ಪಂಜಾಬ್ ಮಾತ್ರ ಪ್ರತಿಭಟನೆಯಲ್ಲಿ ತೊಡಗಿದೆ ಎಂದು ಸರ್ಕಾರ ತಪ್ಪಾಗಿ ಅರ್ಥೈಸಿಕೊಂಡಿದೆ: ಹರ್ ಸಿಮ್ರತ್
ನವದೆಹಲಿ,ಫೆಬ್ರವರಿ 06: ಪಂಜಾಬ್ ರೈತರು ಮಾತ್ರ ಕೃಷಿ ಕಾಯ್ದೆ ವಿರುದ್ಧದ ಪ್ರತಿಭಟನೆಯಲ್ಲಿ ತೊಡಗಿಲ್ಲ, ಇಡೀ ದೇಶವೇ ಕಾಯ್ದೆ ವಿರುದ್ಧ ಹೋರಾಡುತ್ತಿದೆ ಎಂದು ಶಿರೋಮಣಿ ಅಕಾಲಿ ದಳದ ಸಂಸದೆ ಹರ್ ಸಿಮ್ರತ್ ಕೌರ್ ಬಾದಲ್ ಹೇಳಿದ್ದಾರೆ.
ಪಂಜಾಬ್ ಭಾಗದ ರೈತರು ಮಾತ್ರ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಸರ್ಕಾರ ತಪ್ಪಾಗಿ ಅರ್ಥ್ಯೈಸಿಕೊಂಡಿದೆ. ಇಡೀ ದೇಶದ ರೈತರು ಹೋರಾಟ ಮಾಡುತ್ತಿದ್ದಾರೆ. ಎಲ್ಲಾ ರಾಜ್ಯಗಳ ರೈತರು ಪ್ರತಿಭಟನಾ ಸ್ಥಳದಲ್ಲಿ ಕುಳಿತಿದ್ದಾರೆ ಎಂದರು.
ಪಂಜಾಬ್ ನ ಮುಗ್ಧ ಯುವಕರ ಮೇಲೆ ದಾಖಲಾಗಿರುವ ಕೇಸುಗಳನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರವನ್ನು ಕೋರುವುದು ಸಿಎಂ ಅಮರಿಂದರ್ ಸಿಂಗ್ ಅವರ ಜವಾಬ್ದಾರಿಯಾಗಿದೆ. ಯಾವುದೇ ಎಫ್ಐಆರ್ ದಾಖಲಿಸದೆ ಪಂಜಾಬ್ ನ ಯುವಕರನ್ನು ಬಂಧಿಸಲಾಗಿದೆ. ಅವರನ್ನು ಬಿಡಿಸಿಕೊಂಡು ಬರಲು ಪಂಜಾಬ್ ಸರ್ಕಾರ ಸಹಾಯ ಮಾಡಬೇಕು, ಅದು ಬಿಟ್ಟು ಸರ್ಕಾರ, ಮುಖ್ಯಮಂತ್ರಿಗಳು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ದೇಶದ ಎಲ್ಲಾ ರಾಜ್ಯಗಳ ರೈತರು ಪ್ರತಿಭಟನೆ ಮಾಡುತ್ತಿರುವಾಗಲೂ ಅದನ್ನು ನೋಡಿ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆಯೆಂದರೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ ಎಂದು ಹರ್ಸಿಮ್ರತ್ ಕೌರ್ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಗಡಿ ಭಾಗಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಭೇಟಿಗಾಗಿ ಗಾಜಿಪುರ ಗಡಿಯತ್ತ ತೆರಳುತ್ತಿದ್ದ ಹತ್ತು ವಿರೋಧ ಪಕ್ಷಗಳ ಹದಿನೈದು ಸಂಸದರನ್ನು ಪೊಲೀಸರು ತಡೆದಿದ್ದರು.
ಸಂಸದರ ತಂಡದಲ್ಲಿ ಎಸ್ಎಡಿ ಪಕ್ಷದಿಂದ ಹರ್ಸಿಮ್ರತ್ ಕೌರ್ ಬಾದಲ್, ಎನ್ಸಿಪಿ ನಾಯಕಿ ಸುಪ್ರಿಯಾ ಸುಳೆ, ಡಿಎಂಕೆ ಪಕ್ಷದ ಕನಿಮೋಳಿ ಮತ್ತು ತಿರುಚಿ ಸಿವಾ, ಟಿಎಂಸಿಯ ಸಂಸದ ಸುಗತ ರಾಯ್ ಕೂಡ ಇದ್ದರು.












Click it and Unblock the Notifications