'ಗಜ' ಚಡಮಾರುತ ಕಸಿದ ಪ್ರಾಣಗಳ ಸಂಖ್ಯೆ 45, ನಷ್ಟ ಕೋಟಿ ಕೋಟಿ
'ಗಜ' ಚಡಮಾರುತದಿಂದ ಅನಾಹುತಕ್ಕೀಡಾದ ಪ್ರದೇಶಗಳಿಗೆ ನವೆಂಬರ್ 20ರಂದು ಭೇಟಿ ನೀಡುತ್ತೇನೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಡಪ್ಪಡಿ ಪಳನಿಸ್ವಾಮಿ ಭಾನುವಾರ ಹೇಳಿದ್ದಾರೆ. ಭಾನುವಾರದಂದು ತಮಿಳುನಾಡಿನ ಸೇಲಂನಲ್ಲಿ ಮೇಲ್ಸೇತುವೆ ಉದ್ಘಾಟನೆ ಮಾಡಿದ ನಂತರ ಈ ವಿಚಾರ ತಿಳಿಸಿದರು.
ಈ ಹಿಂದೆಯೇ ನಿಗದಿ ಆಗಿದ್ದ ಕಾರ್ಯಕ್ರಮಗಳ ಸಲುವಾಗಿ ತಕ್ಷಣವೇ 'ಗಜ' ಚಂಡಮಾರುತದ ಅನಾಹುತ ಆಗಿರುವ ಪ್ರದೇಶಗಳಿಗೆ ಭೇಟಿ ನೀಡಲು ಆಗಿಲ್ಲ. ಈ ದಿನ ನಾಗಪಟ್ಟಿಣಂಗೆ ಹೋಗಬೇಕು ಎಂದು ಮುಂಚೆ ನಿಗದಿಯಾಗಿದ್ದ ಯೋಜನೆ. ಆದರೆ ಚಂಡಮಾರುತದಿಂದ ಹಾನಿಗೀಡಾದ ಎಲ್ಲ ಪ್ರದೇಶಗಳಿಗೆ ಭೇಟಿ ನೀಡಲು ಒಂದು ದಿನ ಬೇಕಾಗುತ್ತದೆ. ಆದರಿಂದ ಉಳಿದ ಕೆಲಸ ಪೂರ್ಣಗೊಳಿಸಲು ನಿರ್ಧರಿಸಿದೆ ಎಂದಿದ್ದಾರೆ.
ಮಂಗಳವಾರದಂದು ಚಂಡಮಾರುತದಿಂದ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಲಿದ್ದೇನೆ. ಸದ್ಯಕ್ಕೆ ನಡೆಯುತ್ತಿರುವ ಪರಿಹಾರ ಕಾರ್ಯಗಳ ನಿಗಾ ಮಾಡಲು ಇನ್ನಷ್ಟು ಸಚಿವರನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ವರೆಗೆ 45 ಮಂದಿ ಸಾವಿಗೀಡಾಗಿದ್ದಾರೆ. 700ಕ್ಕೂ ಹೆಚ್ಚು ಪ್ರಾಣಿಗಳು ಸಾವನ್ನಪ್ಪಿವೆ. ಬೆಲೆ ನಷ್ಟದ ಬಗ್ಗೆ ವಿವರ ಕೇಳಲಾಗಿದ್ದು, ಅದನ್ನು ಕೇಂದ್ರಕ್ಕೆ ಕಳಿಸಲಾಗುವುದು ಎಂದಿದ್ದಾರೆ. ಮೃತರ ಕುಟುಂಬಗಳಿಗೆ 10 ಲಕ್ಷ ಪರಿಹಾರ, ಗಂಭೀರವಾಗಿ ಗಾಯಗೊಂಡವರಿಗೆ ಒಂದು ಲಕ್ಷ, ಸಣ್ಣ-ಪುಟ್ಟ ಗಾಯಗಳಾಗಿರುವವರಿಗೆ 25 ಸಾವಿರ ಪರಿಹಾರ ವಿತರಿಸಲಾಗುವುದು ಎಂದಿದ್ದಾರೆ.
ಈ ವರೆಗೆ 56 ಸಾವಿರ ಗುಡಿಸಲುಗಳಿಗೆ ಸಂಪೂರ್ಣ ಹಾನಿಯಾಗಿದೆ. 30 ಸಾವಿರ ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಅವುಗಳಿಗೂ ಪರಿಹಾರ ವಿತರಣೆ ಮಾಡಲಾಗುವುದು. 2 ಲಕ್ಷ ಮಂದಿಯನ್ನು ಸ್ಥಳಾಂತರ ಮಾಡಿದ್ದು, ಅವರನ್ನು 493 ಶಿಬಿರಗಳಲ್ಲಿ ಇರಿಸಲಾಗಿದೆ. ಇದಲ್ಲದೆ 372 ಆರೋಗ್ಯ ಶಿಬಿರ ಹಾಗೂ 1014 ಸಂಚಾರಿ ಆರೋಗ್ಯ ಶಿಬಿರ ಆರಂಭಿಸಲಾಗಿದೆ.

ಚಂಡಮಾರುತದಿಂದ ಭಾರೀ ಸಮಸ್ಯೆ ಆಗಿರುವ ಏಳು ಜಿಲ್ಲೆಗಳಲ್ಲಿ 17 ಲಕ್ಷ ಮರಗಳು ಧರೆಗುರುಳಿವೆ. 347 ಟ್ರಾನ್ಸ್ ಫಾರ್ಮರ್ಸ್, 39 ಸಾವಿರ ವಿದ್ಯುತ್ ಕಂಬಗಳು, 3559 ಕಿಲೋಮೀಟರ್ ವಿದ್ಯುತ್ ವೈರ್ ಗೆ ಹಾನಿಯಾಗಿ, ವಿದ್ಯುತ್ ಪೂರೈಕೆಗೆ ಅಸ್ತವ್ಯಸ್ತವಾಗಿದೆ. ವಿದ್ಯುತ್ ಮಂಡಳಿಯ ದೊಡ್ಡ ಸಂಖ್ಯೆಯ ಸಿಬ್ಬಂದಿ ಮತ್ತೆ ಮೊದಲಿನಂತೆ ಸೇವೆ ದೊರಕುವಂತೆ ಮಾಡಲು ಶ್ರಮಪಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.












Click it and Unblock the Notifications