ಬಿಜೆಪಿಯವರೇ ನನ್ನನ್ನು ಸೋಲಿಸಿದ್ದು, ಕಾಂಗ್ರೆಸ್ನವರಲ್ಲ: ವಿ.ಸೋಮಣ್ಣ ಸ್ವಪಕ್ಷದ ವಿರುದ್ಧವೇ ಹೀಗೆ ಗುಡುಗಿದ್ದೇಕೆ?
ಚಾಮರಾಜನಗರ, ನವೆಂಬರ್, 23: ಕಾಂಗ್ರೆಸ್ನವರು ನನ್ನನ್ನು ಸೋಲಿಸಲಿಲ್ಲ, ಬಿಜೆಪಿ ಅವರೇ ನನ್ನನ್ನು ಸೋಲಿಸಿದರು ಎಂದು ಮಾಜಿ ಸಚಿವ ವಿ.ಸೋಮಣ್ಣ ಅವರು ಚಾಮರಾಜನಗರದಲ್ಲಿ ಬೇಸರ ಹೊರಹಾಕಿದರು.
ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮದಲ್ಲಿ ಗ್ರಾನೈಟ್ ಕಂಪನಿ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ನನ್ನನ್ನು ಕಾಂಗ್ರೆಸ್ನವರು ಸೋಲಿಸಲಿಲ್ಲ, ಬಿಜೆಪಿ ಅವರೇ ನನ್ನನ್ನು ಸೋಲಿಸಿದ್ದು. ನನ್ನ ಸಮುದಾಯದವರೇ ನನ್ನನ್ನು ಸೋಲಿಸಿದ್ದು, ಅವರಿಗೆ ಒಳ್ಳೆಯದಾಗಲಿ, ನಾನು ಮತ್ತಷ್ಟು ಶಕ್ತಿವಂತನಾಗಿದ್ದೇನೆ ಎಂದು ಯಾರಾ ಹೆಸರು ಹೇಳದೇ ಕಿಡಿಕಾರಿದರು.

ನಾನು ಉಸ್ತುವಾರಿ ಸಚಿವರಾಗಿದ್ದ ವೇಳೆ ಗಣಿ ಮಾಲೀಕರು ನನ್ನ ಮನೆಗೆ ಮೂಟೆಗಟ್ಟಲೇ ಹಣ ತಂದಿದ್ದರು. ನನಗೇನು ನಿಮ್ಮ ದುಡ್ಡು ಬೇಡ, ನೀವು ಗಣಿಗಾರಿಕೆ ನಡೆಸುವ ಊರಿನ ಶಾಲೆಗಳಿಗೆ, ರಸ್ತೆಗಳಿಗೆ ಈ ಹಣ ವಿನಿಯೋಗಿಸಿ ಎಂದು ವಾಪಾಸ್ ಕಳುಹಿಸಿದ್ದೆ ಎಂದರು. ಇನ್ನು ಸಿಕ್ಕ ಕಡಿಮೆ ಅವಕಾಶದಲ್ಲಿ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದೇನೆ. ಜೀವನದಲ್ಲಿ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಬೇಕು, ಕೆರೆಗೆ ನೀರು ತುಂಬುವ ಯೋಜನೆ ಮಾಡುವಾಗ ನನ್ನನ್ನು ಹುಚ್ಚ ಎಂದರು. ಆದರೆ ಈಗ ನನ್ನ ಕೆಲಸ ನೆನಪಾಗುತ್ತದೆ ಎಂದರು.
ವಿಜಯೇಂದ್ರರ ರಾಜ್ಯಾಧ್ಯಕ್ಷ ಪಟ್ಟದ ಬಗ್ಗೆ ಲಿಂಬಾವಳಿ ಹೇಳಿದ್ದೇನು?
ಬಿಜೆಪಿ ಹೈಕಮಾಂಡ್ ಇತ್ತೀಚೆಗಷ್ಟೇ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿದ್ದು, ಈ ವಿಚಾರಕ್ಕೆ ಇದೀಗ ಬೆಳಗಾವಿಯಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿ ಪರೋಕ್ಷ ಅಸಮಾಧಾನ ಹೊರಹಾಕಿದ್ದಾರೆ. ಹಾಗಾದರೆ ಅವರು ಏನು ಹೇಳಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಬಿ.ವೈ.ವಿಜಯೇಂದ್ರ ಅವರನ್ನು ನಾವು ಅಳೆದು ತೂಗಿ ಅಧ್ಯಕ್ಷರನ್ನಾಗಿ ಮಾಡಿಲ್ಲ. ನಮ್ಮಲ್ಲಿ ಆಯ್ಕೆ ಆಗಿರುವ 66 ಜನರಲ್ಲಿ ಅನೇಕರು ಸ್ವಂತ ಶಕ್ತಿ ಮೇಲೆ ಶಾಸಕರಾಗಿದ್ದಾರೆ. ಕೆಲವರು ಹೊಂದಾಣಿಕೆ ಮೇಲೆ ಶಾಸಕರಾಗಿ ಆಯ್ಕೆ ಆಗಿದ್ದಾರೆ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ. ಇನ್ನು ಹೊಂದಾಣಿಕೆ ಮಾಡಿಕೊಳ್ಳುವವರಿಗೆ ಕಾಲ ಇದು ಎಂದು ಹೇಳುವ ಮೂಲಕ ಹೈಕಮಾಂಡ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಅಧ್ಯಕ್ಷರು, ಪ್ರತಿಪಕ್ಷ ನಾಯಕರು ವಿರೋಧ ಪಕ್ಷಗಳ ಜೊತೆಗೆ ಹೊಂದಾಣಿಕೆ ಇದೆ. ಅಂತಹ ವ್ಯವಸ್ಥೆ ನಮ್ಮ ಪಕ್ಷದಲ್ಲಿ ಬಂದಿದೆ. ಈ ಹೊಂದಾಣಿಕೆಯಿಂದ ಲೋಕಸಭೆ ಚುನಾವಣೆಯಲ್ಲಿ ಜಾಸ್ತಿ ಸ್ಥಾನ ಗೆಲ್ಲಿಸುತ್ತಿರಬಹುದು ಇವರು. ಅದಕ್ಕಾಗಿ ವಿಜಯೇಂದ್ರ ಹಾಗೂ ಆರ್.ಅಶೋಕ್ ಅವರನ್ನು ನೇಮಕ ಮಾಡಿದ್ದಾರೆ ಎಂದು ಸ್ವಪಕ್ಷದ ವಿರುದ್ಧವೇ ಗುಡುಗಿದರು.
ತೀವ್ರ ಚರ್ಚೆಗೆ ಕಾರಣವಾಗಿರುವ ಜಾತಿ-ಗಣತಿ ಮೂಲ ಪ್ರತಿಯೇ ನಾಪತ್ತೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಮೂಲ ಪ್ರತಿ ಕಳ್ಳತನ ಆಗಿದ್ದರೆ ಹುಡಕಲಿ, ಎಲ್ಲಿದೆ ಎಂದು ಹುಡಬೇಕು. ಸಮೀಕ್ಷೆಯ ಹಾರ್ಡ್ ಕಾಪಿ ಕಂಪ್ಯೂಟರ್ನಲ್ಲಿ ಇರುತ್ತದೆ, ಅದನ್ನು ಕಳ್ಳತನ ಮಾಡಲು ಆಗಲ್ವಲ್ಲ. ಕಂಪ್ಯೂಟರ್ನಲ್ಲಿ ಮಾಹಿತಿಯ ಸಂಗ್ರಹ ಇದ್ದೇ ಇರುತ್ತದೆ ಎಂದರು.
ವರದಿ ಜಾರಿಯಾಗಬಾರದು ಎಂದು ಹೇಳುವ ಸಮಾಜಗಳು ಸ್ವಲ್ಪ ಸಮಾಜಿಕವಾಗಿ ಯೋಚಿಸಬೇಕು. ಯಾವ ಜಾತಿಯವರು ಎಷ್ಟು ಜನ ಇದ್ದಾರೆಂದು ತಿಳಿಯಲು ಕಾಂತರಾಜ್ ಸಮಿತಿ ರಚಿಸಲಾಗಿತ್ತು. ಸಂವಿಧಾನದ ಪ್ರಕಾರ ಜಾತಿ ಗಣತಿ ಮಾಡಲು ಬರಲ್ಲ. ಸಾಮಾಜಿಕ, ಆರ್ಥಿಕ ಈ ಎಲ್ಲ ವಸ್ತುಸ್ಥಿತಿ ಇಟ್ಟುಕೊಂಡು ಕಾಂತರಾಜ ಸಮಿತಿ ವರದಿ ಸಿದ್ಧಪಡಿಸಿದೆ. ಯಾವ ಜಾತಿ ಹಿಂದುಳಿದಿವೆ ಎಂಬುದು ಇದು ಜಾರಿಯಾದ್ರೆ ತಿಳಿಯುತ್ತದೆ. ಆದರೆ ಕೆಲವರಿಗೆ ಅಸ್ತಿತ್ವದ ಪ್ರಶ್ನೆ ಉದ್ಭವವಾಗುತ್ತಿದೆ, ಆ ರೀತಿ ಹೆದರುವ ಅವಶ್ಯಕತೆ ಏನಿದೆ? ಎಂದು ಪ್ರಶ್ನಿಸಿದರು.
ವರದಿ ವಿರೋಧಿಸಿ ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿ ಹಲವರು ಸಹಿ ಮಾಡಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಯಾರೂ ಹೆದರುವ ಅವಶ್ಯಕತೆ ಇಲ್ಲ, ರಾಜ್ಯದ ಜನರಿಗೆ ವಸ್ತುಸ್ಥಿತಿ ತಿಳಿಯಲಿ. ಇದೇ ಸಿದ್ದರಾಮಯ್ಯ ಅವರು ಈ ಹಿಂದೆ ಸಿಎಂ ಆಗಿದ್ದಾಗಲೇ ಕಾಂತರಾಜ ಸಮಿತಿ ರಚಿಸಿ, ವರದಿ ಪಡೆದಿದ್ದರು. ನಾವು ಕೂಡ ಸದಾಶಿವ ಆಯೋಗದ ವರದಿ ವಿರೋಧಿಸುತ್ತೇವೆ, ಕಾರಣ ಅದು ಅವೈಜ್ಞಾನಿಕ ಎಂದು ಆಕ್ರೋಶ ಹೊರಹಾಕಿದರು.
2011ರ ಗಣತಿಯ ಅಂಕಿಅಂಶ ಹಾಗೂ ಸದಾಶಿವ ಆಯೋಗದ ಅಂಕಿಅಂಶ ನಮ್ಮ ಕಣ್ಣಮುಂದಿದೆ. ಒಳಮೀಸಲಾತಿ ಚರ್ಚೆ ಆಗಬೇಕೆಂಬ ಬಗ್ಗೆ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ಹಂತದಲ್ಲಿದೆ. ಕಾಂತರಾಜ ವರದಿ ಜಾರಿಗೆ ಸಿದ್ದರಾಮಯ್ಯ ಒಲವು ತೋರಿದ್ದಾರೋ? ಇಲ್ಲವೋ? ಯಾರಿಗೆ ಗೊತ್ತು. ಅವರ ಡಿಸಿಎಂ ಇದಕ್ಕೆ ಸಹಿ ಹಾಕಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿ ಆಗುತ್ತಿದೆ ಎಂದರು.
ಇನ್ನು ಸಿದ್ದರಾಮಯ್ಯ ಅವರ ಟ್ವಿಟ್ ಮೇಲೆ ನಮಗೆ ನಂಬಿಕೆಯಿಲ್ಲ, ಅವರು ಕಾಂತರಾಜ ವರದಿ ಜಾರಿಗೊಳಿಸಲಿ. ಸದನದೊಳಗೆ ಚರ್ಚೆಗೆ ತರಲಿ ಎಂದು ಅರವಿಂದ ಲಿಂಬಾವಳಿ ಆಗ್ರಹಿಸಿದರು.












Click it and Unblock the Notifications