ಬಂಡೀಪುರ ಬಫರ್ ಜೋನ್ನಲ್ಲಿ ಅಕ್ರಮ ವಹಿವಾಟಿಗಿಲ್ಲವೇ ತಡೆ?
ಚಾಮರಾಜನಗರ, ಆಗಸ್ಟ್ 11: ಬಂಡೀಪುರ ಹುಲಿಯೋಜನೆಯ ಬಫರ್ ಜೋನ್ ನಲ್ಲಿ ಯಾವುದೇ ರೀತಿಯ ವಾಣಿಜ್ಯ ವಹಿವಾಟುಗಳಿಗೆ ಅವಕಾಶವಿಲ್ಲ. ಆದರೂ ಮದ್ದೂರು ವಲಯದ ಕಾಡಂಚಿನ ಕಗ್ಗಳದಹುಂಡಿ ಗ್ರಾಮ ವ್ಯಾಪ್ತಿಯಲ್ಲಿ ಹೋಟೆಲ್ ನಡೆಯುತ್ತಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಕಳೆದ ಕೆಲವು ದಿನಗಳಿಂದ ಸ್ಥಳೀಯ ಬೇರಂಬಾಡಿ ಗ್ರಾಪಂ ಆಡಳಿತ ಮಂಡಳಿಯ ನೆರವಿನಿಂದ ಹೊಟೇಲ್ ಹಾಗೂ ಲಾಡ್ಜ್ ತೆರೆದು ಹಗಲಿರುಳು ವ್ಯವಹಾರ ಆರಂಭಿಸಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಹೊಟೇಲ್ ಆರಂಭವಾದ ಬಳಿಕ ಇಲ್ಲಿ ವಾಹನಗಳ ಸಂಚಾರ ಹೆಚ್ಚಾಗಿದೆ. ಅಕ್ರಮವಾಗಿ ಕುಡಿಯುವ ನೀರಿನ ಸಂಪರ್ಕವನ್ನು ಕಲ್ಪಿಸಲಾಗಿದೆ ಎಂಬುದು ಇಲ್ಲಿನವರ ಆರೋಪವಾಗಿದೆ. ಜತೆಗೆ ಕೂಡಲೇ ಮುಚ್ಚಿಸುವಂತೆ ಒತ್ತಾಯಿಸಿ ಗ್ರಾಮಪಂಚಾಯಿತಿ, ಅರಣ್ಯ ಇಲಾಖೆ ಹಾಗೂ ತಾಲೂಕು ಪಂಚಾಯಿತಿಗಳಿಗೆ ಮನವಿಯನ್ನು ಸ್ಥಳೀಯರು ಸಲ್ಲಿಸಿದ್ದಾರೆ.
ಅರಣ್ಯ ಇಲಾಖೆಯ ನೋಟೀಸ್ ಗಿಲ್ಲ ಬೆಲೆ
ಹಾಗೆನೋಡಿದರೆ ಬಂಡೀಪುರ ಹುಲಿಯೋಜನೆಯ ವ್ಯಾಪ್ತಿಯಲ್ಲಿ ಬರುವ ಮದ್ದೂರು ವಲಯದ ಕಾಡಂಚಿನ ಕಗ್ಗಳದಹುಂಡಿ ಗ್ರಾಮದಲ್ಲಿ ಕಳೆದ ನಾಲ್ಕು ವರ್ಷಗಳ ಹಿಂದೆ ರೆಸಾರ್ಟ್ ನಿರ್ಮಾಣವಾಗಿತ್ತು. ಈ ವ್ಯಾಪ್ತಿ ಹುಲಿ ಯೋಜನೆಗೆ ಬರುವುದರಿಂದ ವಾಣಿಜ್ಯ ವಹಿವಾಟಿಗೆ ಅವಕಾಶವಿಲ್ಲ ಎಂದು ಅರಣ್ಯ ಇಲಾಖೆಯು ನೊಟೀಸ್ ನೀಡಿತ್ತು. ಆದರೂ ಪ್ರಯೋಜನವಾಗಿರಲಿಲ್ಲ. ಲೆಕ್ಕಿಸದೆ ವ್ಯವಹಾರ ನಡೆಸುತ್ತಿರುವುದರ ಬಗ್ಗೆ ಕ್ರಮ ಕೈಗೊಳ್ಳುವಂತೆ ಕಂದಾಯ ಇಲಾಖೆಗೆ ಮನವಿ ಮಾಡಿತ್ತು. ಅಂದಿನ ತಹಸೀಲ್ದಾರ್ ಮುಚ್ಚಿಸುವಲ್ಲಿ ಯಶಸ್ವಿಯಾಗಿದ್ದರು.

ಇದೀಗ ಮತ್ತೆ ಈ ವ್ಯಾಪ್ತಿಯಲ್ಲಿ ಹೊಟೇಲ್ ಗಳು ತಲೆ ಎತ್ತುತ್ತಿರುವುದು ಅಚ್ಚರಿಗೆ ಕಾರಣವಾಗಿದ್ದು, ಸ್ಥಳೀಯ ಬೇರಂಬಾಡಿ ಗ್ರಾಮಪಂಚಾಯಿತಿ ಹೇಗೆ ಪರವಾನಗಿ ನೀಡುತ್ತಿದೆ ಎನ್ನುವುದೇ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಈ ನಡುವೆ ಪಿಡಿಓಗೆ ತಾಪಂ ಇಓ ಸಂಬಂಧಪಟ್ಟ ದಾಖಲಾತಿಗಳೊಡನೆ ಕಚೇರಿಗೆ ಆಗಮಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.
ಸ್ಥಳೀಯರ ಆಕ್ರೋಶ
ನ್ಯಾಯಾಲಯದ ಆದೇಶವಿದ್ದರೂ ಅದನ್ನು ಮೇಲಿಂದ ಮೇಲೆ ಉಲ್ಲಂಘಿಸಿ, ಅರಣ್ಯ ಇಲಾಖೆಗೆ ಸೆಡ್ಡು ಹೊಡೆದು ವಾಣಿಜ್ಯ ವಹಿವಾಟು ನಡೆಸಲು ಮುಂದಾಗುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಇಷ್ಟಕ್ಕೂ ಇಲ್ಲಿ ವ್ಯಾಪಾರ ವಹಿವಾಟು ನಡೆಸುವವರು ಸ್ಥಳೀಯರಾಗಿರದೆ ಕೇರಳದವರಾಗಿದ್ದು, ಅದ್ಯಾವ ಮಾನದಂಡದ ಮೇಲೆ ಸ್ಥಳೀಯ ಪಂಚಾಯಿತಿಗಳು ವ್ಯಾಪಾರ ವಹಿವಾಟು ನಡೆಸಲು ಅವಕಾಶ ಮಾಡಿಕೊಡುತ್ತಿವೆ ಎನ್ನುವುದು ಪ್ರಶ್ನೆಯಾಗಿದೆ.
ಈ ಕುರಿತಂತೆ ಮದ್ದೂರು ವಲಯಾರಣ್ಯಾಧಿಕಾರಿ ಸಿ.ಅಭಿಲಾಷ್ ಮಾತನಾಡಿ ಕಳೆದ ಕೆಲ ದಿನಗಳ ಹಿಂದೆ ಪ್ರಾರಂಭವಾದ ರೆಸಾರ್ಟ್ ಮುಚ್ಚುವಂತೆ ಅರಣ್ಯ ಇಲಾಖೆಯು ಸಂಬಂಧಿಸಿದವರಿಗೆ ನೊಟೀಸ್ ಜಾರಿ ಮಾಡಿದೆ. ಜತೆಗೆ ರೆಸಾರ್ಟ್ ತೆರವುಗೊಳಿಸುವಂತೆ ಬೇರಂಬಾಡಿ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ತಹಸೀಲ್ದಾರ್ ಗೂ ಮನವಿ ಸಲ್ಲಿಸಿರುವುದಾಗಿ ಹೇಳಿದ್ದಾರೆ.












Click it and Unblock the Notifications