Krs Dam: ಕಾವೇರಿ ನೀರಿನ ಮಟ್ಟ ಕುಸಿತ, ಚಾಮರಾಜನಗರ ಜಿಲ್ಲೆ ಅನ್ನದಾತರಲ್ಲಿ ಆತಂಕ
ಚಾಮರಾಜನಗರ, ಫೆಬ್ರವರಿ, 07: ತಾಪಮಾನ ಏರಿಕೆಯಾಗುತ್ತಿರುವ ಹಿನ್ನೆಲೆ ದಿನದಿಂದ ದಿನಕ್ಕೆ ಕಾವೇರಿ ನದಿಯಲ್ಲಿ ನೀರಿನ ಮಟ್ಟ ಕುಸಿಯುತ್ತಿದ್ದು, ಇದರಿಂದ ಕೊಳ್ಳೇಗಾಲ ತಾಲೂಕಿನ ಕಾವೇರಿ ನದಿ ತೀರದ ಗ್ರಾಮಸ್ಥರು ಹಾಗೂ ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ಕಳೆದ ಎರಡ್ಮೂರು ವರ್ಷಗಳ ಹಿಂದೆ ಕಾವೇರಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿ ಪ್ರವಾಹಗಳು ಎದುರಾಗಿ ಹತ್ತಕ್ಕೂ ಹೆಚ್ಚು ಗ್ರಾಮಗಳು ನೀರಿನಿಂದ ಮುಳುಗಡೆ ಆಗಿದ್ದವು. ಆದರೆ ಕಳೆದ ವರ್ಷ ಸರಿಯಾಗಿ ಮಳೆಯಾಗದ ಕಾರಣ ಕಾವೇರಿ ನದಿಯಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ.

ಆದರೆ ಈಗಿನ ಪರಿಸ್ಥಿತಿ ನೋಡಿದರೆ ದಿನದಿಂದ ದಿನಕ್ಕೆ ನದಿಯಲ್ಲಿ ನೀರಿನ ಮಟ್ಟ ಕುಸಿಯುತ್ತಿದ್ದು, ನದಿ ತೀರದ ಗ್ರಾಮಗಳಾದ ಮುಳ್ಳೂರು, ಹಳೆ ಹಂಪಾಪುರ, ಹಳೆ ಅಣಗಳ್ಳಿ, ದಾಸನಪುರ, ಹರಳೆ, ಸರಗೂರು, ಧನಗೆರೆ, ಸತ್ತೇಗಾಲ, ಯಡಕುರಿಯ, ಶಿವನಸಮುದ್ರ, ಸೇರಿದಂತೆ ಕೊಳ್ಳೇಗಾಲ ಸುತ್ತಮುತ್ತಲ ನದಿ ತೀರದ ಗ್ರಾಮಗಳಲ್ಲಿ ವ್ಯವಸಾಯ ಮಾಡಲು ರೈತರು ಹಿಂದೇಟು ಹಾಕುತ್ತಿದ್ದಾರೆ.
ರೈತರು ಮಳೆ ಕೊರತೆಯಿಂದ ಅತಂತ್ರ ಪರಿಣಾಮ ಅನೇಕ ಬೆಳೆಗಳು ಸಹ ನೀರಿಲ್ಲದೆ ಒಣಗಿರುವ ನಿದರ್ಶನಗಳನ್ನು ಸಹ ನಾವು ಕಂಡಿದ್ದೇವೆ. ಕೆಲ ರೈತರು ಈಗಾಗಲೇ ವ್ಯವಸಾಯ ಮಾಡಿದ್ದಾರೆ. ಇನ್ನು ಉತ್ತಮ ಫಸಲು ಪಡೆಯುವ ನಿರೀಕ್ಷೆಯಲ್ಲಿದ್ದ ರೈತರಿಗೆ ನದಿ ನೀರು ಇಳಿಮುಖಗೊಳ್ಳುತ್ತಿರುವುದು ಆತಂಕಕ್ಕೆ ಒಳಗಾಗುವಂತೆ ಮಾಡಿದೆ.
ವ್ಯವಸಾಯಕ್ಕೆ ಹಿಂದೇಟು: ನದಿ ತೀರದ ಒಂಬತ್ತು ಗ್ರಾಮಗಳ ಸಮೀಪದಲ್ಲಿ ರೈತರು ವ್ಯವಸಾಯ ಮಾಡಲು ಹಿಂದೇಟು ಹಾಕಿದ್ದಾರೆ. ಕೊಳವೆಬಾವಿ ಇರುವವರು ಮಾತ್ರ ಬಿತ್ತನೆ ಮಾಡುತ್ತಿದ್ದಾರೆ. ಆದರೆ ನದಿ ನೀರನ್ನೇ ನಂಬಿ ಕೃಷಿ ಮಾಡುತ್ತಿರುವ ರೈತರು ಈ ವರ್ಷ ವ್ಯವಸಾಯ ಮಾಡಲು ಸಂಪೂರ್ಣ ಹಿಂದೇಟು ಹಾಕಿದ್ದಾರೆ.
ವರ್ಷದ ಮೊದಲನೇ ವಾರದಲ್ಲಿ ಮಳೆಯಾದ ಪರಿಣಾಮ ಕೆಲವರು ವ್ಯವಸಾಯ ಮಾಡಲು ಮುಂದಾಗಿದ್ದರು. ಆದರೆ ಮಳೆ ಬಾರದ ಕಾರಣ ಈ ವರ್ಷ ಮಳೆಯಾಗುವುದು ಕಡಿಮೆ ಎಂದು ಭಾವಿಸಿ ರೈತರು ವ್ಯವಸಾಯ ಮಾಡುತ್ತಿಲ್ಲ. ಕಾವೇರಿ ನದಿಯಲ್ಲಿ ನೀರಿನ ಮಟ್ಟ ಕುಸಿಯುತ್ತಿದ್ದು, ಬಂಡೆಗಳು ಕಾಣುತ್ತಿವೆ. ನದಿಯ ಹಿನ್ನೀರಿನ ಭಾಗಗಳಂತೂ ಸಂಪೂರ್ಣ ಬರಡು ಭೂಮಿಯಂತೆ ಕಾಣುತ್ತಿದೆ. ಹೀಗಾಗಿ ರೈತರು ಹಾಗೂ ಗ್ರಾಮಸ್ಥರು ಈ ವರ್ಷ ಬರಗಾಲ ಬರಬಹುದು ಎಂದು ಭಯಪಡುತ್ತಿದ್ದು, ವ್ಯವಸಾಯ ಮಾಡಲು ಸಂಪೂರ್ಣ ಹಿಂದೇಟು ಹಾಕಿದ್ದಾರೆ.
ದನ ಕರುಗಳಿಗೆ ನೀರಿನ ಬವಣೆ: ಮಳೆಯಾಗದ ಕಾರಣ ಈ ಬಾರಿ ದನಕರುಗಳಿಗೂ ಸಹ ನೀರಿನ ಕೊರತೆ ಎದುರಾಗುತ್ತದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ. ಕಳೆದ ಏಳು ವರ್ಷಗಳ ಹಿಂದೆ ಬರಗಾಲ ಬಂದಿತ್ತು. ಆಗ ಕಾವೇರಿ ನದಿಯಲ್ಲಿ ನೀರಿನ ಮಟ್ಟ ಸಂಪೂರ್ಣ ಕುಸಿದ್ದಿದ್ದ ಕಾರಣ ನೀರಿಗೆ ತೊಂದರೆ ಆಗಿತ್ತು.
ಆದರೆ ಈ ವರ್ಷವೂ ಸಹ ಮಳೆಬಾರದ ಕಾರಣ ಕಾವೇರಿ ಬತ್ತುತ್ತಿದೆ. ಪರಿಣಾಮ ದನ-ಕರುಗಳಿಗೆ ನೀರಿನ ಕೊರತೆ ಎದುರಾಗಬಹುದು ಎಂದು ಸರಗೂರು ಗ್ರಾಮದ ರೈತ ಮುರುಗೇಶ್ ಕಳವಳ ವ್ಯಕ್ತಪಡಿಸಿದ್ದಾರೆ.












Click it and Unblock the Notifications