇಳಿದೆ.
ಸಂಚಾರ ಸಂಪೂರ್ಣ ವ್ಯತ್ಯಯ
ದಕ್ಷಿಣ ತಮಿಳುನಾಡಿನಿಂದ ಬರುವ ರೈಲುಗಳ ಸಂಚಾರದಲ್ಲಿ ವಿಳಂಬ ಉಂಟಾಗಿತ್ತು.ವಿಮಾನಗಳ ಟೇಕ್ ಆಫ್ ಹಾಗೂ ಭೂಸ್ಪರ್ಶದಲ್ಲಿ ಕೊಂಚ ವ್ಯತ್ಯಯ ಆಗಿತ್ತು. ರಸ್ತೆಗಳಲ್ಲಿ ನೀರು ನಿಂತಿರುವುದರಿಂದ ಚೆನ್ನೈ ಸೇರಿದಂತೆ ಹಲವು ನಗರ ಪ್ರದೇಶಗಳಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ. ನೀರು ತೆರವುಗೊಳಿಸಲು 400ಕ್ಕೂ ಹೆಚ್ಚು ಪಂಪ್ಗಳನ್ನು ಬಳಸಲಾಗಿದೆ.
ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
ಸರಿ ಸುಮಾರು 70ಕ್ಕೂ ಅಧಿಕ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು. ತಗ್ಗು ಪ್ರದೇಶಗಳಲ್ಲಿ ವಿದ್ಯುತ್ ಕಂಬಗಳು ನೆಲಕ್ಕುರುಳಿದ ಘಟನೆ ನಡೆದಿತ್ತು. ಆದರೆ, ಚೆನ್ನೈ ನಗರದಲ್ಲಿ ವಿದ್ಯುತ್ ಪೂರೈಕೆ ಈಗ ಯಥಾಸ್ಥಿತಿಗೆ ಮರಳಿದೆ.
ಪರೀಕ್ಷೆಗಳು ಮುಂದೂಡಿಕೆ
ಅಂಬೇಡ್ಕರ್ ಕಾನೂನು ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಏಳು ಜಿಲ್ಲೆಗಳಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
|
ರಸ್ತೆಗಳಲ್ಲಿ ನೀರು ನಿಂತಿರುವ ದೃಶ್ಯ
ರಸ್ತೆಗಳಲ್ಲಿ ನೀರು ನಿಂತಿರುವ ದೃಶ್ಯ ಸಾಮಾನ್ಯವಾಗಿದ್ದು, ಅಪಾಯ ಇರುವ ಸ್ಥಳಗಳ ಬಗ್ಗೆ ಟ್ವಿಟ್ಟರ್ ಮೂಲಕ ಮಾಹಿತಿ ನೀಡಲಾಗುತ್ತಿದೆ.