ವಿಕ್ರಂ ಲ್ಯಾಂಡರ್ ಸಂಪರ್ಕ ಕಳೆದುಕೊಂಡಿದ್ದೇಕೆ? ವಿಜ್ಞಾನಿ ನೀಡಿದ ವಿವರ...
Recommended Video
ಚೆನ್ನೈ, ಸೆಪ್ಟೆಂಬರ್ 09: 'ಚಂದ್ರನ ಮೇಲ್ಮೈ ಮೇಲಿದ್ದ ಅಡೆತಡೆಗಳೇ ವಿಕ್ರಂ ಲ್ಯಾಂಡರ್ ಸಂಪರ್ಕ ಕಳೆದುಕೊಳ್ಳಲು ಕಾರಣ' ಎಂದು ಚಂದ್ರಯಾನ-1 ರ ನಿರ್ದೇಶಕರಾಗಿದ್ದ ಮೈಲ್ ಸ್ವಾಮಿ ಅಣ್ಣಾದುರೈ ಹೇಳಿದ್ದಾರೆ.
"ಲ್ಯಾಂಡರ್ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡುವ ಬದಲು ವೇಗ ತಗ್ಗಿಸಲಾಗದೆ ಜೋರಾಗಿ ಅಪ್ಪಳಿಸಿದ್ದಿರಬಹುದು, ಇದರಿಂದ ಲ್ಯಾಂಡರ್ ಛಿದ್ರವಾಗಿದ್ದಿರಬಹುದು, ಇದರಿಂದ ಸಂವಹನ ನಾಶವಾಗಿರಬಹುದು ಎಂದು ಕೆಲವರು ಅಂದಾಜಿಸಿದ್ದಿರಬಹುದು. ಆದರೆ ಈಗಾಗಲೇ ಲ್ಯಾಂಡರ್ ಚಂದ್ರನ ಮೇಲಿರುವುದನ್ನು ಆರ್ಬಿಟರ್ ಖಾತ್ರಿ ಪಡಿಸಿದೆ. ಆದ್ದರಿಂದ ಚಂದ್ರನಲ್ಲಿನ ಪ್ರತಿಕೂಲ ವಾತಾವರಣ ಮತ್ತು ಅಡೆತಡೆಗಳಿಂದ ಸಂವಹನ ಕಳೆದುಕೊಂಡಿರಬಹುದಷ್ಟೇ" ಎಂದು ಅಣ್ಣಾದುರೈ ಹೇಳಿದ್ದಾರೆ.
"ಈಗ ಲ್ಯಾಂಡರ್ ಪತ್ತೆಯಾಗಿರುವ ಸ್ಥಳ ಬಹುಶಃ ಲ್ಯಾಂಡಿಂಗ್ ಗೆ ಸಾಕಷ್ಟು ಅನುಕೂಲಕರವಾದ ಸ್ಥಳವಾಗಿಲ್ಲದೆ ಇರಬಹುದು. ಆದ್ದರಿಂದ ಅಡೆತಡೆಗಳಾಗುವುದು ಸಹಜ. ಈಗಾಗಲೇ ಇಸ್ರೋ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದೆ. 5-10 ನಿಮಿಷಗಳ ಕಾಲ ಲ್ಯಾಂಡರ್ ಸಂಪರ್ಕಕ್ಕೆ ಸಿಕ್ಕರೂ ಸಾಕು" ಎಂದು ಅವರು ಹೇಳಿದ್ದಾರೆ.

"ಯಾವಾಗಲೂ ಆರ್ಬಿಟರ್ ಮತ್ತು ಲ್ಯಾಂಡರ್ ನಡುವೆ ಎರಡೂ ಬದಿಯ ಸಂವಹನ ಮುಖ್ಯ. ಆದರೆ ಈ ಸಂದರ್ಭದಲ್ಲಿ ನಮಗೆ ಲ್ಯಾಂಡರ್ ನಿಂದ ಸಂವಹನ ಸಿಕ್ಕರೆ ಸಾಕು. ಅದಾದರೆ ಈ ಯೋಜನೆ ಸಂಪೂರ್ಣವಾಗಿ ಯಶಸ್ವಿಯಾದಂತೆ. ಅದು ಸುಲಭವಿಲ್ಲ. ಆದರೂ ನಾವು ಭರವಸೆ ಕಳೆದುಕೊಳ್ಳುವುದು ಬೇಡ " ಎಂದು ಅಣ್ಣಾದುರೈ ಹೇಳಿದ್ದಾರೆ.
ಜುಲೈ 22 ರಂದು ನಭಕ್ಕೆ ಹಾರಿದ ಚಂದ್ರಯಾನ-2 ನೌಕೆ ಆರ್ಬಿಟರ್, ವಿಕ್ರಂ ಹೆಸರಿನ ಲ್ಯಾಂಡರ್, ಪ್ರಜ್ಞಾನ್ ಹೆಸರಿನ ರೋವರ್ ಅನ್ನು ಹೊತ್ತು ಚಂದ್ರನಲ್ಲಿಗೆ ಸಾಗಿತ್ತು. ಆರ್ಬಿಟರ್ ನಿಂದ ಯಶಸ್ವಿಯಾಗಿ ಬೇರ್ಪಟ್ಟ ಲ್ಯಾಂಡರ್, ರೋವರ್ ಅನ್ನು ಹೊತ್ತು ಚಂದ್ರನ ಅಂಗಳಕ್ಕೆ ಇಳಿಯಲು ಹೊರಟಿತ್ತು. ಆದರೆ ಸೆಪ್ಟೆಂಬರ್ 7 ರ ಬೆಳಗ್ಗಿನ ಜಾವ ಚಂದ್ರನನ್ನು ತಲುಪಲು ಇನ್ನೂ 2.1 ಕಿ.ಮೀ.ಬಾಕಿ ಇರುವಾಗ ಲ್ಯಾಂಡರ್ ಆರ್ಬಿಟರ್ ನೊಂದಿಗೆ ಸಂಪರ್ಕ ಕಳೆದುಕೊಂಡಿತ್ತು. ಚಂದ್ರನ ಮೇಲೆ ಲ್ಯಾಂಡರ್ ತೆರಳಿದೆಯೋ ಇಲ್ಲವೋ, ಸುರಕ್ಷಿತವಾಗಿದೆಯೋ ಇಲ್ಲವೋ ಎಂಬೆಲ್ಲ ಪ್ರಶ್ನೆಗಳಿಗೆ ಸೆಪ್ಟೆಂಬರ್ 8 ರಂದು ಉತ್ತರ ದೊರಕಿತ್ತು. ಚಂದ್ರನ ಮೇಲೆ ಲ್ಯಾಂಡ್ ಆಗಿರುವ ವಿಕ್ರಂ ಲ್ಯಾಂಡರ್ ನ ಥರ್ಮಲ್ ಇಮೇಜ್ ಅನ್ನು ಆರ್ಬಿಟರ್ ಇಸ್ರೋಕ್ಕೆ ಕಳಿಸಿತ್ತು. 14 ದಿನಗಳ ಆಯುಷ್ಯ ಪಡೆದಿರುವ ಲ್ಯಾಂಡರ್ ಇನ್ನು 12 ದಿನಗಳ ಒಳಗೆ ಆರ್ಬಿಟರ್ ನೊಂದಿಗೆ ಸಂಪರ್ಕ ಪಡೆದರೆ ಭಾರತ ವಿಶ್ವದ ಯಾವ ದೇಶವೂ ಮಾಡಿರದ ಚಾರಿತ್ರಿಕ ಸಾಧನೆಯೊಂದನ್ನು ಮಾಡಿದಂತಾಗುತ್ತದೆ.












Click it and Unblock the Notifications