ಸೆನ್ಸಾರ್ ಒಪ್ಪಿದ ಮೇಲೆ ನಿಮ್ಮದೇನು ತಕರಾರು: ಜಯಾ ಪಕ್ಷಕ್ಕೆ ರಜನಿ ತರಾಟೆ
ಚೆನ್ನೈ, ನವೆಂಬರ್ 9: ವಿಜಯ್ ಅಭಿನಯದ ತಮಿಳು ಸಿನಿಮಾ 'ಸರ್ಕಾರ್'ನ ಕೆಲ ದೃಶ್ಯಗಳ ಬಗ್ಗೆ ಆಡಳಿತಾರೂಢ ಎಐಎಡಿಎಂಕೆ ಆಕ್ಷೇಪ ವ್ಯಕ್ತಪಡಿಸುತ್ತಿರುವಾಗಲೇ ನಟ ರಜನೀಕಾಂತ್ ಸಿನಿಮಾದ ಪರವಾಗಿ ಮಾತನಾಡಿದ್ದಾರೆ. ಪ್ರತಿಭಟನೆ ನಡೆಸುತ್ತಿರುವ ಎಐಎಡಿಎಂ ಕ್ರಮವನ್ನು ಖಂಡಿಸಿದ್ದಾರೆ.
'ಸರ್ಕಾರ್' ಸಿನಿಮಾಗೆ ಸೆನ್ಸಾರ್ ಮಂಡಳಿಯಿಂದಲೇ ಯಾವುದೇ ಆಕ್ಷೇಪ ಮಾಡದೆ ಬಿಡುಗಡೆಗೆ ಒಪ್ಪಿಗೆ ನೀಡಿದ್ದಾರೆ. ಅಂಥದ್ದರಲ್ಲಿ ಚಿತ್ರದಲ್ಲಿನ ಕೆಲವು ದೃಶ್ಯಗಳನ್ನು ಕತ್ತರಿಸಬೇಕು ಎಂದು ಆಗ್ರಹಿಸುವುದನ್ನು "ನಾನು ಬಲವಾಗಿ ಖಂಡಿಸುತ್ತೇನೆ" ಎಂದಿದ್ದಾರೆ.
ಸೆನ್ಸಾರ್ ಮಂಡಳಿಯಿಂದ ಪ್ರಮಾಣ ಪತ್ರ ಪಡೆದ ಮೇಲೆ ಸಿನಿಮಾದ ಕೆಲವು ದೃಶ್ಯಗಳನ್ನು ತೆಗೆಯುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುವುದು ಕಾನೂನಿಗೆ ವಿರುದ್ಧವಾದದ್ದು. ಚಿತ್ರ ಪ್ರದರ್ಶನ ತಡೆಯುವುದು, ಬ್ಯಾನರ್ ಗೆ ಹಾನಿ ಮಾಡುವುದು ಕೂಡ ಕಾನೂನು ಬಾಹಿರ ಚಟುವಟಿಕೆ ಎಂದು ರಜನೀಕಾಂತ್ ತಮಿಳಿನಲ್ಲಿ ಟ್ವೀಟ್ ಮಾಡಿದ್ದಾರೆ.

ಯಾವಾಗ ಆಡಳಿತಾರೂಢ ಪಕ್ಷದ ಕಾರ್ಯಕರ್ತರಿಂದ ಭಾರೀ ಆಕ್ರೋಶ ವ್ಯಕ್ತವಾಯಿತೋ ಆ ನಂತರ ಚಿತ್ರದಲ್ಲಿನ 'ಆಕ್ಷೇಪಾರ್ಹ' ದೃಶ್ಯಗಳನ್ನು ತೆಗೆಯಲು ಹಾಗೂ ದಿವಂಗತ ಮುಖ್ಯಮಂತ್ರಿ ಜಯಲಲಿತಾ ಬಗ್ಗೆ ಇರುವ ಮಾತುಗಳನ್ನು 'ಮ್ಯೂಟ್' ಮಾಡಲು ಸರ್ಕಾರ್ ಚಿತ್ರತಂಡ ಒಪ್ಪಿಕೊಂಡಿದೆ ಎಂದು ಗುರುವಾರ ತಿಳಿಸಲಾಗಿತ್ತು.
ಒಂದು ವೇಳೆ ನಮ್ಮ ಬೇಡಿಕೆಗೆ ಸ್ಪಂದಿಸಲಿಲ್ಲ ಅಂದರೆ ಚಿತ್ರ ನಿರ್ಮಾಪಕರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಎಐಎಡಿಎಂಕೆ ಸಚಿವರು ಬೆದರಿಕೆ ಹಾಕಿದ್ದರು. "ಈ ಸಿನಿಮಾ ಹಿಂಸಾಚಾರವನ್ನು ಪ್ರಚೋದಿಸುವಂತಿದೆ" ಎಂದು ಕಾನೂನು ಸಚಿವ ಸಿ.ವಿ.ಷಣ್ಮುಗಂ ಹೇಳಿದ್ದರು.
ಎಡಿಟ್ ಆಗಿರುವ ಸಿನಿಮಾದ ಪ್ರದರ್ಶನ ಶುಕ್ರವಾರದಿಂದ ಪ್ರದರ್ಶನ ಮಾಡಲಾಗುವುದು ಎಂದು ಚಿತ್ರಮಂದಿರಗಳ ಮಾಲೀಕರ ಗುಂಪು ಘೋಷಣೆ ಮಾಡಿದೆ. ಸರ್ಕಾರ್ ಸಿನಿಮಾವನ್ನು ನಿರ್ಮಾಣ ಮಾಡಿರುವುದು ಸನ್ ಪಿಕ್ಚರ್ಸ್. ವಿಜಯ್, ಕೀರ್ತಿ ಸುರೇಶ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನವೆಂಬರ್ 6ರಂದು ಬಿಡುಗಡೆಯಾದ ಚಿತ್ರಕ್ಕೆ ಎ.ಆರ್.ಮುರುಗದಾಸ್ ನಿರ್ದೇಶನ ಹಾಗೂ ಎ.ಆರ್. ರೆಹಮಾನ್ ಸಂಗೀತವಿದೆ.












Click it and Unblock the Notifications