ಗುಂಡ್ಲುಪೇಟೆ: ಅಣ್ಣನನ್ನೇ ಚಾಕುವಿನಿಂದ ಇರಿದು ಕೊಂದ ಒಡಹುಟ್ಟಿದ ತಮ್ಮ-ಕಾರಣ ಏನು?
ಚಾಮರಾಜನಗರ, ಜೂನ್, 02: ಅನೈತಿಕ ಸಂಬಂಧ ವಿಚಾರಕ್ಕೆ ಗಲಾಟೆ ನಡೆದು ಒಡಹುಟ್ಟಿದ ಅಣ್ಣನನ್ನು ತಮ್ಮ ಚಾಕುವಿನಿಂದ ಇರಿದು ಕೊಂದ ಘಟನೆ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದಲ್ಲಿ ನಡೆದಿದೆ. ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದ ಪ್ರಸಾದ್ (45) ಕೊಲೆಯಾದ ದುರ್ದೈವಿಯಾಗಿದ್ದು, ಪ್ರಸಾದ್ (39) ಎಂಬಾತ ಕೊಲೆ ಮಾಡಿದ ಆರೋಪಿಯಾಗಿದ್ದಾನೆ.
ಅತ್ತಿಗೆಗೆ ಮೈದುನ ಕುಮಾರ್ ನಿರಂತರವಾಗಿ ಅನೈತಿಕ ಸಂಬಂಧ ಇಟ್ಟುಕೊಳ್ಳುವಂತೆ ಪೀಡಿಸುತ್ತಿದ್ದನಂತೆ. ಇದೇ ವಿಚಾರಕ್ಕೆ ಅಣ್ಣ-ತಮ್ಮನ ನಡುವೆ ಗಲಾಟೆ ಆಗಿ ಬೇರೆ-ಬೇರೆ ವಾಸವಾಗಿದ್ದರು. ಇನ್ನು ಶನಿವಾರ (ಜೂನ್ 01) ತಡರಾತ್ರಿ ಅಣ್ಣನ ಮನೆಗೆ ಬಂದ ಕುಮಾರ್, ನನ್ನ ಜೊತೆ ಸಂಬಂಧ ಇಟ್ಟುಕೊಳ್ಳದೇ ಬೇರೆಯವರ ಜೊತೆ ಸಂಬಂಧ ಇಟ್ಟುಕೊಂಡಿದ್ದಾರೆ ಎಂದು ಜಗಳ ತೆಗೆದು, ತನಗೆ ಬುದ್ಧಿವಾದ ಮಾತುಗಳನ್ನಾಡುತ್ತೀಯ ಎಂದು ಕುಮಾರ್ ಚಾಕುವಿನಿಂದ ಇರಿದು ಅಣ್ಣನನ್ನು ಕೊಂದಿದ್ದಾನೆ.

ಇನ್ನು , ಗುಂಡ್ಲುಪೇಟೆ ಠಾಣೆ ಪೊಲೀಸರು ಆರೋಪಿ ಕುಮಾರನನ್ನು ಬಂಧಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಿದ್ದಾರೆ. ಈ ಸಂಬಂಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಮೃತನ ಪತ್ನಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
ಬಸ್ ಪಲ್ಟಿಯಾಗಿ 16ಕ್ಕೂ ಅಧಿಕ ಮಂದಿಗೆ ಗಾಯ: ಪೂಜೆ ಮುಗಿಸಿ ಹಿಂತಿರುಗುವಾಗ ಬಸ್ ಪಲ್ಟಿಯಾಗಿರುವ ಘಟನೆ ಪ್ರಸಿದ್ಧ ಯಾತ್ರಸ್ಥಳವಾದ ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದ ರಸ್ತೆಯಲ್ಲಿ ಇಂದು (ಜೂನ್ 01) ನಡೆದಿದೆ.
ಶನಿವಾರ ಹಿನ್ನೆಲೆ ಖಾಸಗಿ ಬಸ್ ಮಾಡಿಕೊಂಡು ಮೈಸೂರು ಜಿಲ್ಲೆಯ ನಂಜನಗೂಡು ಮೂಲದ ಕುಟುಂಬವೊಂದು ಬಿಳಿಗಿರಿರಂಗನಬೆಟ್ಟಕ್ಕೆ ಬಂದಿದ್ದರು. ಪೂಜೆ ಎಲ್ಲಾ ಮುಗಿಸಿಕೊಂಡು ಹಿಂತಿರುಗುವಾಗ ಗವಿಬೋರೆ ಹತ್ತಿರ ಬಸ್ಸೊಂದು ನಿಯಂತ್ರಣ ತಪ್ಪಿ ರಸ್ತೆಬದಿಯ ಹಳ್ಳಕ್ಕೆ ಪಲ್ಟಿಯಾಗಿದೆ.
ಘಟನೆಯಲ್ಲಿ 16ಕ್ಕೂ ಅಧಿಕ ಮಂದಿಗೆ ಗಾಯಗಳಾಗಿದ್ದು, ಎಲ್ಲರನ್ನೂ ಯಳಂದೂರು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಬಸ್ ಪಲ್ಟಿಯಾಗುತ್ತಿದ್ದಂತೆ ಖಾಸಗಿ ಬಸ್ ಚಾಲಕ ಪರಾರಿಯಾಗಿದ್ದಾನೆ. ಇನ್ನು ಯಳಂದೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications