ಮಾದಪ್ಪನ ಬೆಟ್ಟದ ರಸ್ತೆ ಮಧ್ಯೆ ನಿಂತ ಆನೆ; ಭಕ್ತರ ಪರದಾಟ
ಚಾಮರಾಜನಗರ, ಜೂ. 3: ಪ್ರಸಿದ್ಧ ಯಾತ್ರಾಸ್ಥಳ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳುವ ಮಾರ್ಗದಲ್ಲಿ ಸಲಗವೊಂದು ಬಂದು ನಿಂತು ಸಂಚಾರ ಅಸ್ತವ್ಯಸ್ತ ಮಾಡಿದ ಘಟನೆ ಗುರುವಾರ ಸಂಜೆ ನಡೆದಿದೆ.
ಮಲೆ ಮಹದೇಶ್ವರ ಬೆಟ್ಟ ದಕ್ಷಿಣ ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿರುವ ಒಂದು ಯಾತ್ರಾಸ್ಥಳವಾಗಿದೆ. ಇದು ಮೈಸೂರುನಿಂದ ಸುಮಾರು 150 ಕಿ.ಮೀ ಮತ್ತು ಬೆಂಗಳೂರಿನಿಂದ 210 ಕಿ.ಮೀ ದೂರದಲ್ಲಿದೆ. ಶ್ರೀ ಪುರುಷ ಮಹಾದೇಶ್ವರನ ಪ್ರಾಚೀನ ಮತ್ತು ಪವಿತ್ರ ದೇವಾಲಯ ಅತ್ಯಂತ ಜನಪ್ರಿಯ ಶೈವ ಯಾತ್ರಾ ಕೇಂದ್ರ ಮತ್ತು ಅತ್ಯಂತ ಶಕ್ತಿಶಾಲಿ ಶಿವ ದೇವಸ್ಥಾನ. ದಟ್ಟ ಕಾಡಿನ ಮಧ್ಯೆ ಈ ದೇವಾಲಯವು ಯಾತ್ರಾರ್ಥಿಗಳು ಮಾತ್ರವಲ್ಲದೆ ಪ್ರಕೃತಿ ಪ್ರಿಯರನ್ನು ಆಕರ್ಷಿಸುತ್ತದೆ.
ಮಲೆಮಹದೇಶ್ವರ ಬೆಟ್ಟಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿ ಸಿಗುವ ಕೋಣನಕೆರೆ ಕ್ರಾಸ್ ನಲ್ಲಿ ಕಾಡಾನೆಯೊಂದು ಮುಖ್ಯರಸ್ತೆಗೆ ಬಂದ ಪರಿಣಾಮ ಕೆಲ ಕಾಲ ವಾಹನ ಸಂಚಾರ ಸ್ಥಗಿತಗೊಳ್ಳುವ ಜೊತೆಗೆ ವಾಹನ ಸವಾರರಲ್ಲಿ ಭೀತಿಯನ್ನೂ ಹುಟ್ಟಿಸಿತು. ರಸ್ತೆ ಬದಿಯಲ್ಲಿರುವ ಕುರುಚಲು ( ಜುಜ್ಜಲು) ಗಿಡಮರಗಳನ್ನು ಮುರಿದು ಹಾಕುವ ದೃಶ್ಯ ಪ್ರಯಾಣಿಕರಿಗೆ ಕಂಡು ಬಂದಿತ್ತು. ಈ ದೃಶ್ಯವನ್ನು ದಾರಿಹೋಕರು ತಮ್ಮ ಮೊಬೈಲ್ ಮೂಲಕ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ.

ಸ್ಥಳೀಯರ ಕಿರುಚಾಟಕ್ಕೆ ಗಾಬರಿಕೊಂಡ ಕಾಡಾನೆ: ಕಾಡಿನಿಂದ ಮುಖ್ಯ ರಸ್ತೆಗೆ ಇಳಿದ ಕಾಡಾನೆ, ಅರ್ಧ ಗಂಟೆಗೂ ಹೆಚ್ಚುಕಾಲ ಹಿಂದೆ ಮುಂದೆ ಓಡಾಡಿ ವಾಹನ ಸವಾರರಿಗೆ ಭೀತಿ ಹುಟ್ಟಿಸಿತ್ತು. ರಸ್ತೆಯಲ್ಲಿದ್ದ ಬೈಕ್ ಕಡೆಗೆ ತೆರಳುತ್ತಿದ್ದಂತೆ ಚಾಲಕ ಹಿಂದಕ್ಕೆ ಹೋಗಿದ್ದಾನೆ. ಅಲ್ಲಿಂದ ವಾಪಸಾಗುತ್ತಿದ್ದಂತೆ ಸ್ಥಳೀಯರ ಕಿರುಚಾಟಕ್ಕೆ ಸ್ವಲ್ಪ ಗಾಬರಿಗೊಂಡಿತ್ತು.
ಈ ವೇಳೆ ಯಾವುದೇ ಅನಾಹುತ ಮಾಡಿಲ್ಲ. ಕಾಡಾನೆ ಕಾಣಿಸಿಕೊಳ್ಳುತ್ತಿದ್ದಂತೆ ಕೆಲವರು ಅಲ್ಲಿಂದ ದಿಕ್ಕಾಪಾಲಾಗಿ ಓಡಿದ್ದಾರೆ. ಎತ್ತ ಹೋಗಬೇಕೆಂಬುದು ತಿಳಿಯದೆ ಅತ್ತಿಂದಿತ್ತ, ಇತ್ತಿಂದತ್ತ ಓಡಾಡುತ್ತಿದ್ದ ಕಾಡಾನೆಯನ್ನು ಸ್ಥಳೀಯರು ಕೂಗಾಡಿ ಕಾಡಿಗೆ ಓಡಿಸುವ ಪ್ರಯತ್ನ ಮಾಡಿದರೂ ಅರ್ಧ ಗಂಟೆಯಾದರೂ ರಸ್ತೆಯಿಂದ ಕದಲದೆ ಕಾಡಾನೆ ಅಡ್ಡಾಡಿದೆ. ಸದ್ಯ ಕಾಡಾನೆಯಿಂದ ಪ್ರಯಾಣಿಕರಿಗೆ ಯಾವುದೇ ತೊಂದರೆ ನೀಡಿಲ್ಲ. ಕಾಡಾನೆ ಕಾಡಿಗೆ ತೆರಳಿದ ಬಳಿಕ ವಾಹನ ಸವಾರರು ಸಂಚಾರ ಆರಂಭಿಸಿದ್ದಾರೆ.
ಕಾಲುದಾರಿ ಮಧ್ಯೆ ಅಡ್ಡ ನಿಂತ ಒಂಟಿ ಸಲಗ:
ಹನೂರು ತಾಲ್ಲೂಕಿನ ಮಲೆಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿರುವ ನಾಗಮಲೆಯ ಕಾಡುಹಾದಿಯಲ್ಲಿ ಒಂಟಿ ಸಲಗವೊಂದು ಜನರಿಗೆ ದಾರಿ ಕೊಡದೇ ಒಂದು ಗಂಟೆಗೂ ಹೆಚ್ಚು ಕಾಲ 20 ಕ್ಕೂ ಹೆಚ್ಚು ಭಕ್ತರು ಕಾದುಕುಳಿತ ಘಟನೆ ಕಳೆದ ತಿಂಗಳಲ್ಲಿ ನಡೆದಿತು.

ನಾಗಮಲೆಗೆ ತೆರಳುವ ಕಾಲು ದಾರಿಯ ಮಧ್ಯೆ ಅಡ್ಡ ನಿಂತ ಒಂಟಿ ಸಲಗ. ಮಾದಪ್ಪನ ದರ್ಶನಕ್ಕೆ ಹೊರಟವರು ರಸ್ತೆಯಲ್ಲೇ 1 ಗಂಟೆ ಕಾಲ ಆತಂಕದಲ್ಲೆ ಕಾದು ಕುಳಿತರು! ಭಾನುವಾರದಂದ್ದು ಇಂಡಿಗನತ್ತ ಬಳಿ ಸಲಗವೊಂದು ದಾರಿ ಮಧ್ಯೆಯೇ ಒಂದು ತಾಸು ನಿಂತಿದ್ದರಿಂದ ನಾಗಮಲೆಗೆ ಮಾದಪ್ಪನ ದರ್ಶನಕ್ಕೆ ತೆರಳುತ್ತಿದ್ದ ಭಕ್ತರನ್ನು ಆತಂಕಕ್ಕೀಡು ಮಾಡಿತ್ತು. ವಿಷಯ ತಿಳಿದ, ಅರಣ್ಯ ಇಲಾಖೆ ವಾಚರ್ಗಳು ಭಕ್ತರ ಜೊತೆ ಸೇರಿ ಅರಚಾಡಿ ಕಿರುಚಾಡಿದರೂ ದಾರಿಬಿಟ್ಟು ಕದಲಿಲ್ಲ. ಇದರಿಂದ ಭಕ್ತರು ಕೆಲಕಾಲ ಆತಂಕಗೊಂಡಿದ್ದರು. ಇನ್ನು, ಇದೇ ಆನೆ ಬೆಳಗಿನ ಜಾವ ಹುಣಸೆಮರದ ರೆಂಬೆಗಳನ್ನು ಮುರಿದು ಹಾಕಿತ್ತು. ಅಲ್ಲದೆ ಕಳೆದ 4-5 ದಿನಗಳಿಂದ ರಸ್ತೆ ಬಳಿಯೇ ಬಂದು ನಿಲ್ಲುತ್ತಿರುವುದರಿಂದ ಸ್ಥಳೀಯರು ಮತ್ತು ಭಕ್ತರಲ್ಲಿ ಆತಂಕ ಹೆಚ್ಚಾಗಿದೆ. ನಾಗಮಲೆಯಲ್ಲಿ ಮಹದೇಶ್ವರನ ದೇಗುಲವಿದ್ದು 15 ಕಿಮೀ ಕಾಡಿನೊಳಗೆ ನಡೆದುಕೊಂಡೇ ನಾಗಮಲೆ ಮಾದಪ್ಪನ ದರ್ಶನ ಪಡೆಯಬೇಕಿದೆ.
ಭಕ್ತರಲ್ಲಿ ಆತಂಕ:
ಕಳೆದ ಒಂದೆರಡು ತಿಂಗಳ ಹಿಂದೆ ನಾಗಮಲೆಗೆ ಹೊಗಿಬರುವ ಇಬ್ಬರನ್ನು ಆನೆ ಬಲಿಪಡೆದಿತ್ತು. ತಾಳುಬೆಟ್ಟದ ಬಳಿ ಭೈಕಿನಲ್ಲಿ ಬರುತಿದ್ದ ವ್ಯಕ್ತಿಯನ್ನು ಹಾಗೂ ಭೆಟ್ಟದಿಂದ ತಮಿಳುನಾಡಿಗೆ ತೆರಳುವ ರಸ್ತೆಯಲ್ಲಿ ಮತ್ತೊಬ್ಬರಿಗೆ ದಾಳಿ ಮಾಡಿ ಸಾಯಿಸಿದೆ. ಇದರಿಂದಾಗಿ ಮಾದಪ್ಪನ ಭಕ್ತರು ಆತಂಕಗೊಂಡಿದ್ದಾರೆ. ಭಕ್ತರು ನಿರ್ಬಿತಿಯಿಂದ ಬರಲುಅರಣ್ಯ ಇಲಾಖೆಯ ಅಧಿಕಾರಿಗಳು ಅಲ್ಲಲ್ಲಿನಿಂತು ರಕ್ಷಣೆ ನೀಡಬೇಕಾಗಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications