150 ಪದಾಧಿಕಾರಿಗಳನ್ನು ಉಚ್ಚಾಟಿಸಿದ ಎಐಎಡಿಎಂಕೆ
ಚೆನ್ನೈ, ಫೆಬ್ರವರಿ 09: ಎಐಎಡಿಎಂಕೆ ಪಕ್ಷದಿಂದ ಮತ್ತೊಮ್ಮೆ ಅಮಾನತು ಪ್ರಕ್ರಿಯೆ ನಡೆಸಲಾಗಿದೆ. ಎರಡು ಜಿಲ್ಲೆಗಳಿಂದ ಸರಿ ಸುಮಾರು 150ಕ್ಕೂ ಅಧಿಕ ಪದಾಧಿಕಾರಿಗಳನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ.
ಅಮಾನತುಗೊಂಡವರ ಪೈಕಿ ಮಾಜಿ ಸಚಿವ ಜಿ ಸೆಂಥಮಿಳನ್ ಹಾಗೂ ಹಿರಿಯ ನಾಯಕ ಪರಿಥಿ ಇಳಮ್ ವಳುಥಿ ಸೇರಿದ್ದಾರೆ. ದಕ್ಷಿಣ ಚೆನ್ನೈ ಹಾಗೂ ಕಡಲೂರು ಪಶ್ಚಿಮ ಜಿಲ್ಲೆಗಳಲ್ಲಿನ ಸುಮಾರು 150 ಪದಾಧಿಕಾರಿಗಳನ್ನು ಉಚ್ಚಾಟಿಸಲು ಮುಖ್ಯ ಕಾರಣ-ಆರ್ ಕೆ ನಗರ ಉಪ ಚುನಾವಣೆಯಲ್ಲಿ ಪಕ್ಷಕ್ಕಾದ ಹೀನಾಯ ಸೋಲು.
ಸೆಂಥಮಿಳನ್ ಅವರು 2011 ರಿಂದ 2016 ತನಕ ಇದ್ದ ಎಐಎಡಿಎಂಕೆ ಸರ್ಕಾರದಲ್ಲಿ ಸಚಿವರಾಗಿದ್ದರು. ಡಿಎಂಕೆಯಲ್ಲಿದ್ದ ಇಳಮ್ ವಳುಥಿ ಅವರು 2013ರಲ್ಲಿ ಅಣ್ಣಾ ಡಿಎಂಕೆ ಸೇರಿದ್ದರು. ಇವರಿಬ್ಬರು ಶಶಿಕಲಾ ಬಣದ ಟಿಟಿವಿ ದಿನಕರನ್ ಬೆಂಬಲಿಗರಾಗಿದ್ದಾರೆ.
ದಿನಕರನ್ ಬೆಂಬಲಿತ 44 ಕಾರ್ಯಕರ್ತರಿಗೆ ಗೇಟ್ ಪಾಸ್
ಪಕ್ಷದ ಶಿಸ್ತು ಉಲ್ಲಂಘನೆ, ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದ ಹಿನ್ನಲೆಯಲ್ಲಿ ಪದಾಧಿಕಾರಿಗಳನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ, ಎಲ್ಲರೂ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಈ ಕೂಡಲೇ ಕಳೆದುಕೊಂಡಿದ್ದಾರೆ.
ಅಮಾನತುಗೊಂಡ ಸದಸ್ಯರ ಜತೆ ಯಾರಾದರೂ ಸಂಪರ್ಕ ಇಟ್ಟುಕೊಂಡರೆ ಅವರನ್ನು ಉಚ್ಚಾಟಿಸಲಾಗುವುದು ಎಂದು ಪನ್ನೀರ್ ಸೆಲ್ವಂ ಹಾಗೂ ಪಳನಿಸ್ವಾಮಿ ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿಂದು ಹೇಳಿದರು.