Astrology Tips: ಮೇಷ-ವೃಷಭ ರಾಶಿಯವರೇ ಗಮನಿಸಿ; ಅದೃಷ್ಟ ಹೆಚ್ಚಿಸಿಕೊಳ್ಳಲು ಇಲ್ಲಿವೆ ಸರಳ ಪರಿಹಾರಗಳು
ರಾಶಿಚಕ್ರದ ಮೊದಲ ರಾಶಿಯಾದ ಮೇಷ ಮತ್ತು ಎರಡನೇ ರಾಶಿಯಾದ ವೃಷಭ ರಾಶಿಗಳು ಒಂದಕ್ಕೊಂದು ಭಿನ್ನವಾದ ವ್ಯಕ್ತಿತ್ವ ಗುಣ ಹೊಂದಿವೆ. ಮೇಷ ರಾಶಿಗೆ ಮಂಗಳ (ಕುಜ) ಅಧಿಪತಿಯಾದರೆ, ವೃಷಭ ರಾಶಿಯನ್ನು ಶುಕ್ರ ಗ್ರಹವು ಆಳುತ್ತದೆ. ಈ ಎರಡು ರಾಶಿಗಳ ಜನರು ತಮ್ಮ ಜೀವನದಲ್ಲಿ ಯಶಸ್ಸು ಮತ್ತು ಅದೃಷ್ಟ ಸಾಧಿಸಬಹುದು. ಸಕಾರಾತ್ಮಕ ಬೆಳವಣಿಗೆ ಆಗಲು ನಿಮಗೆ ಕೆಲವು ಅಡಚಣೆಗಳು ಎದುರಾಗಿದ್ದರೆ ಇಲ್ಲಿ ನೀಡಲಾದ ಪರಿಹಾರಗಳನ್ನು ತಿಳಿದುಕೊಳ್ಳುವುದು ಉತ್ತಮ.
ದ್ವಾದಶ ರಾಶಿಗಳ ಪೈಕಿ ಆರಂಭದಲ್ಲೇ ಬರುವ 'ಮೇಷ ಮತ್ತು ವೃಷಭ' ರಾಶಿಗಳು ಪ್ರಮುಖವಾಗಿವೆ. ಈ ರಾಶಿಯವರಾದ ನಿಮಗೆ ನಿರಂತರ ಆರ್ಥಿಕ ಸಮಸ್ಯೆ, ದೋಷಗಳು, ಉದ್ಯೋಗ, ಶಿಕ್ಷಣ, ಕುಟುಂಬದಲ್ಲಿ ಸಹಿಸಲಾಗದ ಪರಿಸ್ಥಿತಿಗಳು ಎದುರಾದಲ್ಲಿ ನೀವು ನಿಮ್ಮ ಉತ್ತಮ ಭವಿಷ್ಯಕ್ಕಾಗಿ ಏನು ಮಾಡಬೇಕು?. ಸಮಸ್ಯೆಗಳಿಂದ ಹೊರ ಬರುವ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಂದಷ್ಟು ಮಾರ್ಗೋಪಾಯಗಳು, ಸಲಹೆಗಳನ್ನು ನೀಡಲಾಗಿದೆ. ನೀವು ತಪ್ಪದೇ ಪಾಲಿಸಿದರೆ ನಿಮ್ಮ ಭವಿಷ್ಯ ಉಜ್ವಲವಾಗಲಿದೆ.

ಮೇಷ ರಾಶಿ: ಕುಜ ಗ್ರಹದ ಅನುಗ್ರಹ ಈ ದೇವರ ದರ್ಶನ ಮಾಡಿ
ಮಂಗಳ ಗ್ರಹವು ಮೇಷ ರಾಶಿಯ ಅಧಿಪತಿಯಾಗಿದೆ. ಆದ್ದರಿಂದ ಈ ರಾಶಿಯವರು ಸಹಜವಾಗಿಯೇ ಅಧಿಕ ಶಕ್ತಿ, ವೇಗ ಮತ್ತು ನಾಯಕತ್ವ ಗುಣಗಳನ್ನು ಹೊಂದಿರುತ್ತಾರೆ. ಆದರೆ ಕೆಲವೊಮ್ಮೆ ಕೋಪ ಮತ್ತು ಆತುರದ ನಿರ್ಧಾರಗಳಿಂದಾಗಿ ನಷ್ಟವನ್ನು ಅನುಭವಿಸುವ ಸಾಧ್ಯತೆ ಇರುತ್ತದೆ. ಅದೃಷ್ಟವನ್ನು ಹೆಚ್ಚಿಸಿಕೊಳ್ಳಲು, ಪ್ರತಿ ಮಂಗಳವಾರ ಆಂಜನೇಯ ಸ್ವಾಮಿ ಅಥವಾ ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧಿಸಬೇಕು. ಇದರಿಂದ ಉತ್ತಮ ಫಲಿತಾಂಶಗಳು ದೊರೆಯುತ್ತವೆ.
ಪ್ರತಿನಿತ್ಯವು ಸಾಧ್ಯವಾದರೆ "ಓಂ ಕ್ರಾಮ್ ಕ್ರೀಮ್ ಕ್ರೌಂ ಸಃ ಭೌಮಾಯ ನಮಃ" ಅಥವಾ ಕನಿಷ್ಠ "ಓಂ ಅಂಗಾರಕಾಯ ನಮಃ" ಎಂಬ ಮಂತ್ರವನ್ನು 108 ಬಾರಿ ಜಪಿಸುವುದು ಒಳಿತು. ಪ್ರತಿದಿನ ಹನುಮಾನ್ ಚಾಲೀಸಾ ಪಠಿಸುವುದು ಶ್ರೀರಾಮರಕ್ಷೆ ಇದ್ದಂತೆ. ನೀವು ಮಂಗಳವಾರದಂದು ಕೆಂಪು ಕಡಲೆಬೇಳೆ, ಬೆಲ್ಲ ಅಥವಾ ಕೆಂಪು ಬಣ್ಣದ ವಸ್ತುಗಳನ್ನು ದಾನ ಮಾಡುವುದರಿಂದ ಕುಜ ದೋಷಗಳು ನಿವಾರಣೆಯಾಗಿ ಕಾರ್ಯಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ.
ಯಾವುದೇ ಕಷ್ಟಕರ ಪರಿಸ್ಥಿತಿಯಲ್ಲಿಯೂ ಸಹ ಕೋಪ ಮತ್ತು ಆತುರದ ನಿರ್ಧಾರಗಳನ್ನು ಕೈಗೊಳ್ಳಬೇಡಿ. ನಿಮ್ಮ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಪ್ರಯತ್ನಿಸಿ. ಕೆಂಪು ಬಣ್ಣದ ಉಡುಪುಗಳು ಅಥವಾ ವಸ್ತುಗಳನ್ನು ಹೆಚ್ಚಾಗಿ ಬಳಸುವುದರಿಂದ ಇವರಿಗೆ ಶುಭವಾಗುತ್ತದೆ. ದಕ್ಷಿಣ ದಿಕ್ಕು ಇವರಿಗೆ ಅನುಕೂಲಕರವಾದ ದಿಕ್ಕು. ತಮ್ಮ ಶಕ್ತಿಯನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳಲು ಯೋಗ ಮತ್ತು ಧ್ಯಾನವನ್ನು ಅಭ್ಯಾಸ ಮಾಡುವುದು ಒಳಿತು.
ವೃಷಭ ರಾಶಿ: ಶುಕ್ರ ಗ್ರಹದ ಅನುಗ್ರಹಕ್ಕಾಗಿ ಹೀಗೆ ಮಾಡಿ
ಐಷಾರಾಮಿ ಜೀವನ, ಸೌಂದರ್ಯ ಮತ್ತು ಸಂಪತ್ತಿಗೆ ಅಧಿಪತಿಯಾದ ಶುಕ್ರ ಗ್ರಹವು ವೃಷಭ ರಾಶಿಯನ್ನು ಆಳುತ್ತದೆ. ಈ ರಾಶಿಯವರು ಸಾಮಾನ್ಯವಾಗಿ ಸ್ಥಿರ ಮನಸ್ಸಿನವರಾಗಿರುತ್ತಾರೆ. ಆದರೆ ಕೆಲವೊಮ್ಮೆ ಅವರ ಆಲಸ್ಯ ಅಥವಾ ಮೊಂಡುತನದಿಂದಾಗಿ ಒಳ್ಳೆಯ ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ. ಇವರಿಗೆ ಉತ್ತಮ ಅದೃಷ್ಟ ಒಲಿಯಬೇಕೆಂದರೆ, ಪ್ರತಿದಿನ ದೇವತೆಗಳ ಆರಾಧನೆ ಅಗತ್ಯ.
ಪ್ರತಿ ಶುಕ್ರವಾರ ಲಕ್ಷ್ಮಿ ದೇವಿ ಅಥವಾ ದುರ್ಗಾ ದೇವಿಯನ್ನು ಆರಾಧಿಸುವುದರಿಂದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಮನೆಯಲ್ಲಿ ತುಪ್ಪದ ದೀಪವನ್ನು ಹಚ್ಚಿ, ಶ್ರೀ ಲಲಿತಾ ಸಹಸ್ರನಾಮ ಸ್ತೋತ್ರ ಅಥವಾ ಕನಕಧಾರಾ ಸ್ತೋತ್ರವನ್ನು ಪಠಿಸುವುದು ಅತ್ಯಂತ ಮಂಗಳಕರ. ಶುಕ್ರನ ಅನುಗ್ರಹಕ್ಕಾಗಿ "ಓಂ ದ್ರಾಮ್ ದ್ರೀಮ್ ದ್ರೌಂ ಸಃ ಶುಕ್ರಾಯ ನಮಃ" ಅಥವಾ ಕೇವಲ "ಓಂ ಶುಕ್ರಾಯ ನಮಃ" ಎಂಬ ಮಂತ್ರವನ್ನು ಪ್ರತಿದಿನ ಸ್ಮರಿಸಿದರೆ ಒಳಿತಾಗಲಿದೆ.
ಶುಕ್ರವಾರದ ದಾನದಿಂದ ಶುಕ್ರ ಬಲ ಹೆಚ್ಚಳ
ಶುಕ್ರವಾರದಂದು ಹಾಲು, ಮೊಸರು, ಪಾಯಸ, ಬಿಳಿ ಬಟ್ಟೆಗಳು ಅಥವಾ ಅಕ್ಕಿಯನ್ನು ಬಡ ಮಹಿಳೆಯರಿಗೆ ದಾನ ಮಾಡುವುದರಿಂದ ಶುಕ್ರ ಬಲ ಹೆಚ್ಚಾಗಿ ಐಷಾರಾಮಿ ಜೀವನವು ಪ್ರಾಪ್ತವಾಗುತ್ತದೆ. ಶುಕ್ರ ಗ್ರಹಕ್ಕೆ ಮನೆ ಮತ್ತು ದೇಹದ ಶುಚಿತ್ವ ಬಹಳ ಪ್ರಿಯ. ಆದ್ದರಿಂದ, ಯಾವಾಗಲೂ ಪ್ರಶಾಂತವಾಗಿ ಮತ್ತು ಸುಗಂಧ ದ್ರವ್ಯಗಳನ್ನು ಬಳಸುತ್ತಿರಬೇಕು. ಸ್ತ್ರೀಯರನ್ನು ಗೌರವಿಸುವುದರಿಂದ ವೃಷಭ ರಾಶಿಯವರಿಗೆ ಅಪಾರ ಅದೃಷ್ಟ ದೊರೆಯುತ್ತದೆ.
ಬಿಳಿ, ತಿಳಿ ಗುಲಾಬಿ ಮತ್ತು ಬೆಳ್ಳಿ ಬಣ್ಣಗಳು ಇವರಿಗೆ ಹೆಚ್ಚು ಶುಭ. ಆಗ್ನೇಯ ದಿಕ್ಕು ಇವರಿಗೆ ಅನುಕೂಲಕರವಾಗಿದೆ. ವೃಷಭ ರಾಶಿಯವರು ತಮ್ಮ ಮೊಂಡುತನವನ್ನು ಬಿಟ್ಟು ಇತರರ ಸಲಹೆಗಳನ್ನು ಗೌರವಿಸಿದರೆ, ವೃತ್ತಿಜೀವನದಲ್ಲಿ ಉನ್ನತ ಮಟ್ಟವನ್ನು ತಲುಪಲು ಸಾಧ್ಯವಾಗುತ್ತದೆ.














Click it and Unblock the Notifications