ಮೃಗಾಲಯದಲ್ಲಿ ಸಿಂಹ ಸಾವು, ಕೊರೊನಾ ಶಂಕೆ: 9 ಸಿಂಹಗಳಲ್ಲಿ ವೈರಸ್ ದೃಢ
ಚೆನ್ನೈ, ಜೂನ್ 4: ವಂದಲೂರಿನ ಪ್ರಾಣಿ ಸಂಗ್ರಹಾಲಯದಲ್ಲಿ ಸಿಂಹವೊಂದು ಮೃತಪಟ್ಟಿದೆ. ಕೊರೊನಾ ವೈರಸ್ನ ಕಾರಣದಿಂದಾಗಿಯೇ ಈ ಸಿಂಹ ಮೃತಪಟ್ಟಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್ಗೆ ಮೃತ ಸಿಂಹದ ಸ್ಯಾಂಪಲ್ ಕಳುಹಿಸಿದ್ದು ಪಾಸಿಟಿವ್ ವರದಿ ಬಂದಿದೆ. ಮತ್ತೊಮ್ಮೆ ಖಚಿತಪಡಿಸಲು ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿದೆ.
ಮೂಲಗಳ ಪ್ರಕಾರ ಕಳೆದ ಕೆಲ ದಿನಗಳಿಂದ ಮೃಗಾಲಯದಲ್ಲಿದ್ದ ಸಿಂಹಗಳು ಅನಾರೋಗ್ಯದಿಂದ ಬಳಲುತ್ತಿತ್ತು. ಮೃಗಾಲಯ ನಿರ್ವಾಹಕರು ಇದು ಕೊರೊನಾ ವೈರಸ್ ಇರಬಹುದೆಂದು ಶಂಕಿಸಿದ್ದರು. ಹೀಗಾಗಿ ತಕ್ಷಣವೇ ಸ್ಯಾಂಪಲ್ಗಳನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಕಳುಹಿಸಲಾಗುತ್ತು. ಆ ವರದಿಯಲ್ಲಿ ಕೊರೊನಾ ವೈರಸ್ ಸಿಂಹಗಳಿಗೆ ತಗುಲಿರುವುದು ದೃಢಪಟ್ಟಿದೆ. ಒಂದು ಸಿಂಹ ಮೃತಪಟ್ಟಿದ್ದು ಸಾವಿಗೆ ಕಾರಣಗಳನ್ನು ಅಧಿಕಾರಿಗಳು ಪರಾಮರ್ಶಿಸುತ್ತಿದ್ದಾರೆ.
ಕೊರೊನಾ ವೈರಸ್ಅನ್ನು ನಿಯಂತ್ರಿಸುವ ಸಲುವಾಗಿ ರಾಜ್ಯ ಸರ್ಕಾರ ಮೃಗಾಲಯವನ್ನು ಮುಚ್ಚುವ ಆದೇಶವನ್ನು ಹೊರಡಿಸಿತ್ತು. ಮೃಗಾಲಯ ಮುಚ್ಚಿದ ಬಳಿಕ ಕೊರೊನಾ ವೈರಸ್ನಿಂದ ರಕ್ಷಣೆ ಪಡೆಯಲು ಎಲ್ಲಾ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಹಾಘಿದ್ದರೂ ಸಿಂಹಗಳಿಗೆ ವೈರಸ್ ಹೇಗೆ ತಗುಲಿದೆ ಎಂಬುದು ತಿಳಿಯುತ್ತಿಲ್ಲ ಎಂದು ಮೃಗಾಲಯದ ಮೂಲಗಳು ತಿಳಿಸಿದೆ.

ಇನ್ನು ಇತ್ತೀಚೆಗೆ ಹೈದರಾಬಾದ್ ಮೃಗಾಲಯದಲ್ಲಿ ಸಿಂಹಗಳು ಕೊರೊನಾ ವೈರಸ್ಗೆ ತುತ್ತಾಗಿದ್ದವು. ಅಲ್ಲಿನ ಅಧಿಕಾರಿಗಳಿಂದ ಕೊರೊನಾ ವೈರಸ್ಗೆ ತುತ್ತಾಗಿರುವ ಸಿಂಹಗಳಿಗೆ ಚಿಕಿತ್ಸೆಯ ಪ್ರೊಟೊಕಾಲ್ ಬಗ್ಗೆ ವಂದಲೂರು ಮೃಗಾಲಯದ ಅಧಿಕಾರಿಗಳು ವಿವರಗಳನ್ನು ಪಡೆದುಕೊಂಡಿದ್ದಾರೆ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್ನಿಂದಲೂ ಮೃಗಾಲಯದ ಅಧಿಕಾರಿಗಳು ಚಿಕಿತ್ಸೆಯ ಮಾರ್ಗಸೂಚಿಗಳನ್ನು ಸ್ವೀಕರಿಸುತ್ತಿದ್ದು ಯಾವ ರೀತಿಯಲ್ಲಿ ಚಿಕಿತ್ಸೆಯನ್ನು ನೀಡುತ್ತಾ ಮುಂದುವರಿಯಬೇಕೆಂಬ ಮಾಹಿತಿಯನ್ನು ಪಡೆಯುತ್ತಿದ್ದಾರೆ.
ಚೆನ್ನೈನ ವಂದಲೂರಿನ ಮೃಗಾಲಯ ಪ್ರಸ್ತುತ 13 ಸಿಂಹಗಳನ್ನು ಹೊಂದಿದ್ದು ಇದರಲ್ಲಿ ಆರು ಗಂಡು ಹಾಗೂ ಏಳು ಹೆಣ್ಣು ಸಿಂಹಗಳಾಗಿದೆ.












Click it and Unblock the Notifications