ಸೋಮಣ್ಣ ಇಲ್ಲದೆಯೂ ರಾಮನಗರದಲ್ಲಿ ಚುನಾವಣೆ ಗೆದ್ದಿದ್ದೇವೆ: ಸೋಮಣ್ಣ ಪುತ್ರನಿಗೆ ವಿಜಯೇಂದ್ರ ಆಪ್ತ ತಿರುಗೇಟು
ಚಾಮರಾಜನಗರ, ಮಾರ್ಚ್, 17: ಸೋಮಣ್ಣ ಇಲ್ಲದೆಯೂ ರಾಮನಗರದಲ್ಲಿ ಸ್ಥಳೀಯ ಚುನಾವಣೆಗಳನ್ನು ಗೆದ್ದಿದ್ದೇವೆ ಎಂದು ವಿಜಯೇಂದ್ರ ಆಪ್ತ, ಕೆಆರ್ಐಡಿಎಲ್ ಅಧ್ಯಕ್ಷ ರುದ್ರೇಶ್ ಸೋಮಣ್ಣ ಪುತ್ರನಿಗೆ ತಿರುಗೇಟು ಕೊಟ್ಟಿದ್ದಾರೆ.
ಚಾಮರಾಜನಗರದಲ್ಲಿ ರೈತರಿಗೆ ರಿಯಾಯಿತಿ ದರದಲ್ಲಿ ಟ್ರ್ಯಾಕ್ಟರ್ ವಿತರಿಸಿ ಮಾತನಾಡಿದ ಅವರು, ಅರುಣ್ ಸೋಮಣ್ಣ ಪಾಪ, ಅವರು ತಂದೆಯ ನೆರಳಿನಲ್ಲಿ ಬೆಳೆದು ರಾಜಕೀಯ ನೋಡಿ ಬಂದವರಾಗಿದ್ದಾರೆ. ಅವರು ಸಂಘಟನೆ ಎಂದರೇನು ಎನ್ನುವುದನ್ನು ತಿಳಿದುಕೊಂಡು ಮಾತನಾಡಲಿ ಎಂದು ತಮ್ಮ ವಿರುದ್ಧ ಮಾಡಿದ್ದ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ.

ಸೋಮಣ್ಣನ ಸಹಕಾರ ಇಲ್ಲದೆಯೂ ಗೆದ್ದಿದ್ದೇವೆ
ಗ್ರಾಮ ಪಂಚಾಯಿತಿಯಲ್ಲೂ ಗೆಲ್ಲದಿರುವವರು ಚಾಮರಾಜನಗರಕ್ಕೆ ಓಡಿ ಬಂದಿದ್ದಾರೆ ಎನ್ನುವ ಸಚಿವ ಸೋಮಣ್ಣ ಪುತ್ರ ಅರುಣ್ ಸೋಮಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ರುದ್ರೇಶ್, ಸೋಮಣ್ಣ ಅವರ ಊರು ಕನಕಪುರದಲ್ಲಿ ನಾಲ್ಕು ಗ್ರಾಮ ಪಂಚಾಯತಿ ಸದಸ್ಯರನ್ನು ಗೆಲ್ಲಿಸಿಕೊಂಡು ಬಂದಿದ್ದೇವೆ. ರಾಮನಗರ ಜಿಲಾಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಸೋಮಣ್ಣನವರ ಸಹಕಾರ ಇಲ್ಲದೆಯೂ ಚುನಾವಣೆ ಗೆದ್ದಿದ್ದೇವೆ ಎಂದರು.
ಬೂತ್ ಮಟ್ಟದಿಂದ ಬೆಳೆದು ಬಂದಿದ್ದೇವೆ
ಪಂಚಾಯತಿ ಚುನಾವಣೆಗೆ ನಿಂತು ಗೆಲ್ಲುವ ಹಂತ ಮುಗಿದುಹೋಗಿದೆ. ಯಾರನ್ನು ಗೆಲ್ಲಿಸಿಕೊಳ್ಳಬೇಕು ಎನ್ನುವುದನ್ನು ತಿಳಿದುಕೊಂಡು ಬೂತ್ ಮಟ್ಟದಿಂದ ಬೆಳೆದು ಬಂದಿದ್ದೇವೆ. ಹೀಗಾಗಿ ನಾನು ಎಲ್ಲಿಂದಲೂ ಓಡಿ ಬಂದವನಲ್ಲ ಎಂದು ಆಕ್ರೋಶ ಹೊರಹಾಕಿದರು. ಬಿಜೆಪಿಯ ಸಕ್ರಿಯ ಕಾರ್ಯಕರ್ತನಾಗಿ, ಬೂತ್ ಮಟ್ಟದ ಅಧ್ಯಕ್ಷನಾಗಿ, ಯುವ ಮೋರ್ಚಾಗಳಲ್ಲಿ ಕೆಲಸ ನೋಡಿ ಬಂದಿದ್ದೇನೆ ಎಂದರು.
ಪಕ್ಷ ನನ್ನನ್ನು ಗುರುತಿಸಿ, ಮೊದಲು ಕಂಠೀರವ ಸ್ಟುಡಿಯೋ ಅಧ್ಯಕ್ಷನನ್ನಾಗಿ ಮಾಡಿತ್ತು. ಇದೀಗ ಕೆಆರ್ಐಡಿಎಲ್ ಅಧ್ಯಕ್ಷನನ್ನಾಗಿ ಮಾಡಿದೆ. ಎಲ್ಲೂ ಲೋಪ ಬಾರದಹಾಗೆ, ಪಕ್ಷಕ್ಕೆ ಕೆಟ್ಟ ಹೆಸರು ಬರದಹಾಗೆ ಒಳ್ಳೆಯ ಹೆಸರು ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದೇನೆ ಎಂದರು.

ಚಾಮರಾಜನಗರದಲ್ಲಿ ಒಗ್ಗಟ್ಟು ಇದ್ದಿದ್ದರೆ ಇಷ್ಟುದಿನ ಕಾಂಗ್ರೆಸ್ ಗೆಲ್ಲಲು ಬಿಟ್ಟಿರುವುದಾದರು ಏಕೆ. ಇಷ್ಟು ದಿನ ಇಲ್ಲಿಗೆ ಬೇರೆಯವರು ಬಂದಿದ್ದರೇನು, ಇಲ್ಲಿ ಸ್ಥಳೀಯರೇ ಇದ್ದವರು. ಅವರವರೇ ಏಕೆ ಸೋಲುತ್ತಿದ್ದಾರೆ ಎಂದು ಸ್ಥಳೀಯ ಟಿಕೆಟ್ ಆಕಾಂಕ್ಷಿಗಳ ವಿರುದ್ಧ ಟೀಕಿಸಿದ್ದಾರೆ.
ಕಾರ್ಯಕರ್ತರು ಬಿಜೆಪಿಯನ್ನು ಗೆಲ್ಲಿಸುತ್ತಾರೆ
ಚಾಮರಾಜನಗರದಲ್ಲಿ 10 ಜನ ಆಕಾಂಕ್ಷಿಗಳಿದ್ದಾರೆ. ಸ್ಥಳೀಯರಿಗೆ ಟಿಕೆಟ್ ಎಂಬ ಒತ್ತಾಯದ ಕುರಿತು ಮಾತನಾಡಿ, ಪಕ್ಷದ ಸಿದ್ದಾಂತ ಇಲ್ಲದೆ ಇರುವವರು ಗೊಂದಲ ಸೃಷ್ಟಿಸಿಕೊಳ್ಳುತ್ತಿದ್ದಾರೆ. ಬೂತ್ ಮಟ್ಟದಿಂದ ಪಕ್ಷದ ಬಗ್ಗೆ ಯಾರಿಗೆ ಗೊತ್ತಿರಲಿದೆ ಅವರು ನಿಜವಾದ ಕಾರ್ಯಕರ್ತರು. ಚಾಮರಾಜನಗರದಲ್ಲಿ ಕಾರ್ಯಕರ್ತರ ಚುನಾವಣೆ ಆಗಲಿದೆಯೇ ಹೊರತು ನಾಯಕರ ಚುನಾವಣೆ ಆಗುವುದಿಲ್ಲ. ಈ ಬಾರಿ ಕಾರ್ಯಕರ್ತರು ಬಿಜೆಪಿಯನ್ನು ಗೆಲ್ಲಿಸುತ್ತಾರೆ ಎಂದು ಭರಸವೆ ವ್ಯಕ್ತಪಡಿಸಿದರು.
ಎಲ್ಲ ಪಕ್ಷಗಳಲ್ಲೂ ಆಕಾಂಕ್ಷಿಗಳಿರುವುದು ಸಹಜವಾಗಿದೆ. ಇಲ್ಲಿಗೆ ಒಬ್ಬ ಮೇಟಿ, ಒಬ್ಬ ಕಾರ್ಯಕರ್ತ ಸಿಗಬೇಕಿದೆ. ಮುಂದಿನ ದಿನಗಳಲ್ಲಿ ಅವರು ಸಿಗಲಿದ್ದಾರೆ ಎಂದು ಮಾರ್ಮಿಕವಾಗಿ ಹೇಳುವ ಮೂಲಕ ಸ್ಥಳೀಯ ಟಿಕೆಟ್ ಆಕಾಂಕ್ಷಿಗಳ ವಿರುದ್ಧ ಬಹಿರಂಗವಾಗಿ ಇದೇ ಮೊದಲ ಬಾರಿಗೆ ಕೆಂಡಕಾರಿದ್ದಾರೆ.
ಬಿಜೆಪಿ ಸರ್ಕಾರ ಹಳೇ ಮೈಸೂರು ಪ್ರಾಂತ್ಯದ ಮೇಲೆ ಕಣ್ಣಿಟ್ಟಿದ್ದು, ಈ ಬಾರಿ ಇಲ್ಲಿ ಶತಾಯಗತಾಯ ಹೆಚ್ಚಿನ ಸ್ಧಾನ ಗೆಲ್ಲಲೇಬೇಕು ಎನ್ನುವ ಪಣತೊಟ್ಟು ನಿಂತಿದೆ. ಆದರೆ, ಈವರಗೆ ಮಾಡಿದ ತಂತ್ರಗಳು ಕೈ ಹಿಡಿದಿಲ್ಲ. ಹಾಗೆಯೇ ಸಾರಥ್ಯ ವಹಿಸಿಕೊಳ್ಳಲು ಯಾವ ನಾಯಕರು ಮುಂದೆಬರುತ್ತಿಲ್ಲ.
ಇದೀಗ ಬಿಜೆಪಿಯೊಂದಿಗಿನ ವಸತಿ ಸಚಿವ ವಿ. ಸೋಮಣ್ಣ ಅವರ ಮುನಿಸು ಶಮನವಾಗಿದ್ದು, ಹಳೇ ಮೈಸೂರು ಪ್ರಾಂತ್ಯದಲ್ಲಿ, ಅದರಲ್ಲೂ ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅವರಿಗೆ ಉಸ್ತುವಾರಿ ನೀಡಲು ಹೈಕಮಾಂಡ್ ಒಲವು ತೋರಿದೆ. ಬಿಜೆಪಿ ಉನ್ನತ ಮೂಲಗಳ ಪ್ರಕಾರ ಸೋಮಣ್ಣ ಮುನಿಸಿಗೆ ಸಾರಥ್ಯ ವಹಿಸಿಕೊಡುವ ಮುಲಾಮು ಹಚ್ಚಿದೆ ಎನ್ನಲಾಗಿದೆ.












Click it and Unblock the Notifications