ಚಾಮರಾಜನಗರ: ಮದ್ಯಗಂಡಿಗಳಲ್ಲಿ ಮತದಾನ ಜಾಗೃತಿಯ ಭಿತ್ತಿಪತ್ರ
ಚಾಮರಾಜನಗರ, ಏಪ್ರಿಲ್, 06: ಈಗಾಗಲೇ ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆ ಆಗಿದ್ದು, ಎಲ್ಲಾ ಕ್ಷೇತ್ರದಲ್ಲಿಯೂ ಆಯಾ ಪಕ್ಷಗಳ ಅಭ್ಯರ್ಥಿಗಳು ಭಾರೀ ಪೈಪೋಟಿ ನಡೆಸುತ್ತಿದ್ದಾರೆ. ಮತ್ತೊಂದೆಡೆ ಅಧಿಕಾರಿಗಳು ಮತದಾನದ ಜಾಗೃತಿ ಮೂಡಿಸುವಲ್ಲಿ ಕಾರ್ಯನಿರತರಾಗಿದ್ದಾರೆ. ಹಾಗೆಯೇ ಚಾಮರಾಜನಗರ "ಲೋಕ ಅಖಾಡದಲ್ಲಿ ಯಾವುದೇ ಅಕ್ರಮ ನಡೆಯಬಾರದು ಎಂದು ಅಬಕಾರಿ ಇಲಾಖೆ ಕಟ್ಟೆಚ್ಚರ ವಹಿಸಿದೆ.
ಇದೇ ಮೊದಲ ಬಾರಿ ಅಬಕಾರಿ ಇಲಾಖೆ ಮದ್ಯದಂಗಡಿಗಳಲ್ಲಿ ಮತದಾನ ಜಾಗೃತಿ ಮೂಡಿಸುತ್ತಿದ್ದು, ಚಾಮರಾಜನಗರದ ಮದ್ಯಗಂಡಿಗಳಲ್ಲಿ ಭಿತ್ತಿಪತ್ರ ಅಂಟಿಸಿ ಮದ್ಯಪ್ರಿಯರು ಮತದಾನದಿಂದ ದೂರ ಉಳಿಯದಂತೆ ಅರಿವು ಮೂಡಿಸುತ್ತಿದೆ.

ಗಡಿಜಿಲ್ಲೆಯಲ್ಲಿ 145ಕ್ಕೂ ಅಧಿಕ ಔಟ್ ಲೆಟ್ಗಳಿದ್ದು, ಎಲ್ಲೆಡೆ ಮತದಾನ ಜಾಗೃತಿ ಭಿತ್ತಿಪತ್ರ ಅಂಟಿಸಲಾಗಿದೆ. ಮದ್ಯದಂಗಡಿಗೆ ಹೋಗುವ ಮುನ್ನ, ಮದ್ಯ ಸೇವಿಸುವಾಗ ಜನರಿಗೆ ಕಾಣುವಂತೆ ಹಾಗೂ ಹೊರಹೋಗುವ ಸ್ಥಳಗಳಲ್ಲಿ ಈ ಬಿತ್ತಿಪತ್ರ ಅಂಟಿಸಲಾಗಿದ್ದು, ಮತದಾನ ಜಾಗೃತಿ ವ್ಯಾಪ್ತಿಗೆ ಇದೇ ಮೊದಲ ಬಾರಿಗೆ ಮದ್ಯಪ್ರಿಯರನ್ನೂ ಸೇರಿಸಲಾಗಿದೆ.
ಚಾಮರಾಜನಗರದಲ್ಲಿ 18 ಲಕ್ಷಕ್ಕೂ ಅಧಿಕ ಮತದಾರರಿದ್ದು, ಮದ್ಯಪ್ರಿಯರ ಸಂಖ್ಯೆ 5 ಲಕ್ಷದಷ್ಟಿದೆ. ಈ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಯು ಮದ್ಯಪ್ರಿಯರು ಮತದಾನದಿಂದ ದೂರ ಉಳಿಯದಂತೆ ಮಾಡಲು ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇನ್ನು, ಜಿಲ್ಲೆಯಲ್ಲಿ ರಾಜಕಾರಣಿಗಳ ಮಾಲಿಕತ್ವ ಹಾಗೂ ಪ್ರಭಾವ ಇರುವ ಮದ್ಯದಂಗಡಿಗಳ ಮೇಲೆ ಅಬಕಾರಿ ಇಲಾಖೆ ನಿಗಾ ಇಟ್ಟಿದೆ.
ಜಿಲ್ಲೆಯಲ್ಲಿ ಒಟ್ಟು 41 ಮದ್ಯದಂಗಡಿಗಳನ್ನು ಪಟ್ಟಿ ಮಾಡಿ ನಿತ್ಯ ಖರೀದಿ, ದಾಸ್ತಾನು ಪರಿಶೀಲನೆ ಮಾಡುವ ಜೊತೆಗೆ ಈ ಹಿಂದೆ ಖರೀದಿ- ಮಾರಾಟದ ಲೆಕ್ಕವನ್ನೂ ಅಬಕಾರಿ ಇಲಾಖೆ ತಾಳೆ ಹಾಕುವ ಕೆಲಸ ಮಾಡುತ್ತಿದ್ದು, ಅಕ್ರಮ ಮದ್ಯ ಸಂಗ್ರಹಕ್ಕೆ ಕಡಿವಾಣ ಹಾಕುವ ಕೆಲಸ ಮಾಡುತ್ತಿದೆ. ಒಟ್ಟಿನಲ್ಲಿ ಅಬಕಾರಿ ಇಲಾಖೆಯು ಚುನಾವಣೆ ಹಿನ್ನೆಲೆ ತಪಾಸಣೆ, ಕಾರ್ಯಾಚರಣೆಗಳನ್ನು ಚುರುಕುಗೊಳಿಸಿ ಕಟ್ಟೆಚ್ಚರ ವಹಿಸಿದೆ.












Click it and Unblock the Notifications