ಚಾಮರಾಜನಗರದಲ್ಲಿ ವಿಭಿನ್ನ ಷಷ್ಠಿ ಹಬ್ಬ: ಹುತ್ತಕ್ಕೆ ಕೋಳಿ ರಕ್ತ, ಮೊಟ್ಟೆ ಅರ್ಪಿಸುವ ಜನ
ಚಾಮರಾಜನಗರ, ನವೆಂಬರ್, 29: ಷಷ್ಠಿ ಬಂದರೆ ಸಾಕು ಹಾಲು, ಬೆಣ್ಣೆ, ಪಂಚಾಮೃತವನ್ನು ಹುತ್ತಕ್ಕೆ ಎರೆಯುವುದು ಸಾಮಾನ್ಯವಾಗಿರುತ್ತದೆ. ಆದರೆ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಹುತ್ತಕ್ಕೆ ಕೋಳಿ ರಕ್ತ, ಮೊಟ್ಟೆಯನ್ನು ಎರೆಯುವ ಪರಿಪಾಠ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.
ಚಾಮರಾಜನಗರದ ಉಪ್ಪಾರ ಬಡಾವಣೆ, ಮಲ್ಲಯ್ಯನಪುರ, ಉತ್ತುವಳ್ಳಿ, ಯಳಂದೂರು ತಾಲೂಕಿನ ಗುಂಬಳ್ಳಿ ಹೀಗೆ ಬಹುತೇಕ ಕಡೆ ಸುಬ್ರಹ್ಮಣ್ಯ ಷಷ್ಠಿ ಪ್ರಯುಕ್ತ ಹುತ್ತಕ್ಕೆ ಕೋಳಿ ಬಲಿ ಕೊಟ್ಟು ನಾಗಪ್ಪನಿಗೆ ನಮಿಸಿ, ಇಷ್ಟಾರ್ಥ ಈಡೇರಿಕೆಗೆ ಬೇಡಿಕೊಂಡಿದ್ದಾರೆ. ಹಲವು ಜನ ಕೃಷಿ ಚಟುವಟಿಕೆಯನ್ನೇ ನಂಬಿರುವುದರಿಂದ ಸರ್ಪಗಳು ತಮಗೆ ತೊಂದರೆ ಕೊಡದಿರಲೆಂದು ಕೋಳಿ ಬಲಿ ಕೊಡುತ್ತಾರೆ. ನಂತರ ಕೋಳಿ ತಲೆ, ಮೊಟ್ಟೆಯನ್ನು ಹುತ್ತದೊಳಗೆ ಹಾಕುತ್ತಾರೆ. ಈ ಹಬ್ಬವನ್ನು ಸಂಪ್ರಾದಾಯಬದ್ದವಾಗಿ ಆಚರಿಸಲಿದ್ದು, ಪೂಜೆ ಆಗುವವರೆಗೂ ಒಂದು ಹನಿ ನೀರನ್ನು ಕುಡಿಯುವಂತಿಲ್ಲ ಎಂದು ನಗರದ ಉಪ್ಪಾರ ಯುವಕರ ಸಂಘದ ಜಯಕುಮಾರ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಹೈಕೋರ್ಟ್ ಆದೇಶದಿಂದ ವಿವಾದಕ್ಕೆ ತೆರೆ: ಶಾಂತಿಯುತವಾಗಿ ನಡೆದ ಪದ್ಮನಾಭ ತೀರ್ಥರ ಮಧ್ಯಾರಾಧನೆ
ಕೋಳಿ ರಕ್ತ ಎರೆಯಲು ಕಾರಣ ಏನು?
ಈ ರೀತಿ ಕೋಳಿ ಬಲಿ ಕೊಟ್ಟರೇ ಮಾತ್ರ ಸರ್ಪ ಸಂಬಂಧಿತ ತೊಂದರೆ ನಿವಾರಣೆ ಆಗುತ್ತದೆ. ಜೊತೆಗೆ ತಮ್ಮ ಇಷ್ಟಾರ್ಥವೂ ಒಂದು ವರ್ಷದೊಳಗೆ ಈಡೇರಲಿದೆ. ಇಷ್ಟಾರ್ಥ ಈಡೇರಿದ ಬಳಿಕ ನಾಗಪ್ಪನಿಗೆ ಕೋಳಿ ಬಲಿ ಕೊಟ್ಟು ಹರಕೆ ತೀರಿಸುತ್ತೇವೆ ಎಂಬುದು ಇಲ್ಲಿನ ಭಕ್ತರ ನಂಬಿಕೆ ಆಗಿದೆ. ಒಟ್ಟಿನಲ್ಲಿ ಹುತ್ತಕ್ಕೆ ಕೋಳಿ ಬಲಿ ಕೊಡುವುದು ವಿಲಕ್ಷಣವಾಗಿ ಕಂಡರೂ, ಭಯ-ಭಕ್ತಿ ಹಾಗೂ ನಂಬಿಕೆಯಿಂದ ಗ್ರಾಮಸ್ಥರು ಷಷ್ಠಿಯನ್ನು ಆಚರಿಸಿಕೊಂಡು ಬರುತ್ತಿದ್ದಾರೆ.
ಬತ್ತನ ಹಳ್ಳಿಯಲ್ಲಿ ಹಾವಿಗೆ ರಕ್ತಾಭಿಷೇಕ
ಸಾಮಾನ್ಯವಾಗಿ ನಾಗರ ಪಂಚಮಿಯಂದು ಹಾವಿಗೆ ಹಾಲು ಎರೆಯುವುದನ್ನು ನೋಡಿದ್ದೇವೆ. ಆದರೆ ಕೂಡ್ಲಿಗಿ ತಾಲೂಕಿನ ಬತ್ತನ ಹಳ್ಳಿಯಲ್ಲಿ ಮಾತ್ರ ಹಾವಿಗೆ ರಕ್ತಾಭಿಷೇಕ ಮಾಡುತ್ತಾರೆ. ಶ್ರಾವಣ ಮಾಸದ ಎರಡನೇ ಭಾನುವಾರ ನಾಗರ ಹುತ್ತಕ್ಕೆ ಪೂಜೆ ಮಾಡಿ ರಕ್ತಾಭಿಷೇಕ ಮಾಡುವ ವಿಶೇಷ ಆಚರಣೆಯನ್ನು ಇಲ್ಲಿಯ ಒಂದು ಸಮುದಾಯ ಮಾಡಿಕೊಂಡು ಬಂದಿದೆ. ಕೊರಚ ಮತ್ತು ಕೊರಮ ಸಮುದಾಯದ ಜನರು ನಾಗರ ಪಂಚಮಿಯ ದಿನದಂದು ಸಾಮಾನ್ಯವಾಗಿ ಎಲ್ಲರಂತೆ ಪೂಜೆ ಮಾಡುತ್ತಾರೆ. ಆದರೆ ಶ್ರಾವಣ ಮಾಸದ ಎರಡನೇ ಭಾನುವಾರ ಮಾತ್ರ ಕೋಳಿಯ ಕತ್ತನ್ನು ಕೊಯ್ದು, ಕೋಳಿಯ ರಕ್ತವನ್ನು ಹುತ್ತದ ಮೇಲೆ ಹಾಕುವ ಪದ್ಧತಿಯನ್ನು ಹಿಂದಿನಿಂದಲೂ ನಡೆಸಿಕೊಂಡು ಬಂದಿದ್ದಾರೆ.
ಅಂಜನಾದ್ರಿ ಹುಂಡಿಯಲ್ಲಿ ಒಂದೂವರೆ ತಿಂಗಳಿಗೆ 2,27,508 ಲಕ್ಷ ರೂಪಾಯಿ ಸಂಗ್ರಹ
ಹಾಗೆಯೇ ಬುಡಕಟ್ಟು ಸಮುದಾಯಕ್ಕೆ ಸೇರಿದ ಜನರು ಈ ಹಿಂದೆ ಕಾಡಿನಲ್ಲಿ ವಾಸ ಮಾಡುತ್ತಿದ್ದರು. ಈಚಲು ಗಿಡ, ಹುಲ್ಲುಗಳಿಂದ ಹಗ್ಗ ಸೇರಿದಂತೆ ಮತ್ತಿತರ ವಸ್ತುಗಳನ್ನು ತಯಾರು ಮಾಡಿ ಅದನ್ನು ಊರುಗಳಿಗೆ ತಂದು ಮಾರಾಟ ಮಾಡುತ್ತಿದ್ದರು. ಆಗ ಹಾವುಗಳು ಹೆಚ್ಚಾಗಿ ಕಚ್ಚಿ ಜನರು ಸಾವನ್ನಪ್ಪುತ್ತಿದ್ದರಂತೆ. ಆದ್ದರಿಂದ ಅಂದಿನಿಂದ ನಾಗರ ಪಂಚಮಿ ಮುಗಿದ ಬಳಿಕ ಶ್ರಾವಣ ಮಾಸದ ಎರಡನೇ ಭಾನುವಾರ ನಾಗರ ಹುತ್ತಕ್ಕೆ ಕೋಳಿಯ ರಕ್ತದಿಂದ ಅಭಿಷೇಕ ಮಾಡಲಾಗುತ್ತದೆ. ಆಗ ತೃಪ್ತನಾಗುವ ನಾಗದೇವರು ಸಮುದಾಯಕ್ಕೆ ಯಾವುದೇ ತೊಂದರೆ ಮಾಡುವುದಿಲ್ಲ ಎನ್ನುವ ನಂಬಿಕೆ ಈಗಲೂ ಇದೆ.