ಚಾಮರಾಜನಗರ: ಕಾವೇರಿ ಮಡಿಲಲ್ಲಿ ಮಿಂದೆದ್ದ "ಗಜ"ಗ್ಯಾಂಗ್
ಚಾಮರಾಜನಗರ, ನವೆಂಬರ್, 21: ಭೋರ್ಗರೆದು ಹರಿಯುವ ಕಾವೇರಿ ನದಿಯನ್ನು ಬರೋಬ್ಬರಿ 19ಕ್ಕೂ ಅಧಿಕ ಆನೆಗಳು ದಾಟಿರುವ ವೀಡಿಯೋಯೊಂದನ್ನು ಯುವಕ ಸೆರೆ ಹಿಡಿದಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಹನೂರು ತಾಲೂಕಿನ ಗಡಿಯಲ್ಲಿರುವ ಹೊಗೆನಕಲ್ ಜಲಪಾತದಲ್ಲಿ ಈ ಘಟನೆ ನಡೆದಿದೆ.
3 ಮರಿಗಳು ಸೇರಿದಂತೆ 19ಕ್ಕೂ ಹೆಚ್ಚು ಆನೆಗಳು ಕಾವೇರಿ ದಂಡೆಯನ್ನು ದಾಟಿ ಅಲ್ಲೇ ಓಡಾಡಿ ದಣಿವು ತಣಿಸಿಕೊಳ್ಳುತ್ತಾ ಮೇಯುತ್ತಾ ರಿಲಾಕ್ಸ್ನಲ್ಲಿರುವ ವೀಡಿಯೋವನ್ನು ಗೋಪಿನಾಥಂ ಎಂಬ ಯುವಕ ಸೆರೆ ಹಿಡಿದಿದ್ದಾನೆ.

ಅರಣ್ಯ ಪ್ರದೇಶದ ಭಾಗದಲ್ಲಿ ನೀರಿನ ಕೊರತೆ ಇರುವುದರಿಂದ ಒಂದು ನದಿ ಭಾಗದಲ್ಲಿ ಬಂದು ಬೀಡು ಬಿಡಲಿದ್ದು, ಸದ್ಯ 19ಕ್ಕೂ ಅಧಿಕ ಆನೆಗಳ ಗುಂಪು ಕಾವೇರಿ ದಂಡೆಯಲ್ಲಿ ವಿಹರಿಸುತ್ತಿವೆ.
ನಾಡಿನತ್ತ ಬಂದ ಕಾಡಾನೆ
ಇನ್ನು ಇತ್ತೀಚೆಗಷ್ಟೇ ನೀರಿನ ಅಭಾವ ಕೇವಲ ನಾಡಲ್ಲಿ ಮಾತ್ರವಲ್ಲದೇ ಕಾಡಲ್ಲೂ ಕಾಣಿಸಿಕೊಂಡಿದೆ ಎಂಬುದಕ್ಕೆ ರಸ್ತೆಬದಿ ನಿಂತಿದ್ದ ನೀರು ಕುಡಿದ ಈ ಆನೆಯೇ ಸಾಕ್ಷಿ. ಹನೂರು ತಾಲೂಕಿನಲ್ಲಿ ಸಮರ್ಪಕ ಮಳೆಯಾಗದ ಹಿನ್ನೆಲೆ ಜಮೀನಿನಲ್ಲಿ ಹಾಕಿರುವ ಫೈರುಗಳು ಒಣಗಿರುವುದು ಒಂದೆಡೆಯಾದರೆ, ಅರಣ್ಯದಲ್ಲಿ ಕೆರೆಕಟ್ಟೆಗಳು ಖಾಲಿಯಾಗಿರುವುದರಿಂದ ವನ್ಯ ಪ್ರಾಣಿಗಳು ನಾಡಿನತ್ತ ಬರಲು ಪ್ರಾರಂಭಿಸಿದೆ.
ಮಲೆ ಮಹದೇಶ್ವರ ಬೆಟ್ಟದಿಂದ ಪಾಲಾರ್ ಕಡೆಗೆ ತೆರಳುವ ರಸ್ತೆಯಲ್ಲಿ ಕಾಡಿನಿಂದ ಹೊರಬಂದ ಆನೆಯೊಂದು ರಸ್ತೆಬದಿ ನಿಂತಿದ್ದ ಹಳ್ಳದ ನೀರನ್ನು ಕುಡಿದು ದಣಿವಾರಿಸಿಕೊಂಡಿತ್ತು. ಇನ್ನು ಆನೆ ನೀರು ಕುಡಿಯುವುದನ್ನು ವಾಹನ ಸವಾರರೋರ್ವ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು, ಸದ್ಯ ಈ ವಿಡಿಯೋ ಭಾರೀ ವೈರಲ್ ಆಗಿತ್ತು.
ಆಗೊಮ್ಮೆ ಈಗೊಮ್ಮೆ ಕಾಣಸಿಗುತ್ತವೆ ಅಚ್ಚರಿಗಳು
ಚಾಮರಾಜನಗರ ಜಿಲ್ಲೆಯಲ್ಲಿರುವ ಅರಣ್ಯಗಳು ವಿಭಿನ್ನವಾಗಿದ್ದು, ಇಲ್ಲಿ ಆಗೊಮ್ಮೆ ಈಗೊಮ್ಮೆ ನಮಗೆ ಅಚ್ಚರಿಗಳು ಲಭ್ಯವಾಗುತ್ತಲೇ ಇರುತ್ತವೆ. ಇಲ್ಲಿ ಹಲವು ಬಗೆಯ ಜೀವರಾಶಿಗಳಿದ್ದು, ಅವು ಎಲ್ಲ ಸಂದರ್ಭದಲ್ಲಿ ನಮ್ಮ ಗಮನಕ್ಕೆ ಬಾರದಿದ್ದರೂ ಅವುಗಳನ್ನು ಹುಡುಕಿ ಹೋಗುವವರಿಗೆ ಮಾತ್ರ ವಿಸ್ಮಯ ಕಾದಿರುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಚಾಮರಾಜನಗರ ಜಿಲ್ಲೆಯಲ್ಲಿ ಅಡ್ಡಾಡಿದರೆ ನಮಗೆ ಇಲ್ಲಿನ ಅರಣ್ಯ ಮತ್ತು ಅದರೊಳಗಿನ ವನ್ಯ ಜೀವಿ ಸಂಪತ್ತಿನ ಅರಿವಾಗುತ್ತದೆ. ಈ ಅರಣ್ಯದೊಳಗೆ ಒಂದು ಸುತ್ತು ಬಂದರೆ ಇಲ್ಲಿರುವ ಅಪರೂಪದ ಜೀವಗಳು ನಮ್ಮ ಗಮನಸೆಳೆಯುತ್ತವೆ. ಬಂಡೀಪುರ, ಮಲೆಮಹದೇಶ್ವರ ಬೆಟ್ಟ, ಬಿಳಿಗಿರಿರಂಗನಬೆಟ್ಟ, ಹಿಮವದ್ ಗೋಪಾಲ ಸ್ವಾಮಿ ಬೆಟ್ಟಗಳು ಹಸಿರು ಅರಣ್ಯದ ಬೆಟ್ಟಗುಡ್ಡಗಳ ಸಿರಿಸಂಪತ್ತಿನೊಂದಿಗೆ ನಮ್ಮನ್ನು ಸೆಳೆಯುತ್ತವೆ.
ಇನ್ನು ಈ ವನ್ಯಪ್ರದೇಶದಲ್ಲಿ ಕರಡಿ, ಹುಲಿ, ಚಿರತೆ, ಕಾಡುಕೋಣಗಳು, ಅಪರೂಪದ ಚಿಟ್ಟೆ, ಜಿಂಕೆ, ಸಾರಂಗಿಗಳು ಸೇರಿದಂತೆ ಹಲವು ಜೀವ ಸಂಕುಲಗಳು ಇಲ್ಲಿದ್ದು, ಇವುಗಳಿಗೆಲ್ಲ ಆಸರೆ ನೀಡಿರುವುದು ಇಲ್ಲಿನ ಅರಣ್ಯ ಪ್ರದೇಶಗಳಾಗಿವೆ. ಅದರಲ್ಲೂ ಬಂಡೀಪುರ, ಬಿಳಿಗಿರಿರಂಗನಬೆಟ್ಟ, ಮಲೆಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶಗಳು ನಿಸರ್ಗ ಪ್ರೇಮಿಗಳಿಗೆ ಮತ್ತು ವನ್ಯಜೀವಿಗಳ ಕುರಿತಂತೆ ಅಧ್ಯಯನ ಮಾಡುವವರಿಗೆ ಸೂಕ್ತಪ್ರದೇಶವಾಗಿದೆ. ಅಧ್ಯಯನ ಮಾಡುವಾಗಲೆಲ್ಲ ಅಪರೂಪದ ಜೀವರಾಶಿಗಳು ಪತ್ತೆಯಾಗಿರುವುದು ಇಲ್ಲಿನ ವಿಶೇಷತೆಯಾಗಿದೆ.
ಅಚ್ಚರಿ ಮೂಡಿಸಿದ ಬಿಳಿಕಡವೆ
ಇದೆಲ್ಲದರ ನಡುವೆ ಚಾಮರಾಜನಗರದಲ್ಲಿರುವ ಕಾವೇರಿ ವನ್ಯಧಾಮ ಇದೀಗ ಎಲ್ಲರ ಗಮನಸೆಳೆದಿದೆ. ಇತ್ತೀಚೆಗೆ ಇಲ್ಲಿ ಚಿರತೆಗಳ ಅಧ್ಯಯನ ಮಾಡಲು ಹೊರಟ ತಂಡದ ಕ್ಯಾಮರಾ ಕಣ್ಣಿಗೆ ಬಿಳಿ ಕಡವೆ ಬಿದ್ದಿದೆ. ಇದು ಈಗ ಎಲ್ಲರ ಗಮನಸೆಳೆದಿದ್ದು, ಅಯ್ಯೋ ಬಿಳಿಕಡವೆಯಾ ಎಂದು ಅಚ್ಚರಿಗೊಳ್ಳುತ್ತಿದ್ದಾರೆ. ಹಾಗೆಂದು ಚಾಮರಾಜನಗರದ ಅರಣ್ಯದಲ್ಲಿ ಇದೇ ಮೊದಲ ಬಾರಿಗೆ ಪತ್ತೆಯಾದ ಬಿಳಿಕಡೆವೆಯಲ್ಲ. ಈ ಹಿಂದೆ ಅಂದರೆ 2014ರಲ್ಲಿ ಬಂಡೀಪುರದಲ್ಲಿ ಬಿಳಿಕಡವೆ ಪತ್ತೆಯಾಗಿತ್ತಂತೆ. ಅದಾದ ನಂತರ ಸುಮಾರು ಒಂಬತ್ತು ವರ್ಷಗಳ ಬಳಿಕ ಜಿಲ್ಲೆಯ ಕಾವೇರಿ ವನ್ಯಧಾಮದಲ್ಲಿ ಪತ್ತೆಯಾಗಿರುವುದು ವಿಶೇಷವಾಗಿದೆ.












Click it and Unblock the Notifications