ಪಂಜಾಬ್ ಚುನಾವಣೆ: ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಮನೀಶ್ ತಿವಾರಿ ಹೆಸರಿಲ್ಲ
ಚಂಡೀಗಢ, ಫೆಬ್ರವರಿ 5:ಪಂಜಾಬ್ ವಿಧಾನಸಭೆ ಚುನಾವಣೆ ಸನ್ನಿಹಿತವಾಗುತ್ತಿದ್ದು, ಕಾಂಗ್ರೆಸ್ ಬಿಡುಗಡೆ ಮಾಡಿರುವ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಮನೀಶ್ ತಿವಾರಿ ಹಾಗೂ ಗುಲಾಂ ನಬಿ ಆಜಾದ್ ಅವರ ಹೆಸರಿಲ್ಲದಿರುವುದು ಆಶ್ಚರ್ಯ ತಂದಿದೆ.
ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಹಾಗೂ ರಾಹುಲ್ ಗಾಂಧಿ ಸೇರಿದಂತೆ ಇತರರು ಇರುವ ಪಟ್ಟಿಯಲ್ಲಿ ಮನೀಶ್ ತಿವಾರಿ ಹಾಗೂ ಗುಲಾಂ ನಬಿ ಆಜಾದ್ ಅವರ ಹೆಸರಿಲ್ಲ.
ಜಿ23 ಬಂಡಾಯ ನಾಯಕರಾಗಿ ಗುರುತಿಸಿಕೊಂಡಿದ್ದ, ತಿವಾರಿ ಮತ್ತು ಆಜಾದ್ ಅವರು 2020ರಲ್ಲಿ ಸೋನಿಯಾಗಾಂಧಿ ಅವರಿಗೆ ಬರೆದ ಸ್ಫೋಟಕ ಪತ್ರದಲ್ಲಿ ಪಕ್ಷದಲ್ಲಿ ವ್ಯಾಪಕ ಬದಲಾವಣೆಗಳು ಹಾಗೂ ತುರ್ತು ಸುಧಾರಣೆಗಳ ಅಗತ್ಯತೆ ಬಗ್ಗೆ ಹೇಳಲಾಗಿತ್ತು.

ಶುಕ್ರವಾರ ಕಾಂಗ್ರೆಸ್ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಜಿ 23ರ ಭಾಗವಾಗಿದ್ದ ಇನ್ನಿಬ್ಬರು ನಾಯಕರಾದ ಆನಂದ್ ಶರ್ಮಾ ಹಾಗೂ ಭೂಪಿಂದರ್ ಸಿಂಣಗ್ ಹೂಡಾ ಇದ್ದರು.
ಈ ಹಿಂದೆ ಕಾಂಗ್ರೆಸ್ ವಿರುದ್ಧ ಬಂಡಾಯವೆದ್ದಿದ್ದ ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರನ್ನೂ ಪಕ್ಷ ಸೇರಿಸಿಕೊಂಡಿದೆ.ಈ ಪಟ್ಟಿಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ, ಹರೀಶ್ ಚೌಧರಿ, ಪಿಸಿಸಿ ಮುಖ್ಯಸ್ಥ ನವಜೋತ್ ಸಿಂಗ್ ಸಿಧು, ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ, ಅಂಬಿಕಾ ಸೋನಿ ಮತ್ತು ಮಾಜಿ ಸ್ಪೀಕರ್ ಮೀರಾ ಕುಮಾರ್ ಕೂಡ ಇದ್ದಾರೆ.
ಮುಖ್ಯಮಂತ್ರಿಗಳಾದ ಅಶೋಕ್ ಗೆಹ್ಲೋಟ್ ಮತ್ತು ಭೂಪೇಶ್ ಬಾಘೇಲ್, ಮಾಜಿ ಪಿಸಿಸಿ ಮುಖ್ಯಸ್ಥರಾದ ಸುನಿಲ್ ಜಾಖರ್, ಪರತಾಪ್ ಸಿಂಗ್ ಬಾಜ್ವಾ, ಅಜಯ್ ಮಾಕನ್ ಮತ್ತು ರಣದೀಪ್ ಸುರ್ಜೆವಾಲಾ ಅವರು ಸ್ಟಾರ್ ಪ್ರಚಾರಕರಲ್ಲಿ ಸೇರಿದ್ದಾರೆ.
ಹರಿಯಾಣ ಕಾಂಗ್ರೆಸ್ ಮುಖ್ಯಸ್ಥೆ ಕುಮಾರಿ ಸೆಲ್ಜಾ, ರಾಜೀವ್ ಶುಕ್ಲಾ, ರಂಜೀತ್ ರಂಜನ್, ನೆಟ್ಟಾ ಡಿಸೋಜಾ, ಬಿವಿ ಶ್ರೀನಿವಾಸ್, ಇಮ್ರಾನ್ ಪ್ರತಾಪ್ಗರ್ಹಿ, ಅಮರಿಂದರ್ ಸಿಂಗ್ ರಾಜಾ ವಾರಿಂಗ್, ಅಮೃತಾ ಧವನ್, ರಮೀಂದರ್ ಅವ್ಲಾ ಮತ್ತು ತಜೇಂದರ್ ಸಿಂಗ್ ಬಿಟ್ಟೂ ಸಹ 30 ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಹೆಸರಿಸಿದ್ದಾರೆ.
ವರಿಷ್ಠರು ದುರ್ಬಲ ಮುಖ್ಯಮಂತ್ರಿಯನ್ನು ಬಯಸುತ್ತಿದ್ದಾರೆ ಎಂದು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಹೇಳಿದ್ದಾರೆ.
ಪಂಜಾಬ್ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆಯ ಊಹಾಪೋಹಗಳ ನಡುವೆ, ತಮ್ಮ ಪತಿ ಹಿರೋ, ಚುನಾವಣೆಗಾಗಿ ವರಿಷ್ಠರು ಯಾರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಲಿದ್ದಾರೆ ಎಂಬುದು ವಿಷಯವಲ್ಲ ಎಂದು ನವಜೋತ್ ಸಿಧು ಪತ್ನಿ ನವಜೋತ್ ಕೌರ್ ಸಿಧು ಹೇಳಿದ್ದಾರೆ.
ಫೆಬ್ರವರಿ 6 ರಂದು ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಹೆಸರು ಹೊರಬೀಳಲಿದೆ ಎಂದು ಛನ್ನಿ ಗುರುವಾರ ಹೇಳಿದ್ದರು. ಪಂಜಾಬ್ ನಲ್ಲಿ ಫೆಬ್ರವರಿ 20 ರಂದು ವಿಧಾನಸಭಾ ಚುನಾವಣೆ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆದು ಅಂದೇ ಫಲಿತಾಂಶ ಪ್ರಕಟವಾಗಲಿದೆ.
ಪಂಜಾಬ್ ನಲ್ಲಿ ನಾಳಿದ್ದು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಕಾಂಗ್ರೆಸ್ ಪಕ್ಷ ಘೋಷಿಸಲು ಅಣಿಯಾಗಿರುವಂತೆಯೇ ಸಿಧು ಈ ರೀತಿಯ ಹೇಳಿಕೆ ನೀಡಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಮುಂದುವರೆದು, ಉತ್ತಮ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ಅವಕಾಶ ಪಂಜಾಬ್ ಮತದಾರರ ಕೈಯಲಿದೆ ಎಂದು ಸಿಧು ಹೇಳಿದ್ದಾರೆ.
ಒಂದು ವೇಳೆ ಹೊಸ ಪಂಜಾಬ್ ಮಾಡಬೇಕಾದರೆ, ಅದು ಮುಖ್ಯಮಂತ್ರಿ ಕೈಯಲಿ ಇರಲಿದೆ. ಈ ಬಾರಿ ಮುಖ್ಯಮಂತ್ರಿಯನ್ನು ನೀವು ಆಯ್ಕೆ ಮಾಡಿದರೆ, ಪಕ್ಷದ ವರಿಷ್ಠರು ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುವ ದುರ್ಬಲ ಮುಖ್ಯಮಂತ್ರಿಯನ್ನು ಬಯಸುತ್ತಾರೆ. ನಿಮಗೆ ಅಂತಹ ಸಿಎಂ ಬೇಕಾ? ಎಂದು ಬೆಂಬಲಿಗರಿಂದ ಜಯ ಘೋಷಣೆಗಳ ಮಧ್ಯೆ ಹೇಳಿದರು.












Click it and Unblock the Notifications