Sunil Bose: ಸಿಎಂ ಸಿದ್ದರಾಮಯ್ಯ ತವರು ಮತ್ತೆ 'ಕೈ' ವಶ: ಸುನಿಲ್ ಬೋಸ್ಗೆ ಭರ್ಜರಿ ಜಯ
ಚಾಮರಾಜನಗರ, ಜೂನ್. 4: ತೀವ್ರ ಜಿದ್ದಾಜಿದ್ದಿ, ಕುತೂಹಲ ಕೆರಳಿಸಿದ್ದ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ವಿಜಯ ಪತಾಕೆ ಹಾರಿಸಿದ್ದಾರೆ. ಚಾಮರಾಜನಗರದ ಬೇಡರಪುರ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಮತ ಎಣಿಕೆಯಲ್ಲಿ ಎದುರಾಳಿ ಬಿಜೆಪಿ ಅಭ್ಯರ್ಥಿ ವಿರುದ್ಧ ಸುನೀಲ್ ಬೋಸ್ ಗೆಲುವಿನ ನಗೆ ಬೀರಿ ಸಂಸತ್ ಪ್ರವೇಶ ಮಾಡಿದ್ದಾರೆ.
ಈ ಹಿಂದೆ 1991 ರಲ್ಲಿ ಡಾ.ಎಚ್. ಸಿ. ಮಹಾದೇವಪ್ಪ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿ.ಶ್ರೀನಿವಾಸಪ್ರಸಾದ್ ವಿರುದ್ಧ ಪರಾಭವಗೊಂಡಿದ್ದರು. ಈಗ, ಅದೇ ಕ್ಷೇತ್ರದಲ್ಲಿ ಪುತ್ರ ಸುನಿಲ್ ಬೋಸ್ ವಿಜಯ ಪತಾಕೆ ಹಾರಿಸಿದ್ದು ಮೊದಲ ಚುನಾವಣೆಯಲ್ಲಿ ಗೆದ್ದು ಸಂಸತ್ಗೆ ಪ್ರವೇಶಿಸಿದ್ದಾರೆ.

ಮುಖ್ಯಮಂತ್ರಿಗೆ ಪ್ರತಿಷ್ಠೆಯಾಗಿದ್ದ ಕ್ಷೇತ್ರ ಚಾಮರಾಜನಗರ
ಸಿಎಂ ಸಿದ್ದರಾಮಯ್ಯ ಅವರ ವರುಣಾ ವಿಧಾನಸಭಾ ಕ್ಷೇತ್ರ ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಒಳಪಡಲಿದ್ದು ತವರಿನಲ್ಲಿ ಕಾಂಗ್ರೆಸ್ ಗೆಲ್ಲಿಸಬೇಕಾದ ಪ್ರತಿಷ್ಠೆ ಎದುರಾಗಿತ್ತು. 2019 ರಲ್ಲಿ ವಿ.ಶ್ರೀನಿವಾಸಪ್ರಸಾದ್ ಗೆಲ್ಲುವ ಮೂಲಕ ಮೊದಲ ಬಾರಿ ಕಮಲ ಅರಳಿಸಿದ್ದರು. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಚಾಮರಾಜನಗರವನ್ನು ಮತ್ತೇ ಕೈ ವಶ ಮಾಡಿಕೊಳ್ಳುವಲ್ಲಿ ಸಿದ್ದರಾಮಯ್ಯ ಯಶ ಕಂಡಿದ್ದು ತವರಿನಲ್ಲಿ ಕೈ ಗೆ ಜನರು ಜೈ ಎಂದಿದ್ದಾರೆ.
ಕಡಿಮೆ ಸಮಯದಲ್ಲಿ ವ್ಯಾಪಕ ಪ್ರಚಾರ, ಶಾಸಕರು ಜವಾಬ್ದಾರಿ ತೆಗೆದುಕೊಂಡು ಚುನಾವಣೆ ಪ್ರಕ್ರಿಯೆ ನಡೆಸಿದ್ದು, ಗ್ಯಾರಂಟಿ ಯೋಜನೆಗಳು ಕೈ ಹಿಡಿದದ್ದು ಸುನಿಲ್ ಬೋಸ್ ಗೆ ಗೆಲುವು ತಂದುಕೊಟ್ಟಿದೆ ಎನ್ನಬಹುದಾಗಿದೆ. ಸುನಿಲ್ ಬೋಸ್ ಚುನಾವಣಾ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಮೊದಲ ಚುನಾವಣೆಯಲ್ಲೇ ಗೆಲುವಿನ ನಗೆ ಬೀರಿದ್ದು ಸಚಿವ ಡಾ.ಎಚ್.ಸಿ.ಮಹಾದೇವಪ್ಪ ತಮ್ಮ ಮಗನನ್ನು ಗೆಲ್ಲಿಸಿಕೊಂಡು ಬರುವಲ್ಲಿ ಯಶ ಕಂಡಿದ್ದಾರೆ.












Click it and Unblock the Notifications