ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದ ಗುಂಡ್ಲುಪೇಟೆ ಛಾಯಾಗ್ರಾಹಕ
ಚಾಮರಾಜನಗರ, ಆಗಸ್ಟ್ 17: ದೆಹಲಿಯ ಜೆಸಿಎಮ್ ಛಾಯಾಗ್ರಹಣ ಸಂಸ್ಥೆಯ ಆಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ವನ್ಯಜೀವಿ ಛಾಯಾಗ್ರಹಣ ಸ್ಪರ್ಧೆಯಲ್ಲಿ ಸ್ಥಳೀಯ ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು ಎರಡು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಮಡಿಕೇರಿ ಸೌಂದರ್ಯದ ಸೊಬಗು ಬಿಚ್ಚಿಟ್ಟ ಆ 4 ಚಿತ್ರಗಳು
ಮುಂದಿನ ಎರಡು ತಿಂಗಳಲ್ಲಿ ಇನ್ನೂ ಎರಡು ಸುತ್ತುಗಳಲ್ಲಿ ಸ್ಪರ್ಧೆಗಳು ನಡೆಯಲಿದ್ದು ಅಕ್ಟೋಬರ್ ನಲ್ಲಿ ದೆಹಲಿಯಲ್ಲಿ ಪ್ರಶಸ್ತಿ ವಿತರಣೆ ನಡೆಯಲಿದೆ.
ಈ ಸ್ಪರ್ಧೆಯಲ್ಲಿ ಭಾರತವಲ್ಲದೆ, ಅಮೆರಿಕಾ, ರಷ್ಯಾ, ಹಂಗರಿ, ಬೆಲ್ಜಿಯಂ, ಫ್ರಾನ್ಸ್, ಇಂಗ್ಲೆಂಡ್ ಮುಂತಾದ 21 ದೇಶದ 1000ಕ್ಕೂ ಹೆಚ್ಚು ಸ್ವರ್ಧಿಗಳ 6000 ಛಾಯಾಚಿತ್ರಗಳನ್ನು ಕಳುಹಿಸಿದ್ದು, ಅದರಲ್ಲಿ ಮಧು ಅವರು ಸೆರೆಹಿಡಿದ ವನ್ಯಜೀವಿ ಛಾಯಾಚಿತ್ರಗಳಿಗೆ ಬಹುಮಾನಗಳು ಬಂದಿರುವುದು ಹೆಮ್ಮೆಯ ವಿಚಾರವಾಗಿದೆ.
ಡಿಜಿಟಲ್ ಪ್ರೊಜೆಕ್ಷನ್ ವಿಭಾಗದಲ್ಲಿ ಇವರು ಸೆರೆಹಿಡಿದ ನೀಲಕಂಠ ಪಕ್ಷಿಯು ಅತ್ಯುತ್ತಮ ಪಕ್ಷಿ ಛಾಯಾಚಿತ್ರ ಪ್ರಶಸ್ತಿಗೂ ಹಾಗೂ ಪ್ರಿಂಟ್ ವಿಭಾಗದಲ್ಲಿ ಬಂಡೀಪುರದಲ್ಲಿ ಸೆರೆಹಿಡಿದ ಜಿಂಕೆಯ ಮಿಲನ ಛಾಯಾಚಿತ್ರ ಅತ್ಯುತ್ತಮ ಸಸ್ತನಿ ಪ್ರಶಸ್ತಿಗೂ ಭಾಜನವಾಗಿದೆ.
ಇದು ಇವರಿಗೆ ದೊರೆತ 23ನೇ ಅಂತಾರಾಷ್ಟ್ರೀಯ ವನ್ಯಜೀವಿ ಛಾಯಾಚಿತ್ರ ಪ್ರಶಸ್ತಿಯಾಗಿದೆ. ಇದುವರೆಗೆ 19 ಬಾರಿ ರಾಷ್ಟ್ರೀಯ ವನ್ಯಜೀವಿ ಛಾಯಾಗ್ರಾಹಕ ಪ್ರಶಸ್ತಿ ಪಡೆದಿದ್ದಾರೆ. ಇವರು ಬರೆದ ವನ್ಯಜೀವಿ ಕುರಿತ 110 ಲೇಖನಗಳು ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ಶಾಲಾ ಕಾಲೇಜುಗಳಲ್ಲಿ ಪರಿಸರ ಹಾಗೂ ವನ್ಯಜೀವಿಗಳ ಬಗ್ಗೆ ಉಪನ್ಯಾಸ ಮಾಡಿ ಮಕ್ಕಳಲ್ಲಿ ಪರಿಸರದ ಅರಿವು ಮೂಡಿಸುತ್ತಿದ್ದಾರೆ.
ಹಾಗೆಯೇ ಬಿಡುವಿನ ವೇಳೆಯಲ್ಲಿ ಗಿಡ ಬೆಳೆಸುತ್ತಾರೆ. ಕಳೆದ 23ವರ್ಷಗಳಿಂದ ವನ್ಯಜೀವಿ ಛಾಯಾಗ್ರಹಣ ಮಾಡುತ್ತಿರುವ ಇವರು ಪ್ರಸ್ತುತ ನೀಲಗಿರಿ ಜೀವ ವೈವಿಧ್ಯತಾಣದ ಸಂಶೋಧನಾ ತಂಡದ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.