ರಜನಿಕಾಂತ್ ನಿರ್ಧಾರಕ್ಕೆ ನಟ ಕಮಲ್ ಹಾಸನ್ ಪ್ರತಿಕ್ರಿಯೆ...
ಚೆನ್ನೈ, ಡಿಸೆಂಬರ್ 29: ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯದಿಂದ ಹಿಂದೆ ಸರಿದಿದ್ದು, ಮಂಗಳವಾರ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಆರೋಗ್ಯದ ಕಾರಣದಿಂದ ಅನಿವಾರ್ಯವಾಗಿ ರಾಜಕೀಯದಿಂದ ಹಿಂದೆ ಸರಿಯಬೇಕಿದೆ, ತಾವು ಪಕ್ಷ ಸ್ಥಾಪಿಸುವುದಿಲ್ಲ ಎಂದು ತಿಳಿಸಿದ್ದಾರೆ.
ರಜನಿಕಾಂತ್ ಅವರ ಈ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿರುವ ನಟ ಹಾಗೂ ಮಕ್ಕಳ ನೀತಿ ಮಯ್ಯಂ ಮುಖ್ಯಸ್ಥ ಕಮಲ್ ಹಾಸನ್, "ರಜನಿಕಾಂತ್ ಅವರ ಈ ನಿರ್ಧಾರದಿಂದ ನಿರಾಸೆ, ಬೇಸರವಾಗಿದೆ" ಎಂದಿದ್ದಾರೆ.
"ನನಗಷ್ಟೇ ಈ ನೋವು ಗೊತ್ತು"; ರಾಜಕೀಯದಿಂದ ಹಿಂದೆ ಸರಿದ ರಜನಿಕಾಂತ್
"ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆಗೆ ತಯಾರಿ ನಡೆಯುತ್ತಿದ್ದು, ಚುನಾವಣಾ ಪ್ರಚಾರದ ನಂತರ ರಜನಿಕಾಂತ್ ಅವರನ್ನು ಮತ್ತೆ ಭೇಟಿಯಾಗುತ್ತೇನೆ. ಈ ನಿರ್ಧಾರದಿಂದ ಅವರ ಅಭಿಮಾನಿಗಳಂತೆ ನನಗೂ ಬೇಸರವಾಗಿದೆ. ಆದರೆ ಅವರ ಆರೋಗ್ಯವೇ ಎಲ್ಲಕ್ಕಿಂತ ಮುಖ್ಯ" ಎಂದು ಹೇಳಿದ್ದಾರೆ.
ಮಂಗಳವಾರ ಬೆಳಿಗ್ಗೆ ನಟ ರಜನಿಕಾಂತ್ ತಮ್ಮ ರಾಜಕೀಯನೆ ಪ್ರವೇಶದ ಕುರಿತು ನಿರ್ಧಾರವನ್ನು ಘೋಷಿಸಿದ್ದರು. ಆರೋಗ್ಯದ ಕಾರಣದಿಂದಾಗಿ ತಾವು ರಾಜಕೀಯ ಪ್ರವೇಶ ಮಾಡುವುದಿಲ್ಲ ಎಂದು ಮೂರು ಪುಟಗಳ ಪತ್ರವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದರು. "ಈ ನಿರ್ಧಾರ ತೆಗೆದುಕೊಳ್ಳುವಾಗಿನ ನೋವು ನನಗಷ್ಟೆ ಗೊತ್ತು. ಆದರೆ ರಾಜಕೀಯದ ಹೊರತಾಗಿ ಜನರ ಸೇವೆ ಮಾಡುತ್ತೇನೆ" ಎಂದು ತಿಳಿಸಿದ್ದರು.
ಇದೇ ಜನವರಿಗೆ ರಜನಿಕಾಂತ್ ತಮ್ಮ ಪಕ್ಷ ಸ್ಥಾಪನೆ ಮಾಡಬೇಕಿದ್ದು, ಡಿ.31ರಂದು ವಿವರ ಹಂಚಿಕೊಳ್ಳುವುದಾಗಿ ತಿಳಿಸಿದ್ದರು. ತಮಿಳುನಾಡಿನ ಜನರ ಒಳಿತಿಗಾಗಿ ರಾಜಕೀಯ ಪ್ರವೇಶ ಮಾಡುತ್ತಿದ್ದು, ಜನರ ಬೆಂಬಲಕ್ಕೆ ಮನವಿ ಮಾಡಿದ್ದರು. ಈ ನಡುವೆ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ನಟ ರಜನಿಕಾಂತ್ ಹಾಗೂ ಕಮಲ್ ಹಾಸನ್ ಪಕ್ಷದ ಮೈತ್ರಿ ಕುರಿತೂ ಮಾತು ಕೇಳಿಬಂದಿದ್ದವು. ನಮ್ಮಿಬ್ಬರ ಸಿದ್ಧಾಂತಗಳು ಒಂದೇ ಆಗಿದ್ದಲ್ಲಿ ಮೈತ್ರಿಗೆ ನಾವು ಸಿದ್ಧ ಎಂದು ಕಮಲ್ ಹಾಸನ್ ಕೂಡ ಹೇಳಿಕೆ ನೀಡಿದ್ದರು.
ಇದರ ಬೆನ್ನಲ್ಲೇ ರಜನಿಕಾಂತ್ ಅವರು ಮಂಗಳವಾರ ರಾಜಕೀಯದಿಂದ ಹಿಂದೆ ಸರಿಯುತ್ತಿರುವುದಾಗಿ ಘೋಷಿಸಿದ್ದಾರೆ.