ಸುಳ್ವಾಡಿ ಪ್ರಕರಣದ ಆರೋಪಿಗಳ ವಿಚಾರಣೆ ಆಗಸ್ಟ್ 5ಕ್ಕೆ ಮುಂದೂಡಿಕೆ
ಚಾಮರಾಜನಗರ, ಜುಲೈ 11: ಹನೂರು ತಾಲ್ಲೂಕಿನ ಸುಳ್ವಾಡಿ ಮಾರಮ್ಮ ದೇವಾಲಯದಲ್ಲಿ ನಡೆದ ವಿಷ ಪ್ರಸಾದ ದುರಂತ ಪ್ರಕರಣದ ವಿಚಾರಣೆಯನ್ನು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆಗಸ್ಟ್ 5ಕ್ಕೆ ಮುಂದೂಡಿದೆ.
ನ್ಯಾಯಾಂಗ ಬಂಧನದ ಅವಧಿ ಮುಕ್ತಾಯವಾಗಿದ್ದರಿಂದ ಮೈಸೂರಿನ ಕಾರಾಗೃಹದಲ್ಲಿರುವ ಆರೋಪಿಗಳಾದ ಇಮ್ಮಡಿ ಮಹದೇವಸ್ವಾಮಿ, ಮಾದೇಶ, ಅಂಬಿಕಾ ಮತ್ತು ದೊಡ್ಡಯ್ಯ ಅವರನ್ನು ಪೊಲೀಸರು ಬುಧವಾರ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಬಿ. ಬಸವರಾಜ ಅವರ ಮುಂದೆ ಹಾಜರುಪಡಿಸಿದರು.
ವಿಚಾರಣೆ ಆರಂಭವಾಗುತ್ತಿದ್ದಂತೆ ನ್ಯಾಯಾಧೀಶರು, ನಿಮ್ಮ ವಕೀಲರು ಬಂದಿದ್ದಾರೆಯೇ ಎಂದು ಮೊದಲ ಆರೋಪಿ ಮಹಾದೇವಸ್ವಾಮಿ ಅವರನ್ನು ಕೇಳಿದರು. ಇದಕ್ಕೆ ಅವರು, ಹಿಂದಿನ ವಕೀಲರು ಬಂದಿಲ್ಲ. ಹೊಸ ವಕೀಲರು ಬಂದಿದ್ದಾರೆ ಎಂದರು. ಮಹಾದೇವಸ್ವಾಮಿ ಅವರ ಪರವಾಗಿ ತಾವು ವಕಾಲತ್ತು ವಹಿಸುವುದಾಗಿ ರಾಮನಗರದ ವಕೀಲ ಪಿ.ಎಂ.ವಿಶ್ವನಾಥ್ ನ್ಯಾಯಾಧೀಶರಿಗೆ ತಿಳಿಸಿ, ವಾದ ಮಾಡಲು ಸಮಯಾವಕಾಶವನ್ನು ಕೇಳಿದರು.

ಉಳಿದ ಮೂವರು ಆರೋಪಿಗಳ ಪರ ವಕೀಲರು ಗೈರಾಗಿದ್ದು, ಈ ಬಗ್ಗೆ ನ್ಯಾಯಾಧೀಶರು ಪ್ರಶ್ನಿಸಿದಾಗ ಆರೋಗ್ಯ ಸರಿ ಇಲ್ಲ ಎಂದು ಆರೋಪಿಗಳು ಉತ್ತರಿಸಿದರು. ನಂತರ ನ್ಯಾಯಾಧೀಶರು ವಿಚಾರಣೆಯನ್ನು ಆಗಸ್ಟ್ 5ಕ್ಕೆ ಮುಂದೂಡಿ ಆದೇಶ ನೀಡಿದರು.












Click it and Unblock the Notifications