ಪಾಕ್ ಪ್ರವೇಶಿಸಿ 4 ವರ್ಷಗಳ ಹಿಂದೆ ಜೈಲು ಸೇರಿದ್ದ 20 ಮಂದಿ ಭಾರತೀಯ ಮೀನುಗಾರರು ವಾಪಸ್
ಚಂಡೀಗಢ, ಜನವರಿ 25: ಪಾಕ್ ಪ್ರವೇಶಿಸಿ ಜೈಲು ಪಾಲಾಗಿದ್ದ 20 ಮಂದಿ ಭಾರತೀಯ ಮೀನುಗಾರರು ಭಾರತಕ್ಕೆ ವಾಪಸಾಗಿದ್ದಾರೆ.
2017ರಲ್ಲಿ ಪಾಕಿಸ್ತಾನದ ಜಲಪ್ರದೇಶದೊಳಗೆ ಪ್ರವೇಶಿಸಿದ ಆರೋಪದ ಮೇಲೆ ಪಾಕಿಸ್ತಾನದಿಂದ ಬಂಧಿಸಲ್ಪಟ್ಟ 20 ಭಾರತೀಯ ಮೀನುಗಾರರನ್ನು ಸೋಮವಾರ ಅಟ್ಟಾರಿ-ವಾಘಾ ಗಡಿಯ ಮೂಲಕ ವಾಪಸ್ ಕಳುಹಿಸಲಾಗಿದೆ ಎಂದು ಶಿಷ್ಟಾಚಾರ ಅಧಿಕಾರಿ ಅರುಣ್ಪಾಲ್ ಸಿಂಗ್ ಹೇಳಿದ್ದಾರೆ.
ತವರಿಗೆ ಮರಳಿದ ಮೀನುಗಾರರು, ನಾಲ್ಕು ವರ್ಷಗಳ ನಂತರ ದೇಶಕ್ಕೆ ಕರೆತಂದ ಭಾರತ ಸರ್ಕಾರ ಮತ್ತು ಸೈನಿಕರಿಗೆ ಧನ್ಯವಾದ ತಿಳಿಸಿದ್ದಾರೆ.
ನಾಲ್ಕು ವರ್ಷಗಳ ಕಾಲ ಮೀನುಗಾರರನ್ನು ಕರಾಚಿಯ ಲಾಂಧಿ ಜೈಲಿನಲ್ಲಿ ಇರಿಸಲಾಗಿತ್ತು. ಈ ಬಗ್ಗೆ ಮಾತನಾಡಿರುವ ಅರುಣ್ಪಾಲ್ ಸಿಂಗ್, 20 ಭಾರತೀಯ ಮೀನುಗಾರರನ್ನು ಸೋಮವಾರ ಅಟ್ಟಾರಿ-ವಾಘಾ ಗಡಿಯ ಮೂಲಕ ಪಾಕಿಸ್ತಾನವು ವಾಪಸ್ ಕಳುಹಿಸಿದೆ.
ಇವರು 2017ರಲ್ಲಿ ತಮಗರಿವಿಲ್ಲದೆ ಪಾಕಿಸ್ತಾನದ ಜಲಪ್ರದೇಶವನ್ನು ಪ್ರವೇಶಿಸಿದ್ದರು. ಬಳಿಕ ಕರಾಚಿಯ ಲಾಂಧಿ ಜೈಲಿನಲ್ಲಿ 4 ವರ್ಷಗಳ ಕಾಲ ಬಂಧಿಯಾಗಿದ್ದರು ಎಂದಿದ್ದಾರೆ.
ಕರಾಚಿ ಜೈಲಿನಲ್ಲಿದ್ದ 20 ಭಾರತೀಯ ಮೀನುಗಾರರನ್ನು ಪಾಕಿಸ್ತಾನ ನಿನ್ನೆ ಬಿಡುಗಡೆ ಮಾಡಿದೆ. ಅವರೆಲ್ಲರೂ ಇಂದು ವಾಘಾ ಗಡಿ ತಲುಪಲಿದ್ದಾರೆ. ಹೀಗಾಗಿ, ಮೀನುಗಾರರ ಕುಟುಂಬ ಹಾಗೂ ಮೀನುಗಾರರ ಸಮುದಾಯದಲ್ಲಿ ಸಂತಸದ ಅಲೆ ಮೂಡಿದೆ.
ಪಾಕಿಸ್ತಾನದ ಜಲಪ್ರದೇಶವನ್ನು ಅಕ್ರಮವಾಗಿ ಪ್ರವೇಶಿಸಿದ ಆರೋಪ ಈ ಮೀನುಗಾರರ ಮೇಲಿತ್ತು. ಕರಾಚಿಯ ಜೈಲಿನಿಂದ ಬಿಡುಗಡೆಯಾಗಿರುವ ಇವರನ್ನು ಲಾಹೋರ್ಗೆ ಕರೆದೊಯ್ಯಲಾಗಿದೆ. ಇಂದು ವಾಘಾ ಗಡಿಯಲ್ಲಿ ಭಾರತೀಯ ಅಧಿಕಾರಿಗಳಿಗೆ ಇವರನ್ನು ಹಸ್ತಾಂತರಿಸಲಾಗುವುದು ಎಂದು ಉನ್ನತ ಮೂಲಗಳು ತಿಳಿಸಿವೆ.
Recommended Video
ಬಿಡುಗಡೆಯಾದ 20 ಮಂದಿ ಮೀನುಗಾರರ ಪೈಕಿ 5 ಮಂದಿ ಉತ್ತರ ಪ್ರದೇಶದವರು ಮತ್ತು 15 ಮಂದಿ ಗುಜರಾತ್ನ ಗಿರ್ ಸೋಮನಾಥ್ ಜಿಲ್ಲೆಯವರು ಎಂದು ಪ್ರಾಥಮಿಕ ಮಾಹಿತಿ ಲಭಿಸಿದೆ. ನಿಖರವಾದ ಸ್ಥಳಗಳ ಕೊರತೆಯಿಂದಾಗಿ, ಮೀನುಗಾರರ ದೋಣಿಗಳು ಆಗಾಗ ಆಕಸ್ಮಿಕವಾಗಿ ಉಭಯ ರಾಷ್ಟ್ರಗಳ ಜಲ ಗಡಿಯನ್ನು ದಾಟುತ್ತವೆ. ಇಂತಹ ಸಂದರ್ಭದಲ್ಲಿ ಎರಡೂ ದೇಶಗಳು ಮೀನುಗಾರರನ್ನು ಬಂಧಿಸುತ್ತಾರೆ.