ರಾಜಕೀಯಕ್ಕೆ ಧುಮುಕಿದ ಸಿಂಗಂ: 2021 ಚುನಾವಣೆಯಲ್ಲಿ ಅಣ್ಣಾಮಲೈ ಸ್ಪರ್ಧೆ!
ಚೆನ್ನೈ, ಮೇ 18: ಕರ್ನಾಟಕದ ಸಿಂಗಂ, ಸೂಪರ್ ಕಾಪ್ ಅಂತೆಲ್ಲಾ ಕರೆಯಿಸಿಕೊಳ್ಳುತ್ತಿದ್ದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಇದೀಗ ರಾಜಕೀಯ ಇನ್ನಿಂಗ್ಸ್ ಆರಂಭಿಸಲಿದ್ದಾರೆ. 2021ರ ತಮಿಳುನಾಡು ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅಣ್ಣಾಮಲೈ ನಿರ್ಧರಿಸಿದ್ದಾರೆ.
Recommended Video
ಖಾಕಿ ತೊಟ್ಟಾಗ ರೌಡಿಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದ ಅಣ್ಣಾಮಲೈ ಇದೀಗ ಖಾಕಿ ಬಿಚ್ಚಿಟ್ಟು ಖಾದಿ ತೊಡಲು ಮುಂದಾಗಿದ್ದಾರೆ. ಖಡಕ್ ಆಫೀಸರ್ ನ ಮುಂದಿನ ರಾಜಕೀಯ ಭವಿಷ್ಯ ಹೇಗಿರಲಿದೆ ಎಂಬ ಪ್ರಶ್ನೆ ಸದ್ಯ ಜನಸಾಮಾನ್ಯರನ್ನು ಕಾಡಲಾರಂಭಿಸಿದೆ.
2019, ಮೇ 28 ರಂದು ತಮ್ಮ ಹುದ್ದೆಗೆ ದಿಢೀರ್ ಅಂತ ರಾಜೀನಾಮೆ ನೀಡಿದ್ದ ಅಣ್ಣಾಮಲೈ, ಈಗ ರಾಜಕೀಯಕ್ಕೆ ಧುಮುಕುವ ಸುದ್ದಿಯನ್ನು ಫೇಸ್ ಬುಕ್ ಲೈವ್ ವೇಳೆ ನೀಡಿದ್ದಾರೆ. ಈ ಬಗ್ಗೆ ಫೇಸ್ ಬುಕ್ ಲೈವ್ ನಲ್ಲಿ ಸಿಂಗಂ ಅಣ್ಣಾಮಲೈ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿರುವುದು ಹೀಗೆ..

ಮುಂದಿನ ವರ್ಷ ಚುನಾವಣೆಯಲ್ಲಿ ಸ್ಪರ್ಧೆ
''ಪೊಲೀಸ್ ಆಫೀಸರ್ ಆಗಿ ಹತ್ತು ವರ್ಷ ಕೆಲಸ ಮಾಡಿದ್ದೇನೆ. ಅದನ್ನು 35 ವರ್ಷ ಮುಂದುವರೆಸಲು ನನಗೆ ಸಾಧ್ಯವಿಲ್ಲ. ನನ್ನ ಕುಟುಂಬಕ್ಕೆ ನಾನು ಸಮಯ ಕೊಡಬೇಕು. ಕೃಷಿ ಮಾಡಬೇಕು ಎಂಬ ಆಸೆ ಕೂಡ ನನಗಿದೆ. ಈ ನಡುವೆ 2021 ರ ಏಪ್ರಿಲ್ ನಲ್ಲಿ ಬರುವ ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಿ ನಡೆಸಿದ್ದೇನೆ'' ಎಂದು ಫೇಸ್ ಬುಕ್ ಲೈವ್ ನಲ್ಲಿ ಅಣ್ಣಾಮಲೈ ಹೇಳಿದ್ದಾರೆ.

ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕು
''ತಮಿಳುನಾಡು ರಾಜಕೀಯಕ್ಕೆ ಕಾಲಿಡುತ್ತಿದ್ದೇನೆ. ಸಮಾಜದಲ್ಲಿ ಒಂದು ಬದಲಾವಣೆ ತರಬಹುದು ಎಂಬ ನಂಬಿಕೆ ನನಗಿದೆ. ಸಮಾಜದ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕು. ಅಧಿಕಾರಿಗಳಿಗೆ ಕೆಲಸ ಮಾಡಲು ಒಳ್ಳೆಯ ವಾತಾವರಣ ನಿರ್ಮಾಣ ಮಾಡಿ ಕೊಡಬೇಕು. ಗೆಲ್ತೀನೋ, ಬಿಡ್ತೀನೋ ಗೊತ್ತಿಲ್ಲ'' ಅಂತ ಅಣ್ಣಾಮಲೈ ತಿಳಿಸಿದ್ದಾರೆ.

ಕರ್ನಾಟಕ ನನ್ನ ಕರ್ಮ ಭೂಮಿ
''ಕರ್ನಾಟಕ ನನ್ನ ಕರ್ಮ ಭೂಮಿ. ಕರ್ನಾಟಕವನ್ನ ನಾನು ಮರೆಯಲು ಸಾಧ್ಯವಿಲ್ಲ. ನಾನು ತಮಿಳಿಗನಾಗಿ ಹುಟ್ಟಿರಬಹುದು. ಆದ್ರೆ, ಬೈ ಪ್ಯಾಶನ್ ನಾನು ಕನ್ನಡಿಗ. ಕರ್ನಾಟಕ ನನ್ನ ಹೃದಯದಲ್ಲಿ ಯಾವಾಗಲೂ ನೆಲೆಸಿರುತ್ತದೆ'' ಎಂದಿದ್ದಾರೆ ಅಣ್ಣಾಮಲೈ.

ಪುಸ್ತಕ ಬರೆದಿದ್ದೇನೆ
''ರಾಜಕೀಯ ಮತ್ತು ರಾಜಕಾರಣ, ಸಾಮಾಜಿಕ ವ್ಯವಸ್ಥೆ ಬಗ್ಗೆ ಪುಸ್ತಕ ಬರೆದಿದ್ದೇನೆ. ಇನ್ನೆರಡು ತಿಂಗಳಲ್ಲಿ ಪುಸ್ತಕ ಹೊರಗೆ ಬರಲಿದೆ'' - ಅಣ್ಣಾಮಲೈ.












Click it and Unblock the Notifications