ತಮಿಳುನಾಡು ಸಚಿವ ರಾಜು ಕಚೇರಿ ಮೇಲೆ ಬಾಂಬ್ ಎಸೆತ ಏಕೆ?
ಮಧುರೈ, ಜ. 10: ತಮಿಳುನಾಡು ಸಹಕಾರ ಸಚಿವ,ಪಶ್ಚಿಮ ಮಧುರೈ ಶಾಸಕ ಸೆಲ್ಲೂರ್ ಕೆ. ರಾಜು ಅವರ ಕಚೇರಿ ಆವರಣದಲ್ಲಿ ಶನಿವಾರ ರಾತ್ರಿ ನಡೆದ ಬಾಂಬ್ ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಅಪರಿಚಿತರು ಕಚ್ಚಾ ಬಾಂಬ್ ಎಸೆದು ಸ್ಫೋಟಿಸಿದ ಘಟನೆ ನಡೆದಿತ್ತು. ಇತ್ತೀಚೆಗೆ ಐತಿಹಾಸಿಕ ಮೀನಾಕ್ಷಿ ದೇಗುಲದ ಸಮೀಪ ಕೂಡಾ ಬಾಂಬ್ ಎಸೆತ ಘಟನೆ ನಡೆದಿತ್ತು.
ಶನಿವಾರ ರಾತ್ರಿ ಸುಮಾರು 11.30 ಗಂಟೆಗೆ ಸಚಿವರ ಕಚೇರಿ ಸಮೀಪ ಕಚ್ಚಾ ಬಾಂಬ್ ಎಸೆಯಲಾಗಿತ್ತು. ಪೆಟ್ರೋಲ್ ತುಂಬಿದ ಬಾಟಲಿಯನ್ನು ಎಸೆದಿದ್ದು ಸ್ಫೋಟದಿಂದ ಒಬ್ಬರಿಗೆ ಗಾಯವಾಗಿದೆ. ಸ್ಫೋಟದಿಂದ ಗಾಯವಾಗಿಲ್ಲ. ಸ್ಫೋಟದ ನಂತರ ಬಾಟಲಿಯ ಚೂರುಗಳನ್ನು ಎತ್ತಿ ಎಸೆಯಲು ಹೋದಾಗ ಆಯತಪ್ಪಿ ಚೂರುಗಳಿಂದ ಗಾಯ ಮಾಡಿಕೊಂಡಿದ್ದಾರೆ ಎಂಬ ಸುದ್ದಿಯೂ ಇದೆ.

ಮೇಲ್ನೋಟಕ್ಕೆ ಇದು ರಾಜಕೀಯ ದ್ವೇಷದಿಂದ ನಡೆದ ಕೃತ್ಯ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಂಧಿತ ಮೂವರು ಶಂಕಿತರನ್ನು ತೀವ್ರ ವಿಚಾರಣೆಗೊಳಪಡಿಸಲಾಗುತ್ತಿದೆ. ಮೀನಾಕ್ಷಿ ದೇಗುಲದ ಪ್ರಕರಣಕ್ಕೂ ಈ ಘಟನೆಗೂ ಸಂಬಂಧ ಇರುವ ಅನುಮಾನ ವ್ಯಕ್ತವಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಎಸ್ಎಸ್ ಕಾಲೋನಿ ಪೊಲೀಸರು ಈ ಬಗ್ಗೆ ಪ್ರತಿಕ್ರಿಯಿಸಿ, ದೇಗುಲ ಬಳಿ ಸ್ಫೋಟಕ್ಕೆ ಸ್ಥಳೀಯ ವ್ಯಾಪಾರಿಗಳ ಕಿತ್ತಾಟ ಕಾರಣವಾಗಿದ್ದು, ಆ ಪ್ರಕರಣಕ್ಕೂ ಈ ಘಟನೆಗೂ ಹೋಲಿಕೆ ಇದ್ದರೂ ಸಂಬಂಧವಿಲ್ಲ ಎಂದಿದ್ದಾರೆ. ಒಟ್ಟಾರೆ, ಚುನಾವಣೆಗೂ ಮುನ್ನ ಎಐಎಡಿಎಂಕೆ ನಾಯಕರ ಮೇಲೆ ದಾಳಿ ಪ್ರಕರಣಗಳು ಹೆಚ್ಚಾಗುವ ಆತಂಕ ಎದುರಾಗಿದೆ.












Click it and Unblock the Notifications