ಅಮಿತ್ ಶಾ ಓರ್ವ ಗೂಂಡಾ, ರೌಡಿ.! ಯತೀಂದ್ರ ಸಿದ್ದರಾಮಯ್ಯ ತೀವ್ರ ವಾಗ್ದಾಳಿ
ಚಾಮರಾಜನಗರ, ಮಾರ್ಚ್, 28: ಕೇಂದ್ರ ಗೃಹ ಸಚಿವ ಅಮಿತ್ ಶಾ ಓರ್ವ ಗೂಂಡಾ, ರೌಡಿ ಎಂದು ಮಾಜಿ ಶಾಸಕ ಹಾಗೂ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಚಾಮರಾಜನಗರದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದಲ್ಲಿ ಲೋಕಸಭಾ ಚುನಾವಣೆ ಸಂಬಂಧ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಅಮಿತ್ ಶಾ ಓರ್ವ ಗುಂಡಾ, ರೌಡಿ. ಗುಜರಾತ್ನಲ್ಲಿ ನರಮೇದ ಮಾಡಿದ ಆರೋಪ ಹೊತ್ತಿದ್ದಾರೆ ಅವರು. ದೇಶದ ಉನ್ನತ ಸ್ಥಾನದಲ್ಲಿದ್ದು, ಇಂತಹವರನ್ನ ಮೋದಿಯವರು ತಮ್ಮ ಪಕ್ಕದಲ್ಲಿ ಕೂರಿಸಿಕೊಂಡಿದ್ದಾರೆ ಎಂದು ಕಿಡಿಕಾರಿದರು.

2 ಕೋಟಿ ಉದ್ಯೋಗ ಸೃಷ್ಠಿ ಅಂತ ಕೇಂದ್ರ ಸರ್ಕಾರ ಹೇಳಿತ್ತು. ಆದರೆ, ಕೆಲಸ ಎಲ್ಲಿ ಸಿಕ್ತು? ನಿರೋದ್ಯೋಗಿಗಳಿಗೆ ಉದ್ಯೋಗ ಸೃಷ್ಠಿ ಮಾಡೋದು ಕೇಂದ್ರ ಸರ್ಕಾರದವರು ನಮ್ಮ ಹೊಣೆ ಅಲ್ಲ ಅಂತಾ ಈಗ ಹೇಳ್ತಾರೆ. ಇನ್ನು ಕಪ್ಪು ಹಣ ವಾಪಸ್ಸು ತರುತ್ತೇವೆ ಅಂದಿದ್ದರು. ತಂದ್ರಾ? ಅಟ್ ಲೀಸ್ಟ್ ಸ್ವಿಸ್ ಬ್ಯಾಂಕ್ನಲ್ಲಿ ಯಾರದೆಲ್ಲಾ ಖಾತೆಯಿದೆ ಅಂತಾ ಪಟ್ಟಿ ಕೂಡ ರಿಲೀಸ್ ಮಾಡ್ಲಿಲ್ಲ. ಮತ್ತೊಂದೆಡೆ ಪೆಟ್ರೋಲ್, ಡೀಸೆಲ್ ದರ ಹೆಚ್ಚಿಗೆ ಮಾಡಿ ಬಡ ಜನರ ಹೊಟ್ಟೆ ಮೇಮೇ ಬರೆ ಎಳೆಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
400ಕ್ಕೂ ಹೆಚ್ಚು ಸ್ಥಾನ ಅಂತಾ ಹೇಳುತ್ತಾರೆ. 400ಕ್ಕೂ ಹೆಚ್ಚು ಸ್ಥಾನ ಬಂದ್ರೆ ಸಂವಿಧಾನ ಬದಲಾವಣೆ ಮಾಡೋದೆ ಇವರ ಹಿಡನ್ ಅಜೆಂಡಾ ಆಗಿದೆ. ದೇಶದ ಇತಿಹಾಸದಲ್ಲೇ ಪ್ರಜಾ ಪ್ರಭುತ್ವದ ಕತ್ತು ಹಿಸುಕುವ ಸರ್ಕಾರ ಅಂದ್ರೆ ಅದು ಮೋದಿ ಸರ್ಕಾರ ಎಂದು ತೀವ್ರ ವಾಗ್ದಾಳಿ ನಡೆಸಿದರು. ಇನ್ನು ಸಭೆಯಲ್ಲಿ ಸಚಿವರಾದ ಎಚ್.ವೆಂಕಟೇಶ್, ಎಚ್.ಸಿ.ಮಹಾದೇವಪ್ಪ, ಅಭ್ಯರ್ಥಿ ಸುನೀಲ್ ಬೋಸ್ ಸೇರಿದಂತೆ ಮತ್ತಿತರರು ಇದ್ದರು.
ಜಿ.ಬಿ.ವಿನಯ್ ಕುಮಾರ್ ಹೇಳಿದ್ದೇನು?: ಪಾಳೇಗಾರಿಕೆ, ಕುಟುಂಬ ರಾಜಕಾರಣದ ವಿರುದ್ಧ ಹೋರಾಟ ನನ್ನದು. ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರೇ ಹೇಳಿರುವಂತೆ ಒಲ್ಲದ ಮನಸ್ಸಿನ ಟಿಕೆಟ್ ಸಿಕ್ಕಿದೆ. ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಬದ್ದರಾಗಿ ಚುನಾವಣೆ ಎದುರಿಸುತ್ತೇವೆ ಎಂದಿರುವ ಸಚಿವರು ನನಗೆ ಟಿಕೆಟ್ ಕೊಡಿಸಲಿ ಎಂದು ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್ ಔಟ್ ರೀಚ್ ವಿಭಾಗದ ರಾಜ್ಯ ಉಪಾಧ್ಯಕ್ಷ ಜಿ.ಬಿ.ವಿನಯ್ ಕುಮಾರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಲೂ ಕಾಲ ಮಿಂಚಿಲ್ಲ. ನನಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದರೆ ನಾನು ಒಂದೂವರೆಯಿಂದ ಎರಡು ಲಕ್ಷಗಳ ಮತಗಳ ಅಂತರದಲ್ಲಿ ಗೆದ್ದು ಬರುತ್ತೇನೆ. ಹಿಂದುಳಿದ ನಾಯಕನನ್ನು ಬೆಳೆಸಿದ ಕೀರ್ತಿ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಸಲ್ಲುತ್ತದೆ. ಕೆಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಬದಲಾವಣೆ ಮಾಡಿರುವ ನಿರ್ದರ್ಶನ ಇವೆ. ಈಗಲೂ ಹೈಕಮಾಂಡ್ ಮನಸ್ಸು ಮಾಡಿದರೆ ನನಗೆ ಟಿಕೆಟ್ ನೀಡಬಹುದು ಎಂದು ತಿಳಿಸಿದರು.
ನಾನು ಇನ್ನೊಬ್ಬರನ್ನು ಸೋಲಿಸಲು ಸಲುವಾಗಿ ಪಕ್ಷೇತರನಾಗಿ ಕಣಕ್ಕಿಳಿಯುವುದಿಲ್ಲ. ನಾನು ಗೆಲ್ಲಬೇಕೆಂದು ಸ್ಪರ್ಧೆ ಮಾಡುತ್ತೇನೆ. ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎಲ್ಲಾ ಕ್ಷೇತ್ರಗಳಲ್ಲಿಯೂ ಸರ್ವೆ ನಡೆಸುತ್ತಿದ್ದೇನೆ. ಪಾದಯಾತ್ರೆಯ ವೇಳೆ 620ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಪಾದಯಾತ್ರೆ ಮಾಡಿದ್ದೇನೆ. ಟಿಕೆಟ್ ಕೈ ತಪ್ಪಿದ ಬಳಿಕ ಮತ್ತೆ ಗ್ರಾಮಗಳಿಗೆ ಹೋಗುತ್ತಿದ್ದೇನೆ.
ಜನರು ಪ್ರೀತಿ, ವಿಶ್ವಾಸ ತೋರುತ್ತಿದ್ದಾರೆ. 60ರಿಂದ 65 ಹಳ್ಳಿಗಳಿಗೆ ಹೋಗಿದ್ದೇನೆ. ಎಲ್ಲರೂ ನಿಮಗೆ ಅನ್ಯಾಯವಾಗಿದೆ ಎಂದೇ ಹೇಳುತ್ತಿದ್ದಾರೆ ಎಂದರು. ಶೇಕಡಾ 90ರಷ್ಟು ಮಂದಿ ಪಕ್ಷೇತರರಾಗಿ ಕಣಕ್ಕಿಳಿಯುವಂತೆ ಒತ್ತಾಯ ಮಾಡುತ್ತಿದ್ದಾರೆ. ನಾನು ಇನ್ನೂ ನಿರ್ಧಾರ ಮಾಡಿಲ್ಲ.
ಸಚಿವ ಮಲ್ಲಿಕಾರ್ಜುನ್ ಅವರೇ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಹೇಳಿರುವಂತೆ ವಿನಯ್ ಕುಮಾರ್ ದಾವಣಗೆರೆ ಅವರಲ್ಲ ಎಂದು ಟಿಕೆಟ್ ಬೇಡ ಎಂದು ವರಿಷ್ಠರಿಗೆ ಹೇಳಿದ್ದೇನೆ. ನಾವು ಟಿಕೆಟ್ ಕೇಳಿರಲಿಲ್ಲ. ಆದರೂ ಹೈಕಮಾಂಡ್ ಸರ್ವೆ ಆಧರಿಸಿ ನೀಡಿದೆ. ನೀವು ಸ್ಪರ್ಧೆ ಮಾಡಬೇಕೆಂದು ಹೇಳಿದ ಕಾರಣಕ್ಕೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಕಣಕ್ಕಿಳಿಸಲಾಗಿದೆ ಎಂದಿದ್ದಾರೆ.
ಆದರೆ ಸಿಇಸಿ ಸಭೆಯ ಪ್ಯಾನಲ್ವರೆಗೂ ನನ್ನ ಹೆಸರು ಹೋಗಿದೆ. ಅಲ್ಲಿಯೂ ಚರ್ಚೆಯಾಗಿದೆ. ಶಾಮನೂರು ಶಿವಶಂಕರಪ್ಪನವರ ಕುಟುಂಬಕ್ಕೆ ಟಿಕೆಟ್ ಬೇಡ ಎಂದರೆ ನಿನಗೆ ಟಿಕೆಟ್ ಎಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ ನನಗೆ ಹೇಳಿದ್ದರು. ಮಲ್ಲಿಕಾರ್ಜುನ್ ಅವರು ಹೇಳಿದಂತೆ ಟಿಕೆಟ್ ಬೇಡ ಎಂದಿದ್ದರೆ ಹಿಂದುಳಿದ ವರ್ಗದ ಯುವ ನಾಯಕನಾದ ನನಗೆ ಕೊಡಿಸಬಹುದಿತ್ತು ಎಂದು ಹೇಳಿದರು.
ಕೇವಲ ಒಂದು ವರ್ಷದಲ್ಲಿ ಜಿಲ್ಲೆಯ ಪ್ರತಿಯೊಬ್ಬರಿಗೂ ವಿನಯ್ ಕುಮಾರ್ ಯಾರು ಎಂಬುದು ಗೊತ್ತಾಗಿದೆ. ಅತ್ಯಂತ ಅಲ್ಪಾವಧಿಯಲ್ಲಿ ಕಾಂಗ್ರೆಸ್ ಹಾಗೂ ಜಿಲ್ಲೆಯ ಜನರ ಮನೆ ಮಾತಾಗುವಂತಹ ಕೆಲಸ ಮಾಡಿದ್ದೇನೆ. ರಾಜಕಾರಣದಲ್ಲಿ ವಿನಯ್ ಕುಮಾರ್ ಹೆಸರು ಚಿರಪರಿಚಿತವಾಗಿದೆ ಎಂದರು.
ನಾನು ಹುಟ್ಟಿದ್ದು, ಬೆಳೆದಿದ್ದು ದಾವಣಗೆರೆ ತಾಲೂಕಿನ ಕಕ್ಕರಗೊಳ್ಳದಲ್ಲಿ. ಬಾಪೂಜಿ ಆಸ್ಪತ್ರೆಯಲ್ಲಿಯೇ ಜನಿಸಿದ್ದು. ಸಾವಿರಾರು ಜನರು ರಕ್ತ ಸಂಬಂಧಿಗಳೂ ಇದ್ದಾರೆ. ತಂದೆ-ತಾಯಿ ಹಾಗೂ ಸಂಬಂಧಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಶಾರದಾ ವಿದ್ಯಾಪೀಠದಲ್ಲಿ ಒಂದರಿಂದ ನಾಲ್ಕನೇ ತರಗತಿಯವರೆಗೆ ಅಭ್ಯಾಸ ಮಾಡಿದ್ದೇನೆ. ನಿಂಗಪ್ಪ ಮೇಸ್ಟ್ರು ಇದ್ದರು. ಸೆೇಟ್ ಫಾಲ್ಸ್ ಸ್ಕೂಲ್ನಲ್ಲಿ ನವೋದಯ ಪರೀಕ್ಷೆ ಬರೆದು ಪಾಸ್ ಆಗಿದ್ದೆ. ಉನ್ನತ ವ್ಯಾಸಂಗಕ್ಕಾಗಿ ಬೆಂಗಳೂರಿಗೆ ಹೋಗಿ ಬಿಎಸ್ಸಿ ಸೇರಿಕೊಂಡೆ ಎಂದು ವಿವರಿಸಿದರು.
ಸಚಿವ ಮಲ್ಲಿಕಾರ್ಜುನ್ ಅವರು ಟಿಕೆಟ್ ನೀಡಿಕೆ ವಿಚಾರ, ನಾನು ದಾವಣಗೆರೆಯವನಲ್ಲ ಎಂಬ ಕುರಿತಂತೆ ಯಾಕೆ ಹೀಗೆ ಹೇಳಿದ್ರು ಎಂದು ಗೊತ್ತಿಲ್ಲ. ದೆಹಲಿ ಪ್ಯಾನೆಲ್ ತನಕ ಹೆಸರು ಹೋಗಿದ್ದು ನನ್ನ ಸಾಮರ್ಥ್ಯದಿಂದ. ಕಾಂಗ್ರೆಸ್ ಔಟ್ರೀಚ್ ಯುವ ಘಟಕದ ರಾಜ್ಯ ಉಪಾಧ್ಯಕ್ಷನೂ ಹೌದು. ಕಳೆದ ಕೆಲ ದಿನಗಳ ಹಿಂದೆ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಗೆ ನನಗೆ ಆಹ್ವಾನ ಇರಲಿಲ್ಲ. ಯಾರೂ ಫೋನ್ ಮಾಡಿಲ್ಲ, ಕರೆದಿಲ್ಲ. ಹಾಗಾಗಿ ಹೋಗಿಲ್ಲ ಎಂದರು.
ಬೆಳವಣಿಗೆ ತೋರಿಸಿದಾಗ ನಮ್ಮವರಲ್ಲ ಎಂದು ದೂರ ಇಡಬೇಕು ಎಂದು ಸೃಷ್ಟಿ ಮಾಡುವಂಥ ಕೆಲಸ ಇದಾಗಿದೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ದಾವಣಗೆರೆಯವರಲ್ಲ ಎಂದಾಗ ಜಾತಿ ಎತ್ತಿ ಮಾತನಾಡಲು ಆಗಲ್ಲ. ಇದು ನನಗಷ್ಟೇ ಅಲ್ಲ, ಸಮಾಜಕ್ಕೆ ಆದ ಅವಮಾನ. ಇದು ತುಂಬಾ ಬೇಸರ ತಂದಿದೆ ಎಂದು ವಿನಯ್ ಕುಮಾರ್ ಅಸಮಾಧಾನ ಹೊರಹಾಕಿದರು.
ಸಿಎಂ ಸಿದ್ದರಾಮಯ್ಯ ಅವರಿಗೆ ಧನ್ಯವಾದ ಹೇಳುತ್ತೇನೆ. ಸಂಬಂಧಿಕರು, ಹಿತೈಷಿಗಳು ಸಿದ್ದರಾಮಯ್ಯ ಅವರ ಬಳಿ ಕಳೆದ ಏಳೆಂಟು ತಿಂಗಳ ಹಿಂದೆ ಕೇಳಿಕೊಂಡಿದ್ದರು. ಸಿದ್ದರಾಮಯ್ಯ ಸೂಚನೆ ಕೊಟ್ಟ ಬಳಿಕ ಅವರು ಬಂದು ನನಗೆ ಹೇಳಿದರು. ಆ ನಂತರವೇ ನಾನು ಹೆಚ್ಚಾಗಿ ರಾಜಕಾರಣದಲ್ಲಿ ತೊಡಗಿಸಿಕೊಂಡೆ. ಸಿದ್ದರಾಮಯ್ಯ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನನ್ನ ಶಕ್ತಿ. ನನ್ನ ಪರವಾಗಿ ಹೇಳಿದ್ದಾರೆ, ಮಾತನಾಡಿದ್ದಾರೆ. ಸಿಎಂಗೂ ಇಂಟಲಿಜೆನ್ಸಿ ಮಾಹಿತಿ ಇರುತ್ತದೆ. ದೆಹಲಿಯಲ್ಲಿಯೂ ನನ್ನ ಹೆಸರು ಹೇಳಿದ್ದಾರೆ. ಸಿದ್ದರಾಮಯ್ಯರ ಆಶೀರ್ವಾದ ಇಲ್ಲದಿದ್ದರೆ ರಾಜಕಾರಣದಲ್ಲಿ ಇಷ್ಟು ಹೆಸರು ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಅಹಿಂದ ಒಕ್ಕೂಟದ ಅಧ್ಯಕ್ಷ ದಳವಾಯಿ ಹೇಮಂತ್, ಕಾಡುಗೊಲ್ಲ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ರಂಗಸ್ವಾಮಿ, ಹೆಚ್.ಸಿ.ಮಲ್ಲಪ್ಪ, ಶರತ್ ಕುಮಾರ್, ಪುರಂದರ ಲೋಕಿಕೆರೆ, ಕೆ.ಹೆಚ್.ಮಂಜುನಾಥ, ರವಿಕುಮಾರ್ ಸೇರಿದಂತೆ ಮತ್ತಿತರರು ಹಾಜರಿದ್ದರು.












Click it and Unblock the Notifications