ಆಟೋಗೆ ಕ್ಯಾಂಟರ್ ಡಿಕ್ಕಿ: ಓರ್ವ ಸಾವು, 8 ಜನರಿಗೆ ಗಾಯ
ಕೊಳ್ಳೇಗಾಲ, ಸೆ. 23 : ಆಟೋಗೆ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸಾವನ್ನಪ್ಪಿ 8 ಜನರು ಗಂಭೀರ ಗಾಯಗೊಂಡಿರುವ ಘಟನೆ ತಾಲೂಕಿನ ಧನಗೆರೆ ಗ್ರಾಮದಲ್ಲಿ ಸಂಭವಿಸಿದೆ.
ಅಪಘಾತದಲ್ಲಿ ತಾಲೂಕಿನ ಗುಂಡೇಗಾಲ ಗ್ರಾಮದ ಮಹದೇವ (55) ಮೃತ ದುರ್ದೈವಿ. ಸತ್ತೇಗಾಲದ ಶ್ರೀನಿವಾಸ, ಮರಿಗೌಡ, ಬಸಮ್ಮ, ಧನಗೆರೆಯ ಕೃಷ್ಣ, ಗುಂಡೇಗಾಲದ ಸಂಜಯ್, ಯಡಕುರಿಯ ಗ್ರಾಮದ ಮಲ್ಲಾಜಮ್ಮ, ಕವಿತಾ ಗಂಭೀರವಾಗಿ ಗಾಯಗೊಂಡವರಾಗಿದ್ದಾರೆ.

ಇವರನ್ನು ಚಿಕಿತ್ಸೆಗಾಗಿ ಕೊಳ್ಳೇಗಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರಲ್ಲಿ ಕೃಷ್ಣ, ಸಂಜಯ್, ಮಲ್ಲಾಜಮ್ಮ, ಕವಿತಾ ಎನ್ನುವರ ಸ್ಥಿತಿ ಚಿಂತಾಜನಕವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುರುವಾರ ಮಧ್ಯಾಹ್ನ 2.30ರ ಸಮಯದಲ್ಲಿ ಪ್ಯಾಸೆಂಜರ್ ಆಟೋವೊಂದು ಕೊಳ್ಳೇಗಾಲದಿಂದ ಜನರನ್ನು ತುಂಬಿಕೊಂಡು ಸತ್ತೇಗಾಲದ ಕಡೆ ಹೋಗುತ್ತಿದ್ದಾಗ ಅದೇ ಮಾರ್ಗವಾಗಿ ಬರುತ್ತಿದ್ದ ಕ್ಯಾಂಟರ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಆಟೋ ಉರುಳಿ ರಸ್ತೆಯ ಬದಿಯಲ್ಲಿ ಟಿವಿಎಸ್ ಮೊಪೈಡ್ ನಿಲ್ಲಿಸಿಕೊಂಡು ಮಾತನಾಡುತ್ತಿದ್ದವರ ಮೇಲೆ ಉರುಳಿ ಬಿದ್ದಿದೆ.
ವಿಷಯ ತಿಳಿಯುತ್ತಿದ್ದಂತೆ ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೆಟಿ ನೀಡಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಸ್ಥಳಿಯ ಗ್ರಾಪಂ ಉಪಾಧ್ಯಕ್ಷ ಪುಟ್ಟಸ್ವಾಮಿ ದೂರು ನೀಡಿದ್ದು ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications