ಚಾಮರಾಜನಗರದಲ್ಲಿ ಅಯೋಧ್ಯೆ ರಾಮನ ರೂಪದ ಗಣಪತಿ: ಮೊದಲ ಪೂಜೆ ಯಾರಿಂದ ಗೊತ್ತಾ.?
ಚಾಮರಾಜನಗರ, ಸೆಪ್ಟೆಂಬರ್, 07: ಇಂದು (ಸೆಪ್ಟೆಂಬರ್ 07, 2024) ದೇಶಾದ್ಯಂತ ಗಣೇಶ ಚತಿರ್ಥಿ ಹಬ್ಬ ಆರಂಭವಾಗಿದೆ. ಒಂದೊಂದು ಭಾಗಗಳಲ್ಲಿ ಒಂದೊಂದು ಥೀಮ್ನಲ್ಲಿ ಮಂಟಪಗಳನ್ನು ಮಾಡಲಾಗಿದ್ದು, ಹಾಗೆಯೇ ವಿವಿಧ ರೀತಿಯ ಆಕರ್ಷಣೆ ಮೂರ್ತಿಗಳನ್ನು ಇಟ್ಟು ಪೂಜೆ ಮಾಡಲಾಗಿದೆ. ಹಾಗಾದರೆ ಗಡಿಜಿಲ್ಲೆ ಚಾಮರಾಜನಗರದಲ್ಲಿ ಗಣಪನ ಮೂರ್ತಿಯನ್ನು ಯಾವ ಥೀಮ್ನಲ್ಲಿ ತಯಾರಿಸಲಾಗಿದೆ ಎಂದು ಇಲ್ಲಿ ತಿಳಿಯಿರಿ.
ಗಡಿಜಿಲ್ಲೆ ಚಾಮರಾಜನಗರದಲ್ಲಿ ಹಿಂದೂಪರ ಸಂಘಟನೆಗಳು ಈ ಬಾರಿ ಅಯೋಧ್ಯೆ ರಾಮನ ಪ್ರತಿರೂಪ ಗಣಪತಿಯನ್ನು ಪ್ರತಿಷ್ಟಾಪನೆ ಮಾಡಲಾಗಿದೆ. ಹಾಗಾದರೆ ಇದಕ್ಕೆ ಮೊದಲ ಪೂಜೆ ಯಾರಿಂದ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಹೆಚ್ಚು ಪೊಲೀಸ್ ಬಂದೋಬಸ್ತ್ ಇರುವುದರಿಂದ ಇದು ಪೊಲೀಸ್ ಗಣಪತಿ ಅಂಥಲೂ, ದೊಡ್ಡ ಗಣಪತಿ, ಆರ್ಎಸ್ಎಸ್ ಗಣಪತಿ ಅಂಥಲೂ ಈ ಗಣೇಶ ರಾಜ್ಯದಲ್ಲೇ ಪ್ರತಿಷ್ಠಿತ ಗಣೇಶ ಮೂರ್ತಿಗಳಲ್ಲಿ ಒಂದಾಗಿದ್ದಾನೆ. ಮಂಗಳವಾದ್ಯದಲ್ಲಿ ಗಣೇಶ ಮೂರ್ತಿಯನ್ನು ಮೆರವಣಿಗೆಯಲ್ಲಿ ತಂದು ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು.
ಇನ್ನು ಜಿಲ್ಲಾಧಿಕಾರಿ ಶಿಲ್ಪಾನಾಗ್, ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಪ್ರತಿಷ್ಠಾಪನೆ ವೇಳೆ ಹಾಜರಿದ್ದು, ಪೂಜೆಯಲ್ಲಿ ಪಾಲ್ಗೊಂಡು ಮೊದಲ ಪೂಜೆ ಮಾಡಿ ಗಮನ ಸೆಳೆದರು. ಈ ಬಾರಿಯೂ ಕೂಡ ಹಿಂದೂಪರ ಮುಖಂಡರು 27 ದಿನಗಳ ಕಾಲ ಪೂಜೆ, 7 ದಿನ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿಸಲು ತಯಾರಿ ಮಾಡಿಕೊಂಡಿದ್ದಾರೆ.
ಕಳೆದ 62 ವರ್ಷಗಳಿಂದ ವಿಜೃಂಭಣೆಯಿಂದ, ಸೌಹಾರ್ದತೆಯಿಂದ ಗಣೇಶ ಹಬ್ಬ ನಡೆದುಕೊಂಡು ಬಂದಿದ್ದು, ಈ ಬಾರಿಯೂ ಕೂಡ ಅದ್ಧೂರಿಯಾಗಿ ಮತ್ತು ಸೌಹಾರ್ದತೆಯಿಂದ ಕೂಡಿರಲಿ ಎಂದು ಡಿಸಿ ಶಿಲ್ಪಾನಾಗ್ ಹೇಳಿದರು.
ಈ ಊರಲ್ಲಿ ಗಣಪನ ಬದಲು 12 ದಿನ ಗೌರಿ ಪೂಜೆ: ಈಗಾಗಲೇ ದೇಶದೆಲ್ಲೆಡೆ ಗೌರಿ ಗಣೇಶ ಹಬ್ಬದ ಸಂಭ್ರಮ. ಆದರೆ ಈ ಊರಲ್ಲಿ ಮಾತ್ರ ಗೌರಿಗೆ ಮಾತ್ರ ಪೂಜೆ, ಗಣಪನಿಗಿಲ್ಲ ಇಲ್ಲಿ ಜಾಗ. ಸ್ವರ್ಣಗೌರಿಯನ್ನು ಗಂಡನ ಮನೆಯಿಂದ ತವರು ಮನೆಗೆ ಕೆರೆತರುವಂತೆ ಬರುವಾಗ ಗೌರಿಗೆ ಬಾಗೀನ ಅರ್ಪಿಸಿ ವಿಜೃಂಭಣೆಯ ಸ್ವಾಗತದೊಂದಿಗೆ ಬರಮಾಡಿಕೊಳ್ಳುವ ಸಂಭ್ರಮ, ಸಂಪ್ರದಾಯ ಇಲ್ಲಿದೆ.
ಗಡಿ ಜಿಲ್ಲೆ ಚಾಮರಾಜನಗರದ ಕುದೇರು ಎಂಬ ಗ್ರಾಮದಲ್ಲಿ ಸ್ವರ್ಣ ಗೌರಿಯ ಸಂಭ್ರಮ ಮನೆ ಮಾಡಿದೆ. ಈ ಗ್ರಾಮದಲ್ಲಿ ತಲತಲಾಂತರದಿಂದ ನಡೆದುಕೊಂಡು ಬಂದ ಸ್ವರ್ಣಗೌರಿ ಹಬ್ಬ ಬಹಳ ಸಂಭ್ರಮ ಸಡಗರದಿಂದ ಸುಮಾರು 12 ದಿನಗಳ ಕಾಲ ನಡೆಯುತ್ತದೆ.
ಗ್ರಾಮದ ಮಲ್ಲಿಕಾರ್ಜುನ ದೇವಾಲಯದಿಂದ ಅಂದ್ರೆ ಶಿವನ ಬಳಿಯಿಂದ ಗೌರಿಯನ್ನು ತವರು ಮನೆಗೆ ಕರೆತರುವಂತೆ ಅಡ್ಡಪಲ್ಲಕ್ಕಿ ಮೇಲೆ ಕೂರಿಸಿ ತರುವ ವೇಳೆ ಮುತ್ತೈದೆಯರು ಭಕ್ತಿ ಶ್ರದ್ಧೆಯಿಂದ ಬಾಗೀನ ಅರ್ಪಿಸಿ ಪೂಜೆ ನೀಡಿ ಬರಮಾಡಿಕೊಳ್ಳುತ್ತಾರೆ ಹೀಗೆ ಮಾಡುವುದರಿಂದ ನಮಗೆ ನಮ್ಮ ಮುತ್ತೈದೆ ಭಾಗ್ಯ, ಸಂತಾನ ಭಾಗ್ಯ ಹೆಚ್ಚುತ್ತದೆ ಎನ್ನುತ್ತಾರೆ ಇಲ್ಲಿನ ಮಹಿಳೆಯರು.
ಇದಕ್ಕೂ ಮೊದಲು ಗ್ರಾಮದ ಮುಖಂಡರು,ಅರ್ಚಕರು ಸೇರಿದಂತೆ ಎಲ್ಲಾ ಜನ ಸೇರಿ ಗ್ರಾಮದ ಹೊರ ವಲಯದಲ್ಲಿ ಇರುವ ಗೌರಮ್ಮ ಕೆರೆ ಬಳಿ ಒಂದು ದಿನ ಮುಂಚಿತವಾಗಿ ಗೌರಿ ಮೂರ್ತಿಗೆ ಅಲ್ಲೇ ಮಣ್ಣನ್ನ ತೆಗೆದು ಗೌರಿಯನ್ನು ಪ್ರತಿಷ್ಠಾಪನೆ ಮಾಡಿ ಅಲ್ಲೇ ವಿಶೇಷ ಪೂಜೆ, ಹೋಮ ಹವನಗಖನ್ನು ಮಾಡಿ ನಂತರ ಗೌರಿಯನ್ನು ಅಡ್ಡ ಪಲ್ಲಕ್ಕಿ ಮೇಲೆ ಕೂರಿಸಿ ಗ್ರಾಮದ ಪ್ರಮುಖ ಬೀದಿಗಳ ಮೂಲಕ ಗೌರಿಯನ್ನು ಮೆರವಣಿಗೆ ಮಾಡಿಕೊಂಡು ಹೊತ್ತು ತರುತ್ತಾರೆ.
ಈ ವೇಳೆ ಗ್ರಾಮದ ಮುತ್ತೈದೆಯರು ಗೌರಿಗೆ ಬಾಗೀನ ಅರ್ಪಿಸಿ ಸ್ವಾಗತ ಕೋರುತ್ತಾರೆ.ನಂತರ ಗ್ರಾಮದಲ್ಲಿ ಇರುವ ಸ್ವರ್ಣ ಗೌರಿ ದೇವಾಲಯದಲ್ಲಿ ಇಟ್ಟು ಸುಮಾರು 12 ದಿನಗಳ ಕಾಲ ಗೌರಿಗೆ ಚಿನ್ನದ ಮುಖವಾಡವನ್ನು ಹಾಕಿ ಗುಡಿಯಲ್ಲಿ ಪೂಜೆ,ಪುರಸ್ಕಾರಗಳೊಂದಿಗೆ ಪೂಜಿಸೋದು ವಾಡಿಕೆ.
ನಂತರ 12 ದಿನಕ್ಕೆ ಮತ್ತೆ ಗಂಡನ ಮನೆಗೆ ಕಳುಹಿಸಿಕೊಡುವ ಸಂಪ್ರದಾಯದೊಂದಿಗೆ ಸಂಭ್ರಮ ಸಡಗರದಿಂದ ಮೆರವಣಿಗೆಯೊಂದಿಗೆ ಅದೇ ಕೆರೆಯಲ್ಲಿ ದೇವಿಯ ತಗೆದುಕೊಂಡು ಹೋಗಿ ದೇವಿಯನ್ನು ವಿಸರ್ಜನೆ ಮಾಡಲಾಗುತ್ತದೆ. ಈ ಮೂಲಕ ಮತ್ತೆ ಗಂಡನ ಮನೆಗೆ ಕಳುಹಿಸಿ ಕೊಡುತ್ತೇವೆ. ಇದು ನಮ್ಮ ಗ್ರಾಮದಲ್ಲಿ ನಡೆದುಕೊಂಡು ಬಂದಿರುವ ಸಂಪ್ರದಾಯ ಎನ್ನುತ್ತಾರೆ ಇಲ್ಲಿನ ಸ್ಥಳೀಯರು.
ಒಟ್ನಲ್ಲಿ ತಲತಲಾಂತರದಿಂದ ನಡೆದುಕೊಂಡು ಬಂದ ಸಂಪ್ರದಾಯವನ್ನ ಇಂದಿಗೂ, ಈ ಕಾಲದಲ್ಲೂ ಇಲ್ಲಿನ ಜನ ಪಾಲಿಸುತ್ತಿರುವುದು ಪ್ರಶಂಸನೀಯವೆ ಸರಿ.












Click it and Unblock the Notifications