ಚಾಮರಾಜನಗರ: ಕಾಡಾನೆ ದಾಳಿಗೆ ಕಾಲು ಮುರಿದುಕೊಂಡ ರೈತ
ಚಾಮರಾಜನಗರ, ಅಕ್ಟೋಬರ್ 13: ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿಯೋಜನೆಯ ಕಾಡಂಚಿನ ಜಮೀನಿನಲ್ಲಿ ಬೆಳೆದಿದ್ದ ಫಸಲನ್ನು ಕಾಯುತ್ತಿದ್ದ ರೈತನ ಮೇಲೆ ಕಾಡಾನೆಯೊಂದು ದಾಳಿ ಮಾಡಿದ ಘಟನೆ ನಡೆದಿದೆ. ಅದೃಷ್ಟವಶಾತ್ ಗಂಭೀರ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಕುಂದಕೆರೆ ವಲಯದ ಕಾಡಂಚಿನ ಕಡಬೂರು ಗ್ರಾಮದ ಚನ್ನಬಸಪ್ಪ ಎಂಬುವರ ಪುತ್ರ ಪ್ರಭುಸ್ವಾಮಿ ಗಾಯಗೊಂಡ ರೈತ. ತಮ್ಮ ಜಮೀನಿನಲ್ಲಿ ಬೆಳೆದಿದ್ದ ತರಕಾರಿ ಹಾಗೂ ಅರಿಶಿಣ ಬೆಳೆಯ ಕಾವಲಿಗೆ ತೆರಳಿದ್ದರು. ರಾತ್ರಿ ಸುಮಾರು 11ರ ಸಮಯದಲ್ಲಿ ಕಾಡಾನೆ ಜಮೀನಿಗೆ ನುಗ್ಗಿದೆ. ಇದನ್ನು ಜಮೀನಿನಿಂದ ಹೊರಗೆ ಓಡಿಸಲು ಮುಂದಾದಾಗ ತಿರುಗಿ ಬಿದ್ದ ಕಾಡಾನೆ ದಾಳಿ ಮಾಡಲು ಮುಂದಾಗಿದೆ.[ಬಂಡೀಪುರದಲ್ಲಿ 9 ಹುಲಿ 2 ಚಿರತೆ ಪ್ರತ್ಯಕ್ಷ!]
ಆನೆಯಿಂದ ತಪ್ಪಿಸಿಕೊಳ್ಳಲು ಓಡುವಾಗ ಕೆಳಗೆ ಬಿದ್ದು ಎಡಗಾಲಿಗೆ ತೀವ್ರ ಪೆಟ್ಟು ಬಿದ್ದಿದೆ. ಇವರ ಕೂಗಾಟದಿಂದ ಓಡಿಬಂದ ಅಕ್ಕಪಕ್ಕದ ಜಮೀನಿನ ರೈತರು ಆನೆಯನ್ನು ಹಿಮ್ಮೆಟ್ಟಿಸಿ, ಅರಣ್ಯ ಇಲಾಖೆ ಹಾಗೂ ಗ್ರಾಮಸ್ಥರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಕುಂದಕೆರೆ ವಲಯದ ಸಿಬ್ಬಂದಿ ತೆರಳಿ, ಗಾಯಾಳುವನ್ನು ಚಿಕಿತ್ಸೆಗಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.[ಬಂಡೀಪುರದ 'ರಾಜಾ ಹುಲಿ' ಬಂದರೆ ಎಂಥ ಗಾಡಿಯೂ ಸೈಡಿಗೆ]
ಆಯುಧಪೂಜೆ ಹಾಗೂ ವಿಜಯದಶಮಿ ಪ್ರಯುಕ್ತ ಹೆಚ್ಚಿನ ವೈದ್ಯಕೀಯ ಸಿಬ್ಬಂದಿ ರಜೆಯ ಮೇಲೆ ತೆರಳಿದ್ದರಿಂದ ಗಾಯಾಳುವನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಲ್ಲಿ ಪ್ರಭುಸ್ವಾಮಿಗೆ ಎಡಗಾಲಿನ ಮೂಳೆ ಮುರಿದಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕುಂದಕೆರೆ ವಲಯಾರಣ್ಯಾಧಿಕಾರಿ ಶಿವಾನಂದ ಮಗದುಂ ತಿಳಿಸಿದ್ದಾರೆ.