ಪೊಲೀಸ್ ಠಾಣೆ ಮುಂದಿನ ಕೆಂಪು ಡಬ್ಬಿ ಅಲಂಕಾರಕ್ಕಲ್ಲ
ಚಾಮರಾಜನಗರ, ನವೆಂಬರ್ 21 : ಪೊಲೀಸ್ ಠಾಣೆಗಳ ಮುಂದಿನ ದೂರು ಪೆಟ್ಟಿಗೆ ಹಾಕಿದ ದೂರುಗಳು ಡಬ್ಬದಲ್ಲೇ ಕೊಳೆಯುತ್ತಿವೆ. ವರ್ಷಗಳಾದರೂ ಅದರಲ್ಲಿನ ದೂರುಗಳ ಕಡೆ ಮುಖ ತಿರುಗಿಸಿಯೂ ನೋಡಿಲ್ಲ ಪೊಲೀಸರು.
ಪ್ರಧಾನಿ ಪತ್ರಕ್ಕೂ ಕಿಮ್ಮತ್ತು ಕೊಡದ ಚಾಮರಾಜನಗರ ಜಿಲ್ಲಾಡಳಿತ
ಠಾಣೆಗಳಲ್ಲಿ ದೂರು ಸ್ವೀಕರಿಸಲು ಸಿಬ್ಬಂದಿ ಹಿಂದೆ ಮುಂದೆ ನೋಡಿದಾಗ, ವಿವಿಧ ಕಾರಣಗಳಿಂದ ಠಾಣೆಗೆ ಹೋಗಿ ದೂರು ನೀಡಲು ಸಾಧ್ಯವಾಗದೆ ಇರುವವರಿಗೆ, ಮಹಿಳೆಯರು, ಯುವತಿಯರು ತಮಗಾಗುತ್ತಿರುವ ಅನ್ಯಾಯಗಳ ಬಗ್ಗೆ ದೂರು ಬರೆದು ಹಾಕಲೆಂದು ಠಾಣೆಗಳ ಮುಂದೆ ದೂರು ಪೆಟ್ಟಿಗೆ ಇಡಲಾಗುತ್ತದೆ. ಆದರೆ ಇದನ್ನು ಚಾಮರಾಜನಗರದ ಬಹುತೇಕ ಪೊಲೀಸ್ ಠಾಣೆಯಲ್ಲಿ ತೆರೆದು ಕೂಡ ನೋಡಿಲ್ಲ.
ಚಾಮರಾಜನಗರ ಜಿಲ್ಲೆಯ ಹಲವು ಠಾಣೆಗಳಲ್ಲಿ ದೂರು ಪೆಟ್ಟಿಗೆಗಳನ್ನು ಇಟ್ಟಾಗಿನಿಂದಲೂ ತೆರೆದೇ ಇಲ್ಲ, ಕೆಲವು ದೂರು ಪೆಟ್ಟಿಗೆಗಳ ಬೀಗಗಳೇ ಕಳೆದು ಹೋಗಿವೆ.
ಶೋಷಿತರು, ದೌರ್ಜನ್ಯಕ್ಕೆ ಒಳಗಾದವರು, ಶ್ರೀಸಾಮಾನ್ಯರು ಇತರೆ ಜನಗಳು ಹಿಂಜರಿಕೆಯಿಂದಾಗಿ ಠಾಣೆಗೆ ಬಂದು ದೂರು ಕೊಡಲು ಆಗದೆ ನ್ಯಾಯದಿಂದ ವಂಚಿತರಾಗಬಾರದೆಂಬ ಕಾರಣಕ್ಕೆ ದೂರು ಪೆಟ್ಟಿಗೆಗಳನ್ನು ಇಡಲಾಗಿದೆ. ಆದರೆ ಪೊಲೀಸರು ದೂರು ಪೆಟ್ಟಿಗೆಗಳ ಬಗ್ಗೆ ಗಮನವೇ ಹರಿಸುತ್ತಿಲ್ಲ. ಇದಕ್ಕೆ ತಾಜಾ ಉದಾಹರಣ ಇಲ್ಲಿದೆ ನೋಡಿ...
ಚಾಮರಾಜನಗರ ಜಿಲ್ಲೆಯ ಸ್ಥಳೀಯರೊಬ್ಬರು 2016 ರಲ್ಲಿ ಎಸ್ಪಿ ಕಚೇರಿ ಮುಂಬಾಗ ಪ್ರತಿಭಟಿಸಲು ಅನುಮತಿಯ ಜೊತೆಗೆ ಸಮಸ್ಯೆ ಅರ್ಜಿಯೊಂದನ್ನ ಹಾಕಲಾಗಿತ್ತು. ಪ್ರತಿಭಟನೆ ಸಂಬಂದ ಅನುಮತಿ ನಿರಾಕರಿಸುದರೂ ಮೇಲಾದಿಕಾರಿಗೆ ಮನವಿ ಸಲ್ಲಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿ ಮಾತುಕತೆ ನಡೆಸಿ ಪ್ರತಿಭಟನೆ ಕೈ ಬಿಡಿಸಲಾಗಿತ್ತು.
ಘಟನೆ ಕುರಿತು ಮೇಲಾಧಿಕಾರಿಗಳು ಠಾಣಾ ಇನ್ಸ್ಪೆಕ್ಟರ್ ಅವರನ್ನು ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೆ ಅವರು ದೂರು ಅರ್ಜಿ ಬಂದಿಲ್ಲ ಎಂದು ಬಿಟ್ಟರು. ಕೂಡಲೇ ದೂರುದಾರರು, ದೂರು ಪೆಟ್ಟಿಗೆಗೆ ಹಾಕಿದ ಅರ್ಜಿಯ ನಕಲು ಹಾಗೂ ಅಲ್ಲಿ ಬೀಗ ಹಾಕದೆ ಇಡಲಾಗಿರುವ ದೂರು ಪೆಟ್ಟಿಗೆ ಚಿತ್ರವನ್ನ ಕಳಿಸಿದ ನಂತರ ಅಂದಿನ ಎಸ್ಪಿ ಕುಲದೀಪ್ ಕುಮಾರ್ ಅವರ ನಿರ್ದೇಶನ ಬರುವ ಮೊದಲೆ ಪೆಟ್ಟಿಗೆಗೆ ಬೀಗ ಬಿದ್ದಿತು.
ಇದು ಒಂದು ಠಾಣೆಯ ಚಿತ್ರಣವಲ್ಲ ರಾಜ್ಯದ ಬಹುತೇಕ ಪೊಲೀಸ್ ಠಾಣೆಗಳಲ್ಲಿ ದೂರು ಪೆಟ್ಟಿಗೆಗಳು ಇಲ್ಲ, ಇದ್ದರೂ ಅದನ್ನ ಪರಿಶೀಲಿಸುವ ತಾಳ್ಮೆ ಪೊಲೀಸರಿಗೆ ಇಲ್ಲ.