ಕಮಲ್ ಹಾಸನ್ ನಾಲಿಗೆಯನ್ನು ಕತ್ತರಿಸಬೇಕು ಎಂದ ತಮಿಳುನಾಡು ಸಚಿವ
ಚೆನ್ನೈ, ಮೇ 14: "ಸ್ವತಂತ್ರ ಭಾರತದ ಮೊದಲ ಉಗ್ರ ಒಬ್ಬ ಹಿಂದು, ಆತನ ಹೆಸರು ನಾಥುರಾಮ್ ಗೋಡ್ಸೆ" ಎಂದ ಕಮಲ್ ಹಾಸನ್ ಅವರ ನಾಲಿಗೆಯನ್ನು ಕತ್ತರಿಸಬೇಕು ಎಂದು ತಮಿಳುನಾಡು ಸಚಿವ ರಾಜೇಂದ್ರ ಬಾಲಾಜಿ ಕಿಡಿಕಾರಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
"ಕಮಲ್ ಹಾಸನ್ ಅವರು ಏನು ಮಾತನಾಡುತ್ತಾರೆ ಎಂಬುದೇ ಅವರಿಗೆ ಗೊತ್ತಿಲ್ಲ. ಅವರು ಏನು ಮಾತನಾಡಿದರೂ ಅದು ವಿವಾದವಾಗುವಂತೆಯೇ ಮಾತನಾಡುತ್ತಾರೆ. ಹಿಂದುಗಳು ಕಡಿಮೆ ಇರುವ ಪ್ರದೇಶಕ್ಕೆ ತೆರಳಿ ಮೊದಲ ಉಗ್ರ ಹಿಂದು ಎಂಬ ಹೇಳಿಕೆ ನೀಡಿದ್ದಾರೆ, ಆದರೆ ಅವರಿಗೆ ಗೊತ್ತಿರಲಿ, ಭಯೋತ್ಪಾದನೆಗೆ ಧರ್ಮವಿಲ್ಲ" ಎಂದು ಎಐಎಡಿಎಂಕೆ ಮುಖಂಡ ಬಾಲಾಜಿ ಆಕ್ರೋಶ ವ್ಯಕ್ತಪಡಿಸಿದರು.
ಕಮಲ್ ಹಾಸನ್ ಅವರ ಹೇಳಿಕೆಯನ್ನು ವಿರೋಧಿಸಿ ಈಗಾಗಲೇ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ತಮ್ಮ ಮತದ ಲಾಭಕ್ಕಾಗಿ ಒದು ಧರ್ಮವನ್ನು ಅವಹೇಳನ ಮಾಡಿದ್ದಾರೆ ಎಂದು ಅದು ದೂರಿದೆ.

ತಮಿಳುನಾಡಿನ ಅರವಕುರಿಚಿಯಲ್ಲಿ ಮೇ 19 ರಂದು ನಡೆಯಲಿರುವ ವಿಧಾನಸಭೆ ಉಪಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಮಕ್ಕಳ್ ನೀಧಿ ಮಯ್ಯಂ ಪಕ್ಷದ ಸಂಸ್ಥಾಪಕ ಕಮಲ್ ಹಾಸನ್, "ಇದು ಮುಸ್ಲಿಂ ಜನರೇ ಹೆಚ್ಚಿರುವ ಪ್ರದೇಶ ಎಂಬ ಕಾರಣಕ್ಕಾಗಿ ನಾನು ಈ ಮಾತನ್ನು ಹೇಳುತ್ತಿಲ್ಲ. ಬದಲಿಗೆ ನಾನು ಗಾಂಧಿಜೀ ಅವರ ವಿಗ್ರಹದ ಮುಂದೆ ನಿಂತಿರುವ ಕಾರಣಕ್ಕೆ ಹೀಗೆ ಹೇಳುತ್ತಿದ್ದೇನೆ. ಸ್ವತಂತ್ರ ಭಾರತದ ಮೊದಲ ಉಗ್ರ ಒಬ್ಬ ಹಿಂದು, ಅವನ ಹೆಸರು ನಾಥುರಾಮ್ ಗೋಡ್ಸೆ. ಅಲ್ಲಿಂದ ಭಯೋತ್ಪಾದನೆ ಶುರುವಾಯಿತು" ಎಂದು ಕಮಲ್ ಹಾಸನ್ ಎಂದಿದ್ದರು. ಇದು ಭಾರೀ ವಿವಾದ ಸೃಷ್ಟಿಸಿತ್ತು.
ನಾನು ರಾಜಕೀಯಕ್ಕೆ ಬಂದಿದ್ದೇ, 1948 ರಲ್ಲಿ ಗಾಂಧಿ ಹತ್ಯೆ ಯಾಕಾಯಿತು ಎಂದು ಕಾರಣ ತಿಳಿಯುವುದಕ್ಕೆ ಎಂದು ಸಹ ಇದೇ ಸಂದರ್ಭದಲ್ಲಿ ಹಾಸನ್ ಹೇಳಿದ್ದರು.












Click it and Unblock the Notifications