ಕಡಿಮೆ ಬೆಲೆಗೆ ಮೊಬೈಲ್, ರೈತ ಮುಖಂಡರಿಗೆ ವಂಚನೆ
ಚಾಮರಾಜನಗರ, ಸೆಪ್ಟೆಂಬರ್ 13: ಮೋಸ ಹೋಗುವವರು ಇರೋ ತನಕ ಮೋಸ ಮಾಡುವವರು ಇದ್ದೇ ಇರುತ್ತಾರೆ ಎಂಬುವುದಕ್ಕೆ ಮೋಸದ ವಿವಿಧ ಜಾಲಗಳೇ ಸಾಕ್ಷಿ. ಮೋಸದ ಮೂಲಕ ಹಣ ಸಂಪಾದನೆಗಾಗಿ ದಿನಕ್ಕೊಂದು ಮಾರ್ಗ ಹುಡುಕುವ ವಂಚಕರು ಅಮಾಯಯಕರನ್ನು ವಂಚಿಸುತ್ತಲೇ ಬರುತ್ತಿದ್ದಾರೆ.
ಜಾಹೀರಾತು ನೋಡಿ ಕಡಿಮೆ ಬೆಲೆಗೆ ಮೊಬೈಲ್ ಖರೀದಿಸಿದ ರೈತ ಮುಖಂಡರೊಬ್ಬರು ಇದೀಗ ಪಿಗ್ಗಿ ಬಿದ್ದಿದ್ದಾರೆ. ಈ ಘಟನೆ ಗುಂಡ್ಲುಪೇಟೆಯಲ್ಲಿ ನಡೆದಿದೆ. ಡ್ರಿಪ್ ಅಂಗಡಿ ಇಟ್ಟುಕೊಂಡಿರುವ ರೈತ ಸಂಘದ ಮುಖಂಡ ಕಡಬೂರು ಮಂಜುನಾಥ್ ದಿನಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ಜಾಹೀರಾತು ನೋಡಿ ಅಲ್ಲಿದ್ದ ದೂರವಾಣಿಯನ್ನು ಸಂಪರ್ಕಿಸಿದಾಗ ರೂ 1999ಕ್ಕೆ ಒಂದು ಆಂಡ್ರಾಯ್ಡ್ ಮೊಬೈಲ್, ನೊಕಿಯಾ ಮೊಬೈಲ್ ಸ್ಮಾರ್ಟ್ ವಾಚ್ಗಳನ್ನು ನೀಡುವುದಾಗಿ ಹೇಳಿದ್ದಾರೆ. ಇದನ್ನು ನಂಬಿ ಬುಕ್ ಮಾಡಿದ್ದಾರೆ.
ಸೆ.12 ರಂದು ಅಂಚೆಯಲ್ಲಿ ಬಂದ ಪಾರ್ಸೆಲ್ಗೆ ಸೇವಾಶುಲ್ಕ ಸೇರಿದಂತೆ ಒಟ್ಟು 2600 ರೂಪಾಯಿ ಹಣ ಪಾವತಿಸಿ ಬಿಚ್ಚಿನೋಡಿದಾಗ ಕಳಪೆ ಮೊಬೈಲ್ ಮಾತ್ರ ಇತ್ತು. ಕೂಡಲೇ ಠಾಣೆಗೆ ತೆರಳಿ ದೂರು ನೀಡಿ ಅಂಚೆ ಇಲಾಖೆಯಿಂದ ವಂಚಕ ಕಂಪನಿಗೆ ಹಣಪಾವತಿಯನ್ನು ತಡೆಹಿಡಿಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟೇ ಅಲ್ಲದೆ, ಅಮಾಯಕರನ್ನು ವಂಚಿಸುವ ನಕಲಿ ಕಂಪನಿಗಳ ಬಗ್ಗೆ ಸೈಬರ್ ಪೊಲೀಸರಿಗೂ ದೂರು ನೀಡುವುದಾಗಿಯೂ ಹೇಳಿದ್ದಾರೆ.
ಇದೇ ರೀತಿ ವಂಚಕರು ಇನ್ನೆಷ್ಟು ಜನಕ್ಕೆ ಮೋಸ ಮಾಡಿದ್ದಾರೋ ಗೊತ್ತಿಲ್ಲ. ಕಡಿಮೆ ಬೆಲೆಗೆ ವಸ್ತುಗಳನ್ನು ನೀಡುವುದಾಗಿ ಜಾಹೀರಾತು ಪ್ರಕಟಿಸಿ ಜನರಿಗೆ ವಂಚಿಸುವ ದೊಡ್ಡ ಜಾಲವಿದ್ದು ಜನ ಎಚ್ಚರಿಕೆಯಿಂದ ವ್ಯವಹಾರ ಮಾಡುವುದು ಒಳಿತು. ಹಣ ಮಾಡಲು ವಂಚನೆಯ ದಾರಿ ಅನುಸರಿಸುತ್ತಿರುವ ಕೆಲವು ವಂಚಕರು ದಿನಕ್ಕೊಂದು ಮಾರ್ಗವನ್ನು ಕಂಡು ಹಿಡಿಯುತ್ತಿದ್ದಾರೆ. ಇದರಲ್ಲಿ ಅಮಾಯಕರು ಬಲಿಯಾಗುತ್ತಿರುವುದು ಮಾತ್ರ ದುರ್ದೈವ.