ಚಾಮರಾಜನಗರದಿಂದ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದ ವಾಟಾಳ್ ನಾಗರಾಜ್
ಚಾಮರಾಜನಗರ, ನವೆಂಬರ್, 09: ಮುಂದಿನ ಬಾರಿ ವಿಧಾನಸಭೆಗೆ ಯಾವ ರೀತಿ ಶಾಸಕರು ಬರುತ್ತಾರೆಯೋ ಗೊತ್ತಿಲ್ಲ, ಸಭೆಯಲ್ಲಿ ಹೊಡೆದಾಟ ಆಗತ್ತದೆ ಎಂದು ವಾಟಾಳ್ ನಾಗರಾಜ್ ಚಾಮರಾಜನಗರದಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಬೆಳ್ಳಿಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಈ ಬಾರಿ ವಿದಾನಸಭೆಯಲ್ಲಿ ಹೊಡೆದಾಟ ಆಗತ್ತದೆ, ಮಂತ್ರಿಗಳಿಗೂ ಹೊಡೆಯುತ್ತಾರೆ. ಹೆಚ್ಚು ಕಡಿಮೆಯಾದರೆ ಮುಖ್ಯಮಂತ್ರಿಗೂ ಹೊಡಿಯುತ್ತಾರೆ. ಆ ವೇಳೆ ಒಬ್ಬ ವಾಟಾಳ್ ನಾಗರಾಜ್ ವಿಧಾನಸಭೆಯಲ್ಲಿ ಇರಬೇಕು. ಸೋಲು-ಗೆಲುವು ಬೇರೆ ವಿಚಾರವಾಗಿದೆ. ಈ ಬಾರಿ ಚಾಮರಾಜನಗರದಿಂದ ಚುನಾವಣೆಗೆ ಸ್ಪರ್ಧಿಸುತ್ತೇನೆ," ಎಂದು ಘೋಷಣೆ ಮಾಡಿದರು.
ತಾನು ಲೂಟಿ ಮಾಡಲು ಶಾಸಕನಾಗುವುದಿಲ್ಲ, ಚಾಮರಾಜನಗರದ ರೂಪವನ್ನೇ ಬದಲಿಸುತ್ತೇನೆ. ತನ್ನನ್ನು ಬೆಂಬಲಿಸಬೇಕು. ಹಣ, ಜಾತಿ, ಧರ್ಮ ನೋಡಬೇಡಿ, ನನ್ನ ಕೆಲಸ ನೋಡಿ ವೋಟು ಕೊಡಿ ಎಂದು ಮನವಿ ಮಾಡಿಕೊಂಡರು. ಇದೇ ವೇಳೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅಂಗನವಾಡಿ ಕಾರ್ಯಕರ್ತರನ್ನು ಕಂಡು ವಾಟಾಳ್ ನಾಗರಾಜ್, ಸರ್ಕಾರ ಅಂಗನವಾಡಿ ಕಾರ್ಯಕರ್ತರು ಎಂಬ ಹೆಸರನ್ನು ಬದಲಿಸಬೇಕು. ಮಕ್ಕಳ ಭವಿಷ್ಯಕ್ಕೆ ಬುನಾದಿ ಹಾಕುವ ಅವರನ್ನು ಕಾರ್ಯಕರ್ತರು ಎಂದು ಹೇಳುವುದು ಸರಿಯಲ್ಲ. ಅದರ ಬದಲಿಗೆ ಬೇರೆ ಒಂದು ಹೆಸರನ್ನು ಸರ್ಕಾರ ಕೊಡಬೇಕು ಎಂದು ಅಭಿಪ್ರಾಯ ವ್ಯಕ್ಯಪಡಿಸಿದರು.
ಮೇಲು ಸೇತುವೆಗೆ ಒತ್ತಾಯಿಸಿ ಕುರಿ-ಮೇಕೆಗಳೊಂದಿಗೆ ಹೆದ್ದಾರಿ ತಡೆದು ಪ್ರತಿಭಟನೆ ವಾಟಾಳ್
ಶ್ರೀನಿವಾಸ ಪ್ರಸಾದ್ ನಿವೃತ್ತರಾಗಬಾರದು
ರಾಜಕೀಯದಿಂದ ವಿ.ಶ್ರೀನಿವಾಸಪ್ರಸಾದ್ ನಿವೃತ್ತರಾಗಬಾರದು. ಅವರು ನಿವೃತ್ತರಾದರೇ ಅವರ ಪಕ್ಷಕ್ಕೆ ನಷ್ಟ ಆಗುತ್ತದೆ. ರಾಜ್ಯಸಭೆಗೆ ಅವರನ್ನು ಆಯ್ಕೆ ಮಾಡಿ ಕಳುಹಿಸಿ ಇನ್ನೂ 6 ವರ್ಷ ಅವರ ಸೇವೆಯನ್ನು ಪಡೆಯಬೇಕು. ಇದರತ್ತ ಅವರ ನಾಯಕರು, ಪಕ್ಷ ಯೋಚಿಸಲಿ ಎಂದರು. ಇನ್ನು ಜಿಲ್ಲೆಯ ರಜತೋತ್ಸವ ಮಾಡದಿದ್ದರಿಂದ ಅಸಮಾಧಾನಗೊಂಡ ಕನ್ನಡಪರ ಹೋರಾಟಗಾರರು ಬೆಳ್ಳಿಹಬ್ಬ ಕಾರ್ಯಕ್ರಮ ಮಾಡಿ ಗಮನ ಸೆಳೆದರು. ಸಂಸದ ವಿ.ಶ್ರೀನಿವಾಸಪ್ರಸಾದ್, ದಲಿತ ಮುಖಂಡ ವೆಂಕಟರಮಣಸ್ವಾಮಿ ಅವರು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು.
ಕನ್ನಡಪರ ಸಂಘಟನೆಗಳಿಂದ ಬೆಳ್ಳಿಹಬ್ಬ
ಚಾಮರಾಜನಗರ ಜಿಲ್ಲೆಯನ್ನಾಗಿ ಘೋಷಿಸಲು ಶ್ರಮವಹಿಸಿದ ಕನ್ನಡ ಚಳವಳಿಗಾರ ಹಾಗೂ ಚಾಮರಾಜನಗರದ ಮಾಜಿ ಶಾಸಕ ವಾಟಾಳ್ ನಾಗರಾಜ್ ಅವರನ್ನು ಕನ್ನಡಪರ ಹೋರಾಟಗಾರರು ಬೆಳ್ಳಿ ರಥದಲ್ಲಿ ಮೆರವಣಿಗೆ ಮಾಡಿದರು. ಚಾಮರಾಜೇಶ್ವರ ದೇವಾಲಯದಿಂದ ಜಿಲ್ಲಾಡಳಿತ ಭವನದ ತನಕ ಜಾನಪದ ಕಲಾತಂಡಗಳು, ಕನ್ನಡ ಧ್ವಜಗಳ ಜೊತೆಗೆ ಬೆಳ್ಳಿ ರಥದಲ್ಲಿ ವಾಟಾಳ್ ನಾಗರಾಜು ಅವರನ್ನು ಮೆರವಣಿಗೆ ಮಾಡಿದರು. ಈ ಮೂಲಕ ಕನ್ನಡಪರ ಸಂಘಟನೆಗಳು ಬೆಳ್ಳಿಹಬ್ಬ ಆಚರಣೆ ಮಾಡಿದರು.
ರಜತ ಮಹೋತ್ಸವ ಆಚರಿಸದ ಜಿಲ್ಲಾಡಳಿರ
ಆಗಸ್ಟ್ 15ಕ್ಕೆ ಚಾಮರಾಜನಗರ ಜಿಲ್ಲೆಯಾಗಿ 25 ವರ್ಷಗಳು ಕಳೆದಿದೆ. 3 ತಿಂಗಳುಗಳಾದರೂ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಆಗಲಿ ರಜತ ಮಹೋತ್ಸವ ಆಚರಣೆ ಮಾಡಿರಲಿಲ್ಲ. ಆದ್ದರಿಂದ ಕನ್ನಡಪರ ಸಂಘಟನೆಗಳೇ ಇಂದು ಬೆಳ್ಳಿಹಬ್ಬ ಆಚರಣೆ ಮಾಡಿ ಗಮನ ಸೆಳೆದಿವೆ.
ಕನ್ನಡ ಪರ ಧ್ವನಿ ಎತ್ತಿದ್ದ ವಾಟಾಳ್
ಪ್ರಸ್ತುತ ಕರ್ನಾಟಕದಲ್ಲಿ ಅತಿ ಹೆಚ್ಚು ಗ್ರಾಸವಾಗಿದ್ದ ಹಿಂದಿ ಹೇರಿಕೆ ವಿವಾದದ ಕುರಿತು ಹಲವು ಜನ ಹಲವು ರೀತಿಯಲ್ಲಿ ಪ್ರತಿಕ್ರಿಯೆ ಕೊಡುತ್ತಿದ್ದರು. ಹಿಂದಿ ಹೇರಿಕೆ ವಿರುದ್ಧ ಮೈಸೂರಿನಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. ವಾಟಾಳ್ ನಾಗರಾಜ್ ಅವರು ಸರ್ಕಾರದ ವಿರುದ್ಧ ಕಪ್ಪುಪಟ್ಟಿ ತೋರಿಸಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಕೇಂದ್ರದ ಹಿಂದಿ ಹೇರಿಕೆ ಸರಿಯಲ್ಲ. ಹಿಂದಿ ಹೇರಿಕೆ ವಿರುದ್ಧ ದೊಡ್ಡ ಮಟ್ಟದ ಹೋರಾಟ ಮಾಡುತ್ತೇವೆ ಎಂದು ಗುಡುಗಿ ಗಮನ ಸೆಳೆದಿದ್ದರು. ಕರ್ನಾಟಕದಲ್ಲಿ ಕನ್ನಡವೇ ಪ್ರಮುಖ ಭಾಷೆ ಆಗಿದೆ. ಹಿಂದಿ ಸಂಪರ್ಕ ಭಾಷೆ ಎಂಬುದು ದಬ್ಬಾಳಿಕೆ, ಇದಕ್ಕೆ ಯಾರೂ ಹೆದರುವುದು ಬೇಡ. ಕನ್ನಡವೇ ನಮಗೆ ಶಕ್ತಿ, ಕನ್ನಡವೇ ನಮ್ಮ ಭಾಷೆ. ಹಿಂದಿ ವಿರುದ್ಧ ನಾನೇ ಹೋರಾಟ ಆರಂಭಿಸಿದ್ದೆ ಎಂದಿದ್ದರು.