ಬಂಡೀಪುರ ಸಫಾರಿಗಾಗಿ ಬಂತು ಪರಿಸರ ಸ್ನೇಹಿ ಬಸ್!
ಚಾಮರಾಜನಗರ, ಜನವರಿ 5: ಡೀಸೆಲ್, ಪೆಟ್ರೋಲ್ ಬಳಕೆಯ ವಾಹನಗಳು ಉಗುಳುವ ಹೊಗೆಯಿಂದ ಪರಸರ ಕಲುಷಿತಗೊಳ್ಳುತ್ತಿರುವ ಹಿನ್ನಲೆಯಲ್ಲಿ ಪರಿಸರಸ್ನೇಹಿ ಬಸ್ ಬಳಕೆಗೆ ಫೆಬ್ರವರಿ 21, 2015ರಂದು ಸಂಸತ್ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದು ನೆನಪಿರಬಹುದು.
ಇದೀಗ ಅಂತಹದ್ದೇ ವಾಹನಗಳನ್ನು ಬಂಡೀಪುರದಲ್ಲಿ ಸಫಾರಿಗೆ ಪ್ರವಾಸಿಗರನ್ನು ಕರೆದೊಯ್ಯಲು ಜಂಗಲ್ ರೆಸಾರ್ಟ್ಸ್ ಹಾಗೂ ಲಾಡ್ಜಿಂಗ್ಸ್ ಖರೀದಿಸಿದ್ದು, ಇನ್ನು ಮುಂದೆ ಪ್ರವಾಸಿಗರು ಅದರಲ್ಲಿಯೇ ಸಫಾರಿಗೆ ತೆರಳಬಹುದಾಗಿದೆ. ಈಗಾಗಲೇ ಖರೀದಿ ಮಾಡಿರುವ ವಾಹನವನ್ನು ಪ್ರಾಯೋಗಿಕವಾಗಿ ಬಳಸಲಾಗುತ್ತಿದೆ.[ವೀರಪ್ಪನ್ ಜೊತೆ ಸಫಾರಿ ಚಾಲಕ ಮುಖಾಮುಖಿಯಾದ ರೋಚಕ ಕಥೆ]
ಅದು ಕಾರ್ಯನಿರ್ವಹಿಸುವ ರೀತಿ ಮತ್ತು ಸಾಧಕ-ಬಾಧಕಗಳನ್ನು ಗಮನಿಸಿ, ಸಫಾರಿಗೆ ಅದು ಉಪಯುಕ್ತವಾಗುತ್ತದೆ ಎಂಬುದು ಕಂಡು ಬಂದರೆ ಮುಂದಿನ ದಿನಗಳಲ್ಲಿ ಇಂತಹ ಇನ್ನಷ್ಟು ಬಸ್ ಗಳನ್ನು ಖರೀದಿಸುವ ಚಿಂತನೆಯಿದೆ. ಸದ್ಯ ಖರೀದಿಸಿರುವ ಬಸ್ ಬಗ್ಗೆ ಹೇಳುವುದಾದರೆ ಈ ಬಸ್ ಅನ್ನು ಮಹಾರಾಷ್ಟ್ರ ಮೂಲದ ರೆವೊಲೊ ಕಂಪನಿಯು ಅಭಿವೃದ್ಧಿಪಡಿಸಿದೆ.
ಇದಕ್ಕಾಗಿಯೇ ಚಾರ್ಜರ್ ಮಾಡುವ ಪ್ರತ್ಯೇಕ ವ್ಯವಸ್ಥೆಯಿದ್ದು, ಬಸ್ ನಲ್ಲಿ 4 ಶಕ್ತಿಶಾಲಿ ಬ್ಯಾಟರಿಗಳನ್ನು ಅಳವಡಿಸಲಾಗಿದೆ. ನಾಲ್ಕು ಗಂಟೆಗಳ ಕಾಲ ವಿದ್ಯುತ್ ನಿಂದ ಚಾರ್ಜ್ ಮಾಡಿದರೆ 120 ಕಿಲೋಮೀಟರ್ ಸಂಚಾರ ಮಾಡಲಿದೆ. ಈಗಾಗಲೇ ಪ್ರಾಯೋಗಿಕವಾಗಿ ಸಂಚಾರವನ್ನು ಅರಣ್ಯದೊಳಗೆ ನಡೆಸಿದ್ದು, ಅದು ಯಶಸ್ವಿಯಾಗಿದೆ.
ಜಂಗಲ್ ರೆಸಾರ್ಟ್ಸ್ ಹಾಗೂ ಲಾಡ್ಜಿಂಗ್ಸ್ ಮೂಲಗಳ ಪ್ರಕಾರ ಒಮ್ಮೆ ಸಫಾರಿ ಅವಧಿಯಲ್ಲಿ ಶೇ 40ರಷ್ಟು ಬ್ಯಾಟರಿ ಬಳಕೆ ಮಾಡಿಕೊಂಡಿದೆ. ಅರಣ್ಯ ಪ್ರದೇಶದಲ್ಲಿ ದಿನ ಬಳಕೆಗೆ ಈಗಿರುವ 20 ಪ್ರಯಾಣಿಕರು ಕೂರಬಹುದಾದ ಬಸ್ ಗಿಂತ 16 ಸೀಟಿನ ಬಸ್ ಖರೀದಿಸಲು ಜಂಗಲ್ ಲಾಡ್ಜಸ್ ಚಿಂತನೆ ನಡೆಸಿರುವುದಾಗಿ ಹೇಳಲಾಗಿದೆ.[ಬಂಡೀಪುರ ರಾಷ್ಟ್ರೀಯ ಉದ್ಯಾನದ ಆಕರ್ಷಣೆ ಹುಲಿ 'ಪ್ರಿನ್ಸ್'ಗೆ ಗಾಯ!]
ಈ ಬಸ್ ನಿಂದ ಉಪಯೋಗವಾಗಲಿದೆ ಎಂದು ಹೇಳುವುದು ಸ್ವಲ್ಪ ಕಷ್ಟವೇ. ಏಕೆಂದರೆ ಇಲ್ಲಿನ ವಾತಾವರಣಕ್ಕೆ, ಕಾಡು ರಸ್ತೆಗೆ ಹೊಂದಿಕೊಳ್ಳುತ್ತದೆಯಾ ಎಂಬುದನ್ನು ಕೂಡ ನೋಡಬೇಕಾಗುತ್ತದೆ. ಏಕೆಂದರೆ ಅರಣ್ಯ ಮಧ್ಯದಲ್ಲಿ ಕೈಕೊಟ್ಟರೆ ಎಂಬ ಭಯವೂ ಇದೆ. ಆದರೆ ಎಲ್ಲವೂ ಸರಿಹೋದರೆ ಮುಂದಿನ ದಿನಗಳಲ್ಲಿ ಬಂಡೀಪುರದಲ್ಲಿ ಎಲೆಕ್ಟ್ರಿಕಲ್ ಬಸ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುವ ದಿನಗಳು ದೂರವಿಲ್ಲ.
ಮತ್ತೊಂದು ವಿಶೇಷ ಏನೆಂದರೆ ಡಿಸೆಂಬರ್ 27ರಂದು ಊಟಿಗೆ ತೆರಳುವ ಸಂದರ್ಭದಲ್ಲಿ ಬಂಡೀಪುರಕ್ಕೆ ಆಗಮಿಸಿದ್ದ ಹರಿಯಾಣ ರಾಜ್ಯಪಾಲ ಕರ್ನಲ್ ಸಿಂಗ್ ಸೋಲಂಕಿಯವರು ಇದೇ ಬಸ್ ನಲ್ಲಿ ಪ್ರಯಾಣಿಸಿದ್ದರು.