Male mahadeshwara temple: 2023ರಲ್ಲಿ ಮಲೆ ಮಾದಪ್ಪನ ಆದಾಯ ಎಷ್ಟು ಕೋಟಿ ಗೊತ್ತಾ?-ಅಂಕಿಅಂಶಗಳ ವಿವರ ತಿಳಿಯಿರಿ
ಚಾಮರಾಜನಗರ, ಡಿಸೆಂಬರ್, 20: ಕರ್ನಾಟಕದ ಪ್ರಮುಖ ಯಾತ್ರಸ್ಥಳಗಳಲ್ಲಿ ಒಂದಾದ ಮಲೆ ಮಹದೇಶ್ವರ ಬೆಟ್ಟಕ್ಕೆ 2023ರಲ್ಲಿ 50 ಲಕ್ಷಕ್ಕೂ ಅಧಿಕ ಮಂದಿ ಭಕ್ತರು ಭೇಟಿ ಕೊಟ್ಟಿದ್ದು, ಈ ವೇಳೆ ಕೋಟ್ಯಾಂತರ ರೂಪಾಯಿ ಆದಾಯ ಹರಿದುಬಂದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
2023 ಅಂತ್ಯಕ್ಕೆ ಬಂದಿರುವ ಹೊತ್ತಿನಲ್ಲಿ ಈ ವರ್ಷದ ಆದಾಯದ ಲೆಕ್ಕವನ್ನು ಪ್ರಾಧಿಕಾರವು ನೀಡಿದ್ದು, ಜನವರಿಯಿಂದ ಡಿಸೆಂಬರ್ವರೆಗೂ ನಡೆದ ಒಟ್ಟು ಹುಂಡಿ ಎಣಿಕೆಯಲ್ಲಿ 26,18,28,295 ರೂಪಾಯಿ ಸಂಗ್ರಹವಾಗಿದ್ದು, 798 ಗ್ರಾಂ ಚಿನ್ನ, 27 ಕೆಜಿ ಬೆಳ್ಳಿ ಕಾಣಿಕೆ ರೂಪದಲ್ಲಿ ಭಕ್ತರು ಈ ವರ್ಷ ಮಾದಪ್ಪನಿಗೆ ಸಲ್ಲಿಸಿದ್ದಾರೆ.

ಕ್ಷೇತ್ರದಲ್ಲಿ ಜನಪ್ರಿಯ ಉತ್ಸವಗಳಲ್ಲಿ ಒಂದಾದ ಚಿನ್ನದ ರಥೋತ್ಸವ ಮೂಲಕ 16,27,74,240 ರೂಪಾಯಿ ಬಂದಿದ್ದು, ಬೆಳ್ಳಿ ರಥೋತ್ಸವದ ಮೂಲಕ 6 ತಿಂಗಳಲ್ಲಿ 14 ಲಕ್ಷ ಬಂದಿದೆ. ಲಾಡು ಮಾರಾಟದಿಂದಲೇ 15 ಕೋಟಿ ಆದಾಯ ಕ್ಷೇತ್ರಕ್ಕೆ ಹರಿದು ಬಂದಿರುವುದು ಬೆಟ್ಟಕ್ಕೆ 2023ರಲ್ಲಿ ಬಂದಿರುವ ಭಕ್ತ ಸಾಗರಕ್ಕೆ ಸಾಕ್ಷಿಯಾಗಿದೆ.
50 ಲಕ್ಷಕ್ಕೂ ಅಧಿಕ ಮಂದಿ ಭೇಟಿ: ಮಲೆ ಮಹದೇಶ್ವರ ಬೆಟ್ಟಕ್ಕೆ 2023ರಲ್ಲಿ 50 ಲಕ್ಷಕ್ಕೂ ಅಧಿಕ ಮಂದಿ ಭಕ್ತರು ಭೇಟಿ ಕೊಟ್ಟಿದ್ದಾರೆ ಎಂದು ಪ್ರಾಧಿಕಾರ ಅಂದಾಜಿಸಿದೆ. ಅಕ್ಟೋಬರ್, ನವೆಂಬರ್ ಹಾಗೂ ಡಿಸೆಂಬರ್ ತಿಂಗಳುಗಳಲ್ಲಿ 8-9 ಲಕ್ಷದಷ್ಟು ಮಂದಿ ಭಕ್ತರು ಭೇಟಿ ಕೊಟ್ಟಿದ್ದು, ಶಕ್ತಿ ಯೋಜನೆಯೂ ಒಂದು ಕಾರಣವಾಗಿದೆ. ಹುಂಡಿ ಎಣಿಕೆ, ಉತ್ಸವ, ಲಾಡು ಮಾರಾಟದಿಂದ ಪ್ರಾಧಿಕಾರಕ್ಕೆ 2023ರಲ್ಲಿ 63,38,02,804 ರೂಪಾಯಿ ಆದಾಯ ಬಂದಿದ್ದು, ಮಲೆ ಮಾದಪ್ಪ ವರ್ಷದಿಂದ ವರ್ಷಕ್ಕೆ ಶ್ರೀಮಂತನಾಗುತ್ತಿದ್ದಾನೆ.
ಮಲೆ ಮಾದಪ್ಪನಿಗೆ 1.38 ಕೋಟಿ ಆದಾಯ
ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಕಡೆ ಕಾರ್ತಿಕ ಮಾಸ ಹಾಗೂ ಅಮಾವಾಸ್ಯೆಯ ಪ್ರಯುಕ್ತ ಆಗಮಿಸಿದ್ದ ಲಕ್ಷಾಂತರ ಭಕ್ತಾದಿಗಳಿಂದ ಕೇವಲ ನಾಲ್ಕು ದಿನಗಳ ಅವಧಿಯಲ್ಲಿ 1.38 ಕೋಟಿ ಆದಾಯ ಹರಿದುಬಂದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಎರಡನೇ ಶನಿವಾರ, ಭಾನುವಾರ, ಕೊನೆಯ ಕಾರ್ತಿಕ ಸೋಮವಾರ ಹಾಗೂ ಅಮಾವಾಸ್ಯೆ ದಿನಗಳಲ್ಲಿ ಹೆಚ್ಚಿನ ಭಕ್ತಾದಿಗಳು ಆಗಮಿಸಿ ಚಿನ್ನದ ರಥೋತ್ಸವ, ಬೆಳ್ಳಿ ರಥೋತ್ಸವ ಹುಲಿ ವಾಹನ, ರುದ್ರಾಕ್ಷಿ ವಾಹನ ಬಸವ ಮಂಟಪ, ಲಾಡು ಮಾರಾಟ, ವಿವಿಧ ಸೇವೆಗಳು ಅಕ್ಕಿ ಸೇವೆ, ಮಿಶ್ರ ಪ್ರಸಾದ, ಪುದುವಟ್ಟು, ಮಾಹಿತಿ ಕೇಂದ್ರ ಹಾಗೂ ತಾಳಬೆಟ್ಟ ಭವನಗಳಿಂದ, ಪಾರ್ಕಿಂಗ್, ಕಲ್ಲುಸಕ್ಕರೆ, ತೀರ್ಥ, ಬ್ಯಾಗ್ ಮಾರಾಟದಿಂದ 1,38,50,311 ರೂಪಾಯಿ ಆದಾಯ ಹರಿದುಬಂದಿದೆ.
ನಾಲ್ಕು ದಿನಗಳ ಅವಧಿಯಲ್ಲಿ ವಿವಿಧ ಉತ್ಸವಗಳಾದ 1,162 ಚಿನ್ನದ ರಥೋತ್ಸವ, 42 ಬೆಳ್ಳಿ ರಥೋತ್ಸವ, 555 ಬಸವ ವಾಹನ, 3,771 ಹುಲಿ ವಾಹನ, 234 ರುದ್ರಾಕ್ಷಿ ವಾಹನದ ಹರಕೆ ಸಲ್ಲಿಕೆ ಮೂಲಕ 49,63,203 ರೂಪಾಯಿ ಆದಾಯ ಬಂದಿದೆ. ಇನ್ನು ನವೆಂಬರ್ 20ರಿಂದ ಡಿಸೆಂಬರ್ 11ರವರೆಗೆ ನಡೆದ ಕಾರ್ತಿಕ ಮಾಸದ ವಿಶೇಷ ಪೂಜೆಗಳು ಯಾವುದೇ ತೊಂದರೆಯಾಗದಂತೆ ಯಶಸ್ವಿಯಾಗಿ ಪೂರ್ಣಗೊಂಡಿದೆ.
ಕಡೆಯ ಕಾರ್ತಿಕ ಸೋಮವಾರ ಹಾಗೂ ಅಮಾವಾಸ್ಯೆ ಪೂಜೆ ಹಿನ್ನೆಲೆ ಶ್ರೀ ಕ್ಷೇತ್ರ ಮಲೆಮಾದೇಶ್ವರ ಬೆಟ್ಟಕ್ಕೆ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆ ಇದ್ದ ಹಿನ್ನೆಲೆ, ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಮಲೆಮಾದೇಶ್ವರ ಬೆಟ್ಟದಲ್ಲಿ ಮೊಕ್ಕಂ ಹೂಡಿ ಭಕ್ತರಿಗೆ ಬೇಕಾದ ಕುಡಿಯುವ ನೀರು, ವಿಶೇಷ ದಾಸೋಹ, ನೆರಳಿನ ವ್ಯವಸ್ಥೆ ಸೇರಿದಂತೆ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಕಲ್ಪಿಸಿದ್ದರು.
ಈ ಸಂಬಂಧ ಪ್ರತಿಕ್ರಿಯಿಸಿದ ಅವರು, ಕಾರ್ತಿಕ ಮಾಸ ಪೂಜಾ ಮಹೋತ್ಸವ ಮುಗಿದಿದ್ದು, ಡಿಸೆಂಬರ್ 17ರಿಂದ ಧನುರ್ಮಾಸ ಪೂಜಾ ಪ್ರಾರಂಭ ಆಗುರುವುದರಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಓಂ ಶಕ್ತಿ, ಅಯ್ಯಪ್ಪ ಸ್ವಾಮಿ ಭಕ್ತಾದಿಗಳು ಆಗಮಿಸುವ ನಿರೀಕ್ಷೆ ಇರುವುದರಿಂದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಕಡೆಯ ಕಾರ್ತಿಕ ಸೋಮವಾರ ಹಾಗೂ ಅಮಾವಾಸ್ಯೆ ಪೂಜೆಗೆ ಲಕ್ಷಾಂತರ ಭಕ್ತರು ಶ್ರೀ ಕ್ಷೇತ್ರಕ್ಕೆ ಆಗಮಿಸಿದ್ದರು. ಭಕ್ತರಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಮುಂಜಾಗ್ರತ ಕ್ರಮವಾಗಿ ಕಲ್ಪಿಸಿದ್ದ ಹಿನ್ನೆಲೆ ಕಾರ್ತಿಕ ಮಾಸ ಹಾಗೂ ಅಮಾವಾಸ್ಯೆ ಪೂಜೆ ಯಶಸ್ವಿಯಾಗಿ ಜರುಗಿದೆ ಎಂದು "ಒನ್ ಇಂಡಿಯಾ ಕನ್ನಡ"ಕ್ಕೆ ತಿಳಿಸಿದ್ದರು.












Click it and Unblock the Notifications