ದೆಹಲಿ ವಿಮಾನ ನಿಲ್ದಾಣದಲ್ಲಿ ದೇಶದ ಮೊದಲ ‘ಸ್ಕೈಕಾಸ್ಟ್’ ಎಐ ಹವಾಮಾನ ವ್ಯವಸ್ಥೆ ಆರಂಭ
ನವದೆಹಲಿ: ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (IGI) ದೇಶದ ಮೊದಲ 'ಸ್ಕೈಕಾಸ್ಟ್' (SkyCast) ಹವಾಮಾನ ಗುಪ್ತಚರ ಮತ್ತು ನೌಕಾಸ್ಟಿಂಗ್ ವ್ಯವಸ್ಥೆಯನ್ನು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಶುಕ್ರವಾರ ಉದ್ಘಾಟಿಸಿದರು. ಭಾರತದ ವಿಮಾನಯಾನ ಕ್ಷೇತ್ರದಲ್ಲಿ ಈ ತಂತ್ರಜ್ಞಾನವನ್ನು ಮೊದಲ ಬಾರಿಗೆ ಬಳಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಅತ್ಯಾಧುನಿಕ ಹವಾಮಾನ ಮೇಲ್ವಿಚಾರಣಾ ವ್ಯವಸ್ಥೆಯು ವಿಶೇಷವಾಗಿ ಚಳಿಗಾಲದಲ್ಲಿ ದಟ್ಟ ಮಂಜಿನಿಂದ ಉಂಟಾಗುವ ವಿಮಾನ ವಿಳಂಬ ಮತ್ತು ರದ್ದತಿ ಸಮಸ್ಯೆಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ. ಹವಾಮಾನ ಬದಲಾವಣೆಗಳ ಬಗ್ಗೆ ಮುಂಚಿತ ಮಾಹಿತಿ ನೀಡುವ ಮೂಲಕ ವಿಮಾನ ಸಂಚಾರವನ್ನು ಹೆಚ್ಚು ಸುರಕ್ಷಿತ ಮತ್ತು ಸುಗಮಗೊಳಿಸುವಲ್ಲಿ ಇದು ಮಹತ್ವದ ಪಾತ್ರ ವಹಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಕೈಕಾಸ್ಟ್ ಹಲವು ಆಧುನಿಕ ವಾತಾವರಣ ಮೇಲ್ವಿಚಾರಣಾ ತಂತ್ರಜ್ಞಾನಗಳನ್ನು ಒಟ್ಟುಗೂಡಿಸಿದೆ. ರಾಡಾರ್ ವಿಂಡ್ ಪ್ರೊಫೈಲರ್, ಸೋಡಾರ್ (SODAR), ಮೈಕ್ರೋವೇವ್ ರೇಡಿಯೋಮೀಟರ್, ಫಾಗ್ ಏರೋಸಾಲ್ ಸೆನ್ಸರ್ ಹಾಗೂ ಲೈಡಾರ್ ಸಿಲಿಯೋಮೀಟರ್ ಸೇರಿದಂತೆ ವಿವಿಧ ಉಪಕರಣಗಳನ್ನು ಇದರಲ್ಲಿ ಬಳಸಲಾಗಿದೆ. ಇವು ಗಾಳಿಯ ವೇಗ, ದಿಕ್ಕು, ತೇವಾಂಶ, ಮಂಜು, ಗೋಚರತೆ ಹಾಗೂ ವಾತಾವರಣದ ಬದಲಾವಣೆಗಳನ್ನು ನೈಜ ಸಮಯದಲ್ಲಿ ಗಮನಿಸುತ್ತವೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಜಿತೇಂದ್ರ ಸಿಂಗ್, "ಪ್ರತಿಕೂಲ ಹವಾಮಾನದಿಂದ ಉಂಟಾಗುವ ವಿಮಾನ ಸಂಚಾರದ ಅಡಚಣೆಗಳನ್ನು ಈ ವ್ಯವಸ್ಥೆ ಕಡಿಮೆ ಮಾಡಲಿದೆ. ಸುಮಾರು ಮೂರು ಗಂಟೆಗಳ ಮುಂಚಿತವಾಗಿಯೇ ಪೈಲಟ್ಗಳು ಮತ್ತು ವಿಮಾನ ಸಿಬ್ಬಂದಿಗೆ ಎಚ್ಚರಿಕೆ ನೀಡುವ ಸಾಮರ್ಥ್ಯ ಇದಕ್ಕಿದೆ. ಇದರಿಂದ ಸುರಕ್ಷಿತ ಲ್ಯಾಂಡಿಂಗ್ ಸಮಯವನ್ನು ನಿರ್ಧರಿಸಲು ಮತ್ತು ಅನಗತ್ಯ ವಿಳಂಬ, ರದ್ದತಿ ಹಾಗೂ ಮಾರ್ಗ ಬದಲಾವಣೆಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ" ಎಂದು ಹೇಳಿದರು.
ಜಿಎಂಆರ್ ಏರೋ ಅಧಿಕಾರಿಗಳ ಪ್ರಕಾರ, ಈ ವ್ಯವಸ್ಥೆಯು ತಾಪಮಾನ, ತೇವಾಂಶ, ನೀರಿನ ಆವಿಯ ಸಾಂದ್ರತೆ, ಮೋಡಗಳಲ್ಲಿನ ನೀರಿನ ಅಂಶ, ಗಾಳಿಯ ವೇಗ ಮತ್ತು ದಿಕ್ಕು ಸೇರಿದಂತೆ ಹಲವು ವಾತಾವರಣದ ಅಂಶಗಳನ್ನು ನೈಜ ಸಮಯದಲ್ಲಿ ಮೇಲ್ವಿಚಾರಣೆ ಮಾಡುತ್ತದೆ.
ಈ ವ್ಯವಸ್ಥೆಯು ಮಂಜು ಮೇಲ್ವಿಚಾರಣೆ, ಗಾಳಿಯ ಅಸ್ಥಿರತೆ (ಟರ್ಬುಲೆನ್ಸ್) ಪತ್ತೆ ಹಾಗೂ ತೀವ್ರ ಹವಾಮಾನ ಮುನ್ಸೂಚನೆಗಾಗಿ ವಿವಿಧ ತಂತ್ರಜ್ಞಾನಗಳನ್ನು ಒಳಗೊಂಡಿದೆ. ವಿಶೇಷವಾಗಿ ದೆಹಲಿಯಂತಹ ನಗರಗಳಲ್ಲಿ ಮಾಲಿನ್ಯ ಮತ್ತು ಮಂಜು ಸೇರಿ ಗೋಚರತೆಯನ್ನು ಕಡಿಮೆ ಮಾಡುವ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಸುಧಾರಿತ ಮಂಜು ಮೇಲ್ವಿಚಾರಣಾ ಸಾಧನಗಳನ್ನು ಅಳವಡಿಸಲಾಗಿದೆ. ಇದರಿಂದ ವಿಮಾನ ಸಂಚಾರದ ಅಡಚಣೆಗಳು ಕಡಿಮೆಯಾಗುವ ನಿರೀಕ್ಷೆಯಿದೆ.
ತಜ್ಞರ ಪ್ರಕಾರ, ಈ ಹೊಸ ವ್ಯವಸ್ಥೆಯು ದೆಹಲಿ ವಿಮಾನ ನಿಲ್ದಾಣದ ಕಾರ್ಯಾಚರಣಾ ದಕ್ಷತೆಯನ್ನು ಹೆಚ್ಚಿಸುವುದರ ಜೊತೆಗೆ ಪ್ರಯಾಣಿಕರ ಸುರಕ್ಷತೆಯನ್ನೂ ಮತ್ತಷ್ಟು ಬಲಪಡಿಸಲಿದೆ. ಭಾರತದ ವಿಮಾನಯಾನ ಕ್ಷೇತ್ರದಲ್ಲಿ ಇದು ಮಹತ್ವದ ತಾಂತ್ರಿಕ ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ.
ಭಾರತವು ಸಮಗ್ರ ವಿಮಾನಯಾನ ಹವಾಮಾನ ಮೇಲ್ವಿಚಾರಣಾ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ 19ನೇ ದೇಶವಾಗಿದೆ. ಜಿತೇಂದ್ರ ಸಿಂಗ್ ಅವರ ಪ್ರಕಾರ, ಉತ್ತರ ಪ್ರದೇಶದ ಜೆವಾರ್ ವಿಮಾನ ನಿಲ್ದಾಣದಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಲಾಗುವ ಎರಡನೇ ವಿಮಾನ ನಿಲ್ದಾಣವಾಗಲಿದೆ.












Click it and Unblock the Notifications