ಮತಗಟ್ಟೆಯಲ್ಲಿ ಕಮಲ ಹಾಸನ್ರನ್ನು ಮುತ್ತಿಕೊಂಡ ಜನರು
ಚೆನ್ನೈ, ಏಪ್ರಿಲ್ 6: ನಟ ಹಾಗೂ ಮಕ್ಕಳ್ ನೀಧಿ ಮಯ್ಯಮ್ (ಎಂಎನ್ಎಂ) ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ಅವರು ತಮ್ಮ ಮಕ್ಕಳಾದ ಶ್ರುತಿ ಮತ್ತು ಅಕ್ಷರಾ ಜತೆ ಮತ ಚಲಾಯಿಸಲು ಮತಗಟ್ಟೆಗೆ ಬಂದ ಸಂದರ್ಭದಲ್ಲಿ ಜನರು ಮುತ್ತಿಕೊಂಡ ಪರಿಣಾಮ ತೀವ್ರ ಗದ್ದಲ ಸೃಷ್ಟಿಯಾಯಿತು. ಇದರಿಂದ ಮತ ಚಲಾವಣೆಗೆ ಕೆಲ ಸಮಯ ತೊಡಕು ಉಂಟಾಯಿತು.
ಚೆನ್ನೈನ ಟೇಯ್ನಂಪೇಟೆಯ ಚೆನ್ನೈ ಹೈಸ್ಕೂಲ್ನಲ್ಲಿನ ಮತಗಟ್ಟೆಗೆ ಮಂಗಳವಾರ ಬೆಳಿಗ್ಗೆಯೇ ಕಮಲ ಹಾಸನ್ ಆಗಮಿಸಿದ್ದರು. ಅವರೊಂದಿಗೆ ಶ್ರುತಿ ಹಾಸನ್ ಮತ್ತು ಅಕ್ಷರಾ ಹಾಸನ್ ಕೂಡ ಮತ ಚಲಾಯಿಸಲು ಬಂದಿದ್ದರು. ಆಗ ಮತದಾರರು ಅವರನ್ನು ಮುತ್ತಿಕೊಂಡರು. ಮತಗಟ್ಟೆಗೆ ತಡವಾಗಿ ತೆರಳಿದರೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಇರುವುದರಿಂದ ಗೊಂದಲ, ಗದ್ದಲ ಉಂಟಾಗುತ್ತದೆ ಎಂದು ಕಮಲ ಹಾಸನ್ ಮುಂಜಾನೆಯೇ ಮತಗಟ್ಟೆಗೆ ಹೋಗಿದ್ದರು. ಆದರೆ ಅವರು ಬರುವುದನ್ನು ತಿಳಿದಿದ್ದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಕೊಂಡಿದ್ದರು.
ರಾಜಕೀಯ ಜೀವನಕ್ಕಾಗಿ ಸಿನಿಮಾ ಬಿಡಲೂ ನಾನು ಸಿದ್ಧ; ಕಮಲ್ ಹಾಸನ್
ತಾರಾ ಕುಟುಂಬ ಆಗಮಿಸಿದ್ದರಿಂದ ಜನರು ಅವರನ್ನು ನೋಡಲು ಮುಗಿಬಿದ್ದರು. ಇದರಿಂದ ಸರದಿ ಸಾಲಿನಲ್ಲಿ ನಿಂತಿದ್ದವರಿಗೆ ತೊಂದರೆಯುಂಟಾಯಿತು. ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಜನರನ್ನು ನಿಯಂತ್ರಿಸಲು ಹರಸಾಹಸ ಪಟ್ಟರು.
ಕೇಂದ್ರ ಸರ್ಕಾರ ತಮಿಳರಿಗೆ ದೊಡ್ಡ ದ್ರೋಹ ಮಾಡಿದೆ; ಕಮಲ್ ಹಾಸನ್
Recommended Video
ಮತ ಚಲಾಯಿಸಿದ ಬಳಿಕ ಕಮಲ ಹಾಸನ್ ಅವರು ನೇರವಾಗಿ ಕೊಯಮತ್ತೂರಿನ ಕಡೆ ಪ್ರಯಾಣಿಸಿದರು. ಅವರು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕೊಯಮತ್ತೂರು ದಕ್ಷಿಣ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಹೀಗಾಗಿ ಸ್ವತಃ ಕಣದಲ್ಲಿದ್ದರೂ ತಮ್ಮ ಹಾಗೂ ತಮ್ಮ ಕುಟುಂಬದ ಮತವನ್ನು ತಮಗೆ ಹಾಕಿಕೊಳ್ಳಲು ಅವರಿಗೆ ಸಾಧ್ಯವಾಗಿಲ್ಲ.