ಚಾಮರಾಜನಗರ: ರಾಜ್ಯದ ಏಕೈಕ ಸ್ವರ್ಣಗೌರಿ ದೇವಾಲಯದಲ್ಲಿ ಅದ್ದೂರಿ ಗೌರಿ ಹಬ್ಬ
ಚಾಮರಾಜನಗರ, ಆಗಸ್ಟ್ 30 : ರಾಜ್ಯದ ಏಕೈಕ ಸ್ವರ್ಣಗೌರಿ ದೇವಾಲಯವಾದ ಚಾಮರಾಜನಗರ ತಾಲೂಕಿನ ಕುದೇರು ಗ್ರಾಮದಲ್ಲಿ ಹಬ್ಬದ ಸಡಗರ ಜೋರಾಗಿದ್ದು, ಅದ್ಧೂರಿ ಗೌರಿ ಹಬ್ಬ ಆಚರಣೆ ಮಾಡಲಾಗುತ್ತಿದೆ.
ಪ್ರತೀವರ್ಷ ಬಾಗಿನ ಅರ್ಪಿಸಿ ಹಬ್ಬ ಆಚರಿಸುತ್ತಿದ್ದ ಗೃಹಿಣಿಯರಿಗೆ ಕೊರೊನಾ ಸತತ ಎರಡು ನಿರಾಸೆ ಉಂಟು ಮಾಡಿತ್ತು. ಆದರೆ ಈ ಬಾರಿ, ಕೊರೊನಾ ಆತಂಕ ಇಲ್ಲದಿರುವುದರಿಂದ ಹಬ್ಬದ ಆಚರಣೆ ವಿಜೃಂಭಣೆಯಿಂದ ಮಾಡಲಾಗುತ್ತಿದೆ. ಗೌರಮ್ಮನಿಗೆಂದೇ ಇರುವಂಥ ಇನ್ನೊಂದು ದೇಗುಲ ರಾಷ್ಟ್ರದಲ್ಲೂ ಕಾಣಸಿಗುವುದಿಲ್ಲ ಎಂಬ ಮಾತಿದೆ. 1913 ರಲ್ಲಿ ಗೌರಿ ದೇವಸ್ಥಾನ ನಿರ್ಮಾಣ ಮಾಡಲಾಗಿದ್ದು, ಸುಮಾರು 24 ವರ್ಷಗಳ ಹಿಂದೆ ನಾಡಹೆಂಚಿನ ಮನೆಯಂತಿದ್ದ ಗೌರಿ ದೇವಸ್ಥಾನವನ್ನು ಹೊಸದಾಗಿ ನಿರ್ಮಾಣ ಮಾಡಲಾಗಿದೆ.
ಇಲ್ಲಿ ಯಾರ ಮನೆಯಲ್ಲೂ ಗೌರಮ್ಮನ ಪ್ರತಿಷ್ಠಾಪಿಸದೆ, ಪೂಜೆ ವ್ರತ ಮಾಡದೆ ಗ್ರಾಮಕ್ಕೊಂದು ಗೌರಮ್ಮನನ್ನು ಸ್ಥಾಪಿಸಿ, ಪೂಜಿಸಿ ಹಬ್ಬ ಆಚರಣೆ ಮಾಡುವುದು ವಾಡಿಕೆ. ಈ ಆಚರಣೆ ಇಲ್ಲಿ ಶತ ಶತಮಾನಗಳಿಂದ ಇದೆ. 'ಸ್ವರ್ಣ ಗೌರಿ' ದೇವಾಲಯ ನಿರ್ಮಾಣ ಮಾಡಿ ಇಡೀ ಗ್ರಾಮವೇ ಒಟ್ಟಿಗೆ ಸೇರಿ ಗೌರಿ ಪೂಜೆ ಮಾಡುವುದು ವಿಶೇಷ.
ಗಣೇಶ ಚತುರ್ಥಿ 2022 ರಾಶಿ ಭವಿಷ್ಯ: ಈ ರಾಶಿಗಳವರಿಗೆ ಇರುತ್ತೆ ಗಣಪತಿ ಆಶೀರ್ವಾದ..!!
ಎಲ್ಲಡೆ ಒಂದು ದಿನ ಮಾತ್ರ ಗೌರಿ ಹಬ್ಬ ನಡೆದರೆ ಇಲ್ಲಿ 12 ದಿನಗಳ ಕಾಲ ಗೌರಿಯನ್ನು ಕೂರಿಸಿ, ಪ್ರತಿನಿತ್ಯ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳು ಬಾಗಿನ ಅರ್ಪಿಸುತ್ತಾರೆ. ಮಕ್ಕಳಿಲ್ಲದವರು ಸಂತಾನ ಭಾಗ್ಯಕ್ಕಾಗಿ ಬಾಗಿನ ಅರ್ಪಿಸುತ್ತಾರೆ. ಯುವಕ/ಯುವತಿಯರು ಕಂಕಣ ಭಾಗ್ಯಕ್ಕಾಗಿ ಸೇವೆ ಅರ್ಪಿಸುತ್ತಾರೆ. ಈ ಸಂದರ್ಭದಲ್ಲಿ 33 ಹಳ್ಳಿಯ ಭಕ್ತರು ಭಾಗವಹಿಸುತ್ತಾರೆ ಎನ್ನುತ್ತಾರೆ ಸ್ವರ್ಣ ಗೌರಿ ದೇವಸ್ಥಾನದ ದೇವಸ್ಥಾನದ ಅರ್ಚಕರು.
ಮರಳಿನ ಗೌರಿಯನ್ನು ಪ್ರತಿಷ್ಠಾಪನೆ
ನಾಡಿನ ಎಲ್ಲೆಡೆ ಹಬ್ಬದ ದಿನ ಗೌರಮ್ಮನ ವಿಗ್ರಹ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಗುತ್ತದೆ. ಆದರೆ, ಇಲ್ಲಿ ಹಬ್ಬದ ಹಿಂದಿನ ದಿನವೇ ದೊಡ್ಡ ಕೆರೆಯ ತಡದಲ್ಲಿ ಮರಳಿನ ಗೌರಿ ವಿಗ್ರಹವನ್ನು ಸಿದ್ಧಪಡಿಸಲಾಗುತ್ತದೆ. ಗೌರಿ ಹಬ್ಬದಂದು ವಿಶೇಷ ಪೂಜೆಯೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತಂದು ಮರಳಿನ ಗೌರಿಯನ್ನು ಪ್ರತಿಷ್ಠಾಪಿಸಲಾಗುತ್ತದೆ.
12ನೇ ದಿನದವರೆಗೆ ವಿಶೇಷ ಪೂಜೆ
ದೇವಾಲಯದಲ್ಲಿ ಐದನೇ ದಿನಕ್ಕೆ ಮರಳಿನ ಗೌರಿಯನ್ನು ಬದಲಿಸಿ ಕಡಲೆ ಹಿಟ್ಟಿನ ಗೌರಿಯನ್ನು ಪ್ರತಿಷ್ಠಾಪಿಸಿ ಅದಕ್ಕೆ ಚಿನ್ನದ ಕವಚ, ಆಭರಣಗಳನ್ನು ತೊಡಿಸಲಾಗುತ್ತದೆ. ಅಂದಿನಿಂದ ಹನ್ನೆರಡನೆ ದಿನದವರೆಗೂ ಆ ವಿಗ್ರಹವನ್ನು ಸ್ವರ್ಣ ಗೌರಿ ಎಂದು ವಿಶಿಷ್ಟವಾಗಿ ಪೂಜಿಸುವ ವಾಡಿಕೆ ಇದೆ.
ಹಳೇ ಮೈಸೂರು ಪ್ರಾಂತ್ಯದಿಂದ ಭಕ್ತರ ದಂಡು
ಇಷ್ಟಾರ್ಥ ಸ್ವರ್ಣ ಗೌರಿ ಎಂದು ಕರೆಸಿಕೊಳ್ಳುವ, ಈ ಗೌರಮ್ಮನಿಗೆ 12 ದಿನಗಳವರಗೆ ವಿಶೇಷ ಪೂಜೆ ನಡೆಯುತ್ತದೆ. ಈ ಸಂದರ್ಭದಲ್ಲಿ ಸುಮಂಗಲಿಯರು ಬಾಗಿನ ಅರ್ಪಿಸಿ ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೊಳ್ಳುತ್ತಾರೆ. ಇನ್ನು ಕುದೇರು ಗ್ರಾಮದ ಹೆಣ್ಣು ಮಕ್ಕಳು ಬೇರೆ ಊರಿಗೆ ಮದುವೆಯಾಗಿದ್ದರೆ, ತವರು ಮನೆಗೆ ತಪ್ಪದೆ ಬಂದು ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಇದು ನೂರಾರು ವರ್ಷಗಳಿಂದ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ಈ ಗೌರಿ ಹಬ್ಬಕ್ಕೆ ಹಳೇ ಮೈಸೂರು ಪ್ರಾಂತ್ಯ ಹಾಗೂ ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಸಾವಿರಾರು ಮಂದಿ ಆಗಮಿಸುತ್ತಾರೆ.
ಇಷ್ಟಾರ್ಥ ಸಿದ್ದಿಸಿದವರಿಂದ ಬಾಗಿನ
ಈ ಗೌರಮ್ಮನಿಗೆ ಹರಕೆ ಹೊತ್ತುಕೊಂಡರೆ ಎಲ್ಲಾ ಇಷ್ಟಾರ್ಥಗಳು ಸಿದ್ದಿಸುತ್ತವೆ ಎಂಬ ನಂಬಿಕೆಯಿದೆ. ಅದರಲ್ಲೂ ವಿಶೇಷವಾಗಿ ಕಂಕಣಭಾಗ್ಯ, ಸಂತಾನಭಾಗ್ಯ , ವಿವಾಹಿತರಿಗೆ ಮುತ್ತೈದೆ ಭಾಗ್ಯ ಲಭಿಸುತ್ತದೆ ಎಂಬ ನಂಬಿಕೆಯಿದೆ. ಹಾಗಾಗಿ ರಾಜ್ಯದ ವಿವಿಧೆಡೆಯಿಂದ ಇಲ್ಲಿಗೆ ಭಕ್ತರ ದಂಡೇ ಹರಿದು ಬರುತ್ತದೆ. ಇಷ್ಟಾರ್ಥ ಸಿದ್ದಿಸಿದವರು ಗೌರಮ್ಮಳಿಗೆ ಬಾಗಿನ ಅರ್ಪಿಸಿ ತಮ್ಮ ಹರಕೆ ತೀರಿಸುತ್ತಾರೆ. ಮತ್ತೆ ಕೆಲವರು ಇದೇ ಸಂದರ್ಭದಲ್ಲಿ ಹರಕೆಗಳನ್ನು ಹೊತ್ತುಕೊಳ್ಳುತ್ತಾರೆ.
ಕುದೇರು ಗ್ರಾಮದಲ್ಲಿ ಜಾತಿ ಮತಗಳನ್ನು ಹೊರತು ಪಡಿಸಿ ಎಲ್ಲರೂ ಒಂದೇ ಭಾವನೆಯಿಂದ ಹಬ್ಬದಲ್ಲಿ ಭಾಗವಹಿಸಿ ಸಂತೋಷ ಹಂಚಿಕೊಳ್ಳುವುದು ಇಲ್ಲಿನ ವಿಶೇಷವಾಗಿದೆಯಲ್ಲದೆ, ಎಲ್ಲರಿಗೂ ಒಳ್ಳೆಯದಾಗಲಿ ಎಂಬ ಪ್ರಾರ್ಥನೆಯೂ ನಡೆಯುತ್ತದೆ.