ದಿವಂಗತ ಪ್ರಧಾನಿ ಇಂದಿರಾ ಗಾಂಧಿಯನ್ನು ಬಂಧಿಸಿದ್ದ ವಿ.ಆರ್.ಲಕ್ಷ್ಮೀನಾರಾಯಣನ್ ನಿಧನ
ಚೆನ್ನೈ, ಜೂನ್ 23: ಭ್ರಷ್ಟಾಚಾರ ಪ್ರಕರಣದಲ್ಲಿ ದಿವಂಗತ ಪ್ರಧಾನಿ ಇಂದಿರಾಗಾಂಧಿ ಅವರನ್ನು ಬಂಧಿಸಿದ್ದ ತಮಿಳುನಾಡಿನ ಮಾಜಿ ಡಿಜಿಪಿ ವಿ.ಆರ್.ಲಕ್ಷ್ಮೀನಾರಾಯಣನ್ ದೀರ್ಘ ಕಾಲದ ಅನಾರೋಗ್ಯದಿಂದ 91ನೇ ವಯಸ್ಸಿನಲ್ಲಿ ಭಾನುವಾರ ನಿಧನರಾಗಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ. ಮೃತರಿಗೆ ಒಬ್ಬ ಮಗ ಹಾಗೂ ಇಬ್ಬರು ಮಗಳಿದ್ದಾರೆ.
1951ನೇ ಬ್ಯಾಚ್ ಐಪಿಎಸ್ ಅಧಿಕಾರಿಯಾದ ಲಕ್ಷ್ಮೀನಾರಾಯಣನ್ ಅವರು ವಿಆರ್ ಎಲ್ ಅಂತಲೇ ಹೆಸರುವಾಸಿ. ಮದುರೈನಲ್ಲಿ ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಹುದ್ದೆಯಿಂದ ವೃತ್ತಿ ಬದುಕು ಆರಂಭಿಸಿದ ಅವರು, ಸಿಬಿಐನಲ್ಲಿ ಜಂಟಿ ನಿರ್ದೇಶಕ ಹುದ್ದೆಯ ತನಕ ತಲುಪಿದವರು.
ಲಕ್ಷ್ಮೀನಾರಾಯಣನ್ ಅವರು ಜವಾಹರ್ ಲಾಲ್ ನೆಹರೂ, ಇಂದಿರಾಗಾಂಧಿ, ಚರಣ್ ಸಿಂಗ್, ಮೊರಾರ್ಜಿ ದೇಸಾಯಿ ಹೀಗೆ ವಿವಿಧ ಪ್ರಧಾನಿಗಳ ಅಡಿಯಲ್ಲಿ ಕಾರ್ಯ ನಿರ್ವಹಿಸಿದ್ದರು. ಭ್ರಷ್ಟಾಚಾರ ಹಗರಣದಲ್ಲಿ ಇಂದಿರಾಗಾಂಧಿ ಅವರನ್ನು 1977ರಲ್ಲಿ ಲಕ್ಷ್ಮೀನಾರಾಯಣನ್ ಬಂಧಿಸಿದ್ದರು.

1985ರಲ್ಲಿ ತಮಿಳುನಾಡಿನ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಆಗಿ ಲಕ್ಷ್ಮೀನಾರಾಯಣನ್ ನಿವೃತ್ತರಾಗಿದ್ದರು. ಅವರು ಭಾನುವಾರ ಮಧ್ಯರಾತ್ರಿ ತೀರಿಕೊಂಡಿದ್ದಾರೆ. ಜೂನ್ ಇಪ್ಪತ್ತೈದನೇ ತಾರೀಕಿನಂದು ಅಂತ್ಯಕ್ರಿಯೆ ನಡೆಯಲಿದೆ.












Click it and Unblock the Notifications