ಕಾಳಸಂತೆಯಲ್ಲಿ ಮಾರಾಟವಾಯ್ತಾ ಆಕ್ಸಿಜನ್ ಸಿಲಿಂಡರ್?
ಚಾಮರಾಜನಗರ, ಮೇ 3: ಕೊರೊನಾ ಸೋಂಕು ಉಲ್ಬಣದ ಬೆನ್ನಲ್ಲೇ ಒಂದೇ ದಿನದಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ಚಾಮರಾಜನಗರ ಜಿಲ್ಲೆಯಲ್ಲಿ 24 ಮಂದಿ ಸಾವನ್ನಪ್ಪಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆಯಲ್ಲದೆ, ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ತಮ್ಮವರನ್ನು ಕಳೆದುಕೊಂಡವರ ರೋಧನ ಮುಗಿಲು ಮುಟ್ಟಿದೆ. ಇದೆಲ್ಲದರ ನಡುವೆ ಆಕ್ಸಿಜನ್ ಸಿಲಿಂಡರ್ ಕಾಳಸಂತೆಯಲ್ಲಿ ಮಾರಾಟವಾಗಿರುವುದು ಬೆಳಕಿಗೆ ಬಂದಿದೆ.
ಇದೀಗ ದುರ್ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳಿಂದ ಆರಂಭವಾಗಿ ಉಸ್ತುವಾರಿ ಸಚಿವರು ತಮ್ಮದೇ ಆದ ಹಲವು ಕಾರಣಗಳನ್ನು ನೀಡಿ ಜಾರಿಕೊಳ್ಳುತ್ತಿದ್ದಾರೆಯೇ ಹೊರತು, ತಪ್ಪನ್ನು ಯಾರೂ ಒಪ್ಪಿಕೊಳ್ಳುತ್ತಿಲ್ಲ. ಕಳೆದ ಕೆಲವು ದಿನಗಳ ಹಿಂದೆಯೇ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಮತ್ತು ಯುವ ಜನರೇ ಸೋಂಕಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿರುವ ವಿಚಾರ ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ ಅವರ ಗಮನಕ್ಕೆ ಬಂದಿದ್ದು, ಅದನ್ನು ಮಾಧ್ಯಮದ ಮುಂದೆಯೂ ಹೇಳಿದ್ದರು.
ಲಾಕ್ ಡೌನ್ ಬಳಿಕ ಬೆಂಗಳೂರು ಸೇರಿದಂತೆ ಬೇರೆ ಜಿಲ್ಲೆ, ರಾಜ್ಯಗಳಿಗೆ ಹೋಗಿದ್ದವರು ಮರಳಿ ಜಿಲ್ಲೆಗೆ ಬಂದಿದ್ದರಿಂದ ಸೋಂಕು ಇನ್ನಷ್ಟು ಹೆಚ್ಚಳವಾಗಲು ಕಾರಣವಾಯಿತು ಎನ್ನುವುದನ್ನು ತಳ್ಳಿ ಹಾಕಲಾಗದು. ಇದೀಗ ಕೊರೊನಾ ಸೋಂಕಿತರು ಒಂದೇ ದಿನದಲ್ಲಿ 24 ಮಂದಿ ಸಾವನ್ನಪ್ಪಿದ್ದು, ಇವರ ಸಾವಿಗೆ ಆಕ್ಸಿಜನ್ ಕೊರತೆ ಕಾರಣ ಎನ್ನುವುದು ಸುದ್ದಿಯಾಗಿದೆ.

ಚಾಮರಾಜನಗರ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆಯಿಂದಲೇ ಸೋಂಕಿತರು ಸಾವನ್ನಪ್ಪಿದ್ದಾರೆ ಎನ್ನುವ ವಿಚಾರ ಇಡೀ ರಾಜ್ಯದಾದ್ಯಂತ ಸಂಚಲನ ಮೂಡಿಸಿದೆ. ಸರ್ಕಾರಕ್ಕೆ ಭಾರೀ ತಲೆನೋವು ತಂದಿದೆ. ಆಕ್ಸಿಜನ್ ಕೊರತೆ ನಡುವೆಯೂ ಅದರ ಮಾರಾಟ ಕಾಳಸಂತೆಯಲ್ಲಿ ನಡೆಯುತ್ತಿತ್ತು ಎಂಬ ಆರೋಪವೂ ಕೇಳಿ ಬಂದಿದ್ದು ಅದಕ್ಕೆ ಸಾಕ್ಷಿ ಎಂಬಂತೆ ಕೊಳ್ಳೇಗಾಲದಲ್ಲಿ ಭಾನುವಾರ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಪೀಸ್ ಪಾರ್ಕ್ ರಸ್ತೆಯ ಸಮೀಪ ನಿವಾಸಿ ಶ್ರೀನಿವಾಸ್ (55) ಬಂಧಿತ ಆರೋಪಿಯಾಗಿದ್ದು, ಈತ ಅಕ್ರಮವಾಗಿ ಆಕ್ಸಿಜನ್ ಸಿಲಿಂಡರ್ಗಳನ್ನು ಮಾರಾಟ ಮಾಡುತ್ತಿದ್ದಾನೆ ಎಂಬ ದೂರಿನ ಮೇರೆಗೆ ತಹಶೀಲ್ದಾರ್ ಕುನಾಲ್ ಮಾಹಿತಿ ಆಧರಿಸಿದ ಡಿವೈಎಸ್ಪಿ ನಾಗರಾಜು ಹಾಗೂ ವೃತ್ತ ನಿರೀಕ್ಷಕ ಶಿವರಾಜ್ ಬಿ. ಮುಧೋಳ್ ನೇತೃತ್ವದಲ್ಲಿ ದಿಢೀರ್ ದಾಳಿ ನಡೆಸಿ ಬಂಧಿಸಲಾಗಿದೆ.

ಈತನಿಂದ 12 ಆಕ್ಸಿಜನ್ ಸಿಲಿಂಡರ್ ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಪೈಕಿ 7 ಖಾಲಿ ಸಿಲಿಂಡರ್ಗಳಾಗಿವೆ. ಈ ಪ್ರಕರಣವನ್ನು ಗಮನಿಸಿದರೆ ಈ ಸಿಲಿಂಡರ್ಗಳು ಕಾಳಸಂತೆಗೆ ಹೇಗೆ ಬಂತು ಎಲ್ಲಿಂದ ಬಂತು ಎಂಬುದನ್ನು ಪೊಲೀಸರು ಸಮಗ್ರ ತನಿಖೆ ನಡೆಸಬೇಕಾಗಿದೆ. ಸಿಲಿಂಡರ್ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಆಕ್ಸಿಜನ್ ಕೊರತೆಯಿಂದ ದುರ್ಘಟನೆ ನಡೆದಿದೆ. ಈ ಘಟನೆಗೆ ಕುರಿತಂತೆ ಸಂಬಂಧಿಸಿದವರು ತನಿಖೆ ನಡೆಸಿ ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.












Click it and Unblock the Notifications