ಶಶಿಕಲಾ ನಟರಾಜನ್ ಮುಂದಿನ ಟಾರ್ಗೆಟ್ ಎಐಎಡಿಎಂಕೆ ಮಣ್ಣು ಮುಕ್ಕಿಸುವುದಾ.. ಅಥವಾ?
ಎಐಡಿಎಂಕೆಯ ಉಚ್ಚಾಟಿತ ನಾಯಕಿ ಶಶಿಕಲಾ ನಟರಾಜನ್, ಸೋಮವಾರ (ಫೆ 8) ದೇವನಹಳ್ಳಿಯಿಂದ ಚೆನ್ನೈಗೆ ತಲುಪಲು ತೆಗೆದುಕೊಂಡ ಅವಧಿ ಸುಮಾರು ಹದಿಮೂರು ಗಂಟೆ. ಆರೇಳು ಗಂಟೆಯಲ್ಲಿ ಕ್ರಮಿಸಬಹುದಾದ ಜಾಗವನ್ನು ತಲುಪಲು ಶಶಿಕಲಾ ಇಷ್ಟು ಸಮಯ ತೆಗೆದುಕೊಂಡಿದ್ದು ಕಾರ್ಯಕರ್ತರ ಮತ್ತು ಎಐಎಡಿಎಂಕೆ ನಾಯಕರ ಅಬ್ಬರದ ಸ್ವಾಗತ.
ಈ ಗ್ರ್ಯಾಂಡ್ ಎಂಟ್ರಿಯನ್ನು ಶಶಿಕಲಾ ಕೂಡಾ ಬಯಸಿದ್ದರು. ಕಾರಣ, ಮುಂಬರುವ ವಿಧಾನಸಭಾ ಚುನಾವಣೆ. ಇನ್ನೇನು ಕೆಲವೇ ತಿಂಗಳಲ್ಲಿ ನಡೆಯಲಿರುವ ತಮಿಳುನಾಡು ಅಸೆಂಬ್ಲಿ ಚುನಾವಣೆ, ಶಶಿಕಲಾ ಆಗಮನದಿಂದಾಗಿ ಹೊಸ ಲೆಕ್ಕಾಚಾರಕ್ಕೆ ಉರುಳಿದೆ.
ತಮಿಳುನಾಡಿಗೆ ಶಶಿಕಲಾ ನಟರಾಜನ್ ಗ್ರ್ಯಾಂಡ್ ಎಂಟ್ರಿ: ಮತ್ತೆ ಘರ್ಜಿಸುವುದೇ ಮನ್ನಾರ್ ಗುಡಿ ಗ್ಯಾಂಗ್
ಶಶಿಕಲಾಗೆ ಎಐಎಡಿಎಂಕೆಯಲ್ಲಿ ಯಾವುದೇ ಹಕ್ಕಿಲ್ಲ ಎನ್ನುವುದು ಸಿಎಂ ಪಳನಿಸ್ವಾಮಿ ಕಡೆಯವರ ವಾದವಾದರೆ, ಎಲ್ಲಾ ಹಕ್ಕು ಇದೆ ಎನ್ನುವುದು ಶಶಿಕಲಾ ಬಣದ ವಾದ. ಈ ವಿಚಾರವೇ ಮುಂದಿನ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಬಲ್ಲದು.
ಶೀಘ್ರದಲ್ಲೇ ನಿಮ್ಮನ್ನೆಲ್ಲ ಭೇಟಿಯಾಗುತ್ತೇನೆ, ಸಕ್ರಿಯ ರಾಜಕೀಯಕ್ಕೆ ಬರುತ್ತೇನೆ: ಶಶಿಕಲಾ
ನಾಲ್ಕು ವರ್ಷದ ಬಳಿಕ ಸಕ್ರಿಯ ರಾಜಕಾರಣಕ್ಕೆ ಬರುತ್ತೇನೆ ಎಂದು ಶಶಿಕಲಾ ಹೇಳಿರುವುದು ತಮಿಳುನಾಡಿನಲ್ಲಿ ಸಂಚಲನ ಮೂಡಿಸಿದೆ. ಆದರೆ, ನಾಲ್ಕು ವರ್ಷದ ಬಳಿಕವೋ ಅಥವಾ ಈ ಚುನಾವಣೆಯಲ್ಲೇ ತಮ್ಮ ಶಕ್ತಿಪ್ರದರ್ಶನವನ್ನು ಶಶಿಕಲಾ ಮಾಡಲಿದ್ದಾರೆಯೇ ಎನ್ನುವುದು ಎಐಎಡಿಎಂಕೆಗೆ ಇರುವ ಭಯ. ಅದಕ್ಕೆ ಕಾರಣ ಇಲ್ಲದಿಲ್ಲ..
ಸಿಎಂ ಪಳನಿಸ್ವಾಮಿ ಮತ್ತು ಡಿಸಿಎಂ ಪನ್ನೀರ್ ಸೆಲ್ವಂ
ಶಶಿಕಲಾ ಅಥವಾ ಅವರ ಸೋದರ ಸಂಬಂಧಿ ಟಿ.ಟಿ.ವಿ ದಿನಕರನ್ ಜೊತೆಗೆ ಪಕ್ಷದ ಯಾವ ಮುಖಂಡರಾಗಲಿ, ಕಾರ್ಯಕರ್ತರಾಗಲಿ ಗುರುತಿಸಿಕೊಳ್ಳಬಾರದು ಎಂದು ಸಿಎಂ ಪಳನಿಸ್ವಾಮಿ ಮತ್ತು ಡಿಸಿಎಂ ಪನ್ನೀರ್ ಸೆಲ್ವಂ ಫರ್ಮಾನು ಹೊರಡಿಸಿದ್ದರೂ, ಸುಮಾರು ಇನ್ನೂರು ಕಾರಿನಲ್ಲಿ ಪಕ್ಷದ ಕಾರ್ಯಕರ್ತರು ಶಶಿಕಲಾ ಅವರನ್ನು ಹಿಂಬಾಲಿಸಿದರು. ಇದು, ಎಐಎಡಿಎಂಕೆಗೆ ಆದ ಮೊದಲ ಹಿನ್ನಡೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.
ಬಿಜೆಪಿಯ ಮುಖಂಡರು ಮಧ್ಯಪ್ರವೇಶಿಸುವ ಸಾಧ್ಯತೆ
ಎಐಎಡಿಎಂಕೆಯಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಂದ ಖುಷ್ ಆಗಿರುವವರೆಂದರೆ ಡಿಎಂಕೆ ಮುಖಂಡರು ಮತ್ತು ಸ್ಟಾಲಿನ್. ಶಶಿಕಲಾ ಮತ್ತು ಎಐಎಡಿಎಂಕೆ ನಡುವೆ ಒಮ್ಮತ ಮೂಡದೇ ಇದ್ದರೆ, ಇದರ ಸ್ಪಷ್ಟ ಲಾಭವನ್ನು ಡಿಎಂಕೆ ಪಡೆದುಕೊಳ್ಳುವುದಂತೂ ನಿಶ್ಚಿತ. ಹಾಗಾಗಿ, ಚುನಾವಣೆಯ ವೇಳೆ ಶಶಿಕಲಾ ಮತ್ತು ಎಐಎಡಿಎಂಕೆ ಬಣದ ಬಿಕ್ಕಟ್ಟಿನ ಲಾಭವನ್ನು ಎನ್ಡಿಎ ಮೈತ್ರಿಕೂಟದ ಹೊರತಾದ ಪಕ್ಷಗಳಿಗೆ ಆಗಬಾರದು ಎನ್ನುವ ಕಾರಣಕ್ಕಾಗಿ ಬಿಜೆಪಿಯ ಮುಖಂಡರು ಇದರಲ್ಲಿ ಮಧ್ಯಪ್ರವೇಶಿಸುವ ಸಾಧ್ಯತೆಯಿಲ್ಲದಿಲ್ಲ. (ಚಿತ್ರ:ಪಿಟಿಐ)
ಎಐಎಡಿಎಂಕೆ ಮುಖಂಡರಿಗೆ ಪಾಠ
ತಮ್ಮ ವಿರುದ್ದವಾಗಿ ನಡೆದುಕೊಳ್ಳುತ್ತಿರುವ ಎಐಎಡಿಎಂಕೆ ಮುಖಂಡರಿಗೆ ಪಾಠ ಕಲಿಸುವುದನ್ನು ಆದ್ಯತೆಯಾಗಿ ತೆಗೆದುಕೊಂಡಂತೆ ಕಾಣುತ್ತಿರುವ ಶಶಿಕಲಾ ನಟರಾಜನ್, ಅವರ ವೋಟ್ ಬ್ಯಾಂಕ್ ಅನ್ನು ಇಬ್ಭಾಗ ಮಾಡುವ ಮೂಲಕ ಚುನಾವಣೆಯಲ್ಲಿ ಬುದ್ದಿ ಕಲಿಸುವ ಸಾಧ್ಯತೆ ಇದೆ. ಅವರ ಸದ್ಯದ ನಡೆ ನೋಡಿದರೆ, ಹಾಗೇ ಲೆಕ್ಕಾಚಾರವನ್ನು ಹಾಕಬಹುದು ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.
ತಮ್ಮ ಸೋದರ ಸಂಬಂಧಿ ದಿನಕರನ್ ಅವರ ಅಣ್ಣಾಮಕ್ಕಳ ಮುನ್ನೇತ್ರ ಕಳಗಂ
ತಮ್ಮ ಸೋದರ ಸಂಬಂಧಿ ದಿನಕರನ್ ಅವರ ಅಣ್ಣಾಮಕ್ಕಳ ಮುನ್ನೇತ್ರ ಕಳಗಂ(ಎಎಂಎಂಕೆ) ಪಕ್ಷವನ್ನು ಗೆಲ್ಲಿಸುವ ಉದ್ದೇಶವನ್ನು ಶಶಿಕಲಾ ಹೊಂದಿರುವುದಕ್ಕಿಂತ ಹೆಚ್ಚಾಗಿ ಎಐಎಡಿಎಂಕೆಗೆ ಪಾಠ ಕಲಿಸುವುದೇ ಗುರಿ ಎನ್ನುವುದಾದರೆ, ಡಿಎಂಕೆ ಇದರ ಸಂಪೂರ್ಣ ಲಾಭವನ್ನು ಪಡೆದುಕೊಳ್ಳುವುದಂತೂ ಗ್ಯಾರಂಟಿ. ಮೇಲ್ನೋಟಕ್ಕೆ ಶಶಿಕಲಾ ತಮ್ಮ ಮೂಲ ಪಕ್ಷಕ್ಕೆ ಪಾಠ ಕಲಿಸುವುದನ್ನೇ ಮಾಡಬಹುದು ಎಂದು ಹೇಳಲಾಗುತ್ತಿದೆ.