ಬಾಯ್ ಫ್ರೆಂಡ್ ಗಳ ಮೇಲೆ ಸುಳ್ಳು ಅತ್ಯಾಚಾರ ದೂರು ಕೊಡ್ತಾರೆ ಹೆಣ್ಣುಮಕ್ಕಳು: ಹರಿಯಾಣ ಸಿಎಂ
ಚಂಡೀಗಢ, ನವೆಂಬರ್ 18: ತಮ್ಮಿಂದ ಬೇರೆಯಾದ ಗೆಳೆಯರನ್ನು ವಾಪಸ್ ಪಡೆಯುವ ಸಲುವಾಗಿ ಮಹಿಳೆಯರು ಸುಳ್ಳು ಅತ್ಯಾಚಾರ ಪ್ರಕರಣಗಳನ್ನು ದಾಖಲಿಸುತ್ತಾರೆ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಶನಿವಾರ ಹೇಳಿದ್ದಾರೆ.
ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಾ, ಹರಿಯಾಣದಲ್ಲಿ ಈಚಿನ ವರ್ಷಗಳಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿವೆ ಎಂಬ ಆರೋಪಕ್ಕೆ ಉತ್ತರ ನೀಡಿದ ಅವರು, ಈ ಹಿಂದೆ ಅತ್ಯಾಚಾರಗಳು ಆಗುತ್ತಿದ್ದವು ಮತ್ತು ಈಗಲೂ ಆಗುತ್ತಿವೆ. ಆದರೆ ಈಗ ಆ ಬಗ್ಗೆ ಕಾಳಜಿ ಹೆಚ್ಚಾಗಿದೆ ಎಂದಿದ್ದಾರೆ.
80ರಿಂದ 90% ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯದ ಪ್ರಕರಣಗಳು ಇಬ್ಬರು ಪರಿಚಯಸ್ಥರ ಮಧ್ಯೆಯೇ ನಡೆಯುತ್ತದೆ. ಹಲವು ದಿನಗಳು ಒಟ್ಟಿಗೆ ಸುತ್ತಾಡುತ್ತಾರೆ. ಒಂದು ದಿನ ದೂರ ಆದಾಗ, ಮಹಿಳೆಯು ಅತ್ಯಾಚಾರ ಆಗಿದೆ ಎಂದು ದೂರು ದಾಖಲಿಸುತ್ತಾರೆ ಎಂದು ಅವರು ಹೆಳಿದ್ದಾರೆ.
ಖಟ್ಟರ್ ಸರಕಾರದ ಮಹಿಳೆ ವಿರೋಧಿ ಧೋರಣೆ ಈ ಮೂಲಕ ಬಯಲಾಗಿದೆ! ಮುಖ್ಯಮಂತ್ರಿ ಖಟ್ಟರ್ ಅವರು ಖಂಡನಾರ್ಹವಾದ ಹೇಳಿಕೆ ನೀಡಿದ್ದಾರೆ. ಅತ್ಯಾಚಾರ ಹಾಗೂ ಸಾಮೂಹಿಕ ಅತ್ಯಾಚಾರ ತಡೆಯಲು ಸಂಪೂರ್ಣ ವಿಫಲರಾಗಿದ್ದಕ್ಕೆ ಮಹಿಳೆಯರು ಹೊಣೆಯೇ? ಇದು ಶೋಚನೀಯ ಎಂದು ಕಾಂಗ್ರೆಸ್ ನಾಯಕ ರಣ್ ದೀಪ್ ಸಿಂಗ್ ಸುರ್ಜೇವಾಲಾ ಟ್ವೀಟ್ ಮಾಡಿದ್ದಾರೆ.

ಮುಖ್ಯಮಂತ್ರಿಯಿಂದಲೇ ಅತ್ಯಾಚಾರಕ್ಕೆ ಸಮರ್ಥನೆ
ರಾಜ್ಯದ ಮುಖ್ಯಮಂತ್ರಿಯೊಬ್ಬರು ಹೀಗೆ ಯೋಚನೆ ಮಾಡ್ತಾರೆ ಅಂದರೆ, ಹೆಣ್ಣುಮಕ್ಕಳು ಹೇಗೆ ಇಲ್ಲಿ ಸುರಕ್ಷಿತ ಇರಲು ಸಾಧ್ಯ? ಮುಖ್ಯಮಂತ್ರಿಗಳು ಅತ್ಯಾಚಾರವನ್ನು ಸಮರ್ಥಿಸಿಕೊಂಡಿದ್ದಾರೆ. ಆ ಕಾರಣಕ್ಕೆ ಹರಿಯಾಣದಲ್ಲಿ ಅತ್ಯಾಚಾರ ಹೆಚ್ಚುತ್ತಿದೆ. ಅತ್ಯಾಚಾರಿಗಳ ಬಂಧನ ಆಗುತ್ತಿಲ್ಲ, ಆರಾಮವಾಗಿ ಓಡಾಡಿಕೊಂಡಿದ್ದಾರೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಭಾನುವಾರ ಟ್ವೀಟ್ ಮಾಡಿದ್ದಾರೆ.

ಖಟ್ಟರ್ ಈ ರೀತಿ ಹೇಳಿಕೆ ಇದೇ ಮೊದಲಲ್ಲ
ಖಟ್ಟರ್ ಈ ರೀತಿ ಹೇಳಿಕೆ ನೀಡುತ್ತಿರುವುದು ಇದೇ ಮೊದಲಲ್ಲ. ಹೆಣ್ಣುಮಕ್ಕಳು ಸಭ್ಯವಾಗಿ ಬಟ್ಟೆ ಧರಿಸಿದರೆ ಯಾವ ಹುಡುಗರೂ ತಪ್ಪಾದ ದೃಷ್ಟಿಯಲ್ಲಿ ನೋಡುವುದಿಲ್ಲ. ಅವರಿಗೆ ನಿಜಕ್ಕೂ ಆಯ್ಕೆ ಸ್ವಾತಂತ್ರ್ಯ ಬೇಕು ಅಂದರೆ, ಅವರು ಯಾಕೆ ಬೆತ್ತಲೆಯಾಗಿ ನಡೆದಾಡಬಾರದು? ಸ್ವಾತಂತ್ರ್ಯಕ್ಕೂ ಒಂದು ಮಿತಿ ಬೇಕು. ಈ ಸಣ್ಣ ಬಟ್ಟೆಗಳು ಪಾಶ್ಚಿಮಾತ್ಯರ ಪ್ರಭಾವ. ನಮ್ಮ ದೇಶದ ಸಂಸ್ಕೃತಿಯು ಹೆಣ್ಣುಮಕ್ಕಳಿಗೆ ಸಭ್ಯವಾಗಿ ಬಟ್ಟೆ ಧರಿಸುವಂತೆಯೇ ಹೇಳುತ್ತದೆ.

ಅತ್ಯಾಚಾರ ಪ್ರಕರಣಗಳಲ್ಲಿ 47% ಏರಿಕೆ
ಇತ್ತೀಚೆಗೆ ಹರಿಯಾಣದ ವಿಧಾನಸಭೆಯಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ವರದಿ ಮಂಡಿಸಲಾಗಿತ್ತು. ಆ ಪ್ರಕಾರ ಈಚೆಗೆ, ಅತ್ಯಾಚಾರ ಪ್ರಕರಣಗಳಲ್ಲಿ 47% ಏರಿಕೆ ಆಗಿದೆ. ಮಹಿಳೆಯರ ಅಪಹರಣ ಪ್ರಕರಣಗಳು 100% ಹೆಚ್ಚಳ ಆಗಿದೆ ಎಂದು ತಿಳಿಸಲಾಗಿತ್ತು. 2014-15ರಿಂದ ಈಚೆಗಿನ ಈ ಅಂಕಿ-ಅಂಶವಿದು. ಜತೆಗೆ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 26% ಏರಿಕೆ ಆಗಿದೆ.

ಹುಡುಗರು ತಪ್ಪು ಮಾಡುವುದು ಸಹಜ ಎಂದಿದ್ದರು ಮುಲಾಯಂ
ಅತ್ಯಾಚಾರ ಪ್ರಕರಣಗಳನ್ನು ಸಮರ್ಥಿಸಿಕೊಳ್ಳುತ್ತಿರುವ ಮೊದಲ ರಾಜಕಾರಣಿ ಖಟ್ಟರ್ ಅಲ್ಲ. 2014ರಲ್ಲಿ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್, ಹುಡುಗರು ಹುಡುಗರೇ, ಅವರು ಕೆಲವು ಸಲ ತಪ್ಪುಗಳನ್ನು ಮಾಡುತ್ತಾರೆ. ಅದಕ್ಕಾಗಿ ಮರಣದಂಡನೆ ವಿಧಿಸುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದರು.












Click it and Unblock the Notifications